ಬೆಂಗಳೂರು: ಬಿಗ್ಬಾಸ್ ಕನ್ನಡ 12ನೇ ಆವೃತ್ತಿಯ ರಿಯಾಲಿಟಿ ಶೋಗೆ ದೊಡ್ಡ ಸಂಕಷ್ಟ ಎದುರಾಗಿದೆ. ಬಿಗ್ ಬಾಸ್ ಕನ್ನಡ ಸೀಸನ್ 12 ಶೋ ಶುರುವಾಗಿ ಒಂದು ವಾರವಷ್ಟೇ ಮುಗಿದು, ಎರಡನೇ ವಾರಕ್ಕೆ ಕಾಲಿಟ್ಟಿದ್ದು ಅಷ್ಟರಲ್ಲಾಗಲೇ ಬಿಗ್ ಬಾಸ್ ಕಾರ್ಯಕ್ರಮ ನಡೆಯುತ್ತಿದ್ದ ಜಾಲಿವುಡ್ ಸ್ಟುಡಿಯೋಗೆ ಬೀಗ ಹಾಕಲಾಗಿದೆ.
ರಾಮನಗರ ತಹಶೀಲ್ದರ್ ತೇಜಸ್ವಿನಿ ಸಮ್ಮುಖದಲ್ಲಿ ಅಧಿಕಾರಿಗಳು ತೆರಳಿ ಬೀಗ ಹಾಕಿದ್ದಾರೆ. ಅಲ್ಲದೆ ಬಿಗ್ ಬಾಸ್ ಮನೆಯಿಂದ ಸ್ಪರ್ಧಿಗಳನ್ನು ಹೊರಗೆ ಕಳುಹಿಸಲು 7.30ರವರೆಗೆ ಸಮಯ ನೀಡಲಾಗಿತ್ತು. ಅದರಂತೆ ಬಿಗ್ ಬಾಸ್ ಸ್ಪರ್ಧಿಗಳು ಮನೆಯಿಂದ ಹೊರಬಂದಿದ್ದು ಸದ್ಯಕ್ಕೆ ಶೋ ಸ್ಥಗಿತಗೊಳಿಸಲಾಗಿದೆ. ಸದ್ಯ ಬಿಗ್ ಬಾಸ್ ಸ್ಪರ್ಧಿಗಳನ್ನು ಬಿಡದಿಯಲ್ಲಿರುವ ಈಗಲ್ ಟನ್ ರೆಸಾರ್ಟ್ ಗೆ ಸ್ಥಳಾಂತರಿಸಲಾಗಿದೆ. ಇನ್ನು ಕಾನೂನು ಹೋರಾಟಕ್ಕೆ ಮಾನೇಜ್ಮೆಂಟ್ ಮುಂದಾಗಿದ್ದು ಕೋರ್ಟ್ ಆದೇಶದ ನಂತರ ಶೋ ಕುರಿತು ತೀರ್ಮಾನಿಸಲಾಗುತ್ತದೆ.
ಪರಿಸರ ನಿಯಮಗಳ ಗಂಭೀರ ಉಲ್ಲಂಘನೆಯಾಗಿದೆ. ತಾಜ್ಯ ನೀರು ಸಂಸ್ಕರಣ ಘಟಕ ನಿರ್ಮಿಸಲಿರಲಿಲ್ಲ. ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಅನುಮತಿ ಪಡೆಯದ ಹಿನ್ನೆಲೆಯಲ್ಲಿ ನೋಟಿಸ್ ನೀಡಲಾಗಿತ್ತು. ಇದೀಗ ಅಧಿಕಾರಿಗಳು ಜಾಲಿವುಡ್ ಸ್ಟುಡಿಯೋಸ್ ಆ್ಯಂಡ್ ಎಂಟರ್ಟೈನ್ಮೆಂಟ್ ಪ್ರೈವೆಟ್ ಲಿಮಿಡೆಟ್ ಕಂಪನಿಗೆ ಬೀಗ ಹಾಕಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ 17 ಮಂದಿ ಸ್ಪರ್ಧಿಗಳಿದ್ದು ನೂರಾರು ತಂತ್ರಜ್ಞರು ಈ ರಿಯಾಲಿಟಿ ಶೋಗಾಗಿ ಕೆಲಸ ಮಾಡುತ್ತಿದ್ದಾರೆ. ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ನೀಡಿದ ನೋಟಿಸ್ ಅನ್ನು ಜಾಲಿವುಡ್ ಮಾನೇಜ್ಮೆಂಟ್ ಸ್ವೀಕರಿಸಿದೆ.