ಬೆಂಗಳೂರು: ಮಕ್ಕಳಿಗೆ ಕನ್ನಡದಲ್ಲಿ ಬೋಧಿಸಲು ಕನ್ನಡ ಅಭಿವೃದ್ಧಿ ಪ್ರಾಧಿಕಾರ (ಕೆಡಿಎ) ಮತ್ತು ಉರ್ದು ಅಕಾಡೆಮಿಯ ಸಹಯೋಗದೊಂದಿಗೆ 180 ಮದರಸಾ ಶಿಕ್ಷಕರಿಗೆ ತರಬೇತಿ ನೀಡಲು ರಾಜ್ಯ ಅಲ್ಪಸಂಖ್ಯಾತ ಆಯೋಗ ಮುಂದಾಗಿದೆ.
ಕೆಡಿಎ ಅಧ್ಯಕ್ಷ ಪುರುಷೋತ್ತಮ್ ಬಿಳಿಮಲೆ ಅವರು ಮಾತನಾಡಿ, ಕನ್ನಡ ಕಲಿಯಲು ಮತ್ತು ಕನ್ನಡ ಭಾಷೆಯನ್ನು ತಮ್ಮ ದೈನಂದಿನ ಜೀವನದಲ್ಲಿ ಬಳಸಲು ಆಸಕ್ತಿ ಹೊಂದಿರುವ ಜನರಿಗಾಗಿ ಕೆಡಿಎ ಈ ಪಠ್ಯಕ್ರಮವನ್ನು ವಿನ್ಯಾಸಗೊಳಿಸಿದೆ. ಅಲ್ಪಸಂಖ್ಯಾತರ ಆಯೋಗ ಶಿಕ್ಷಕರಿಗೆ ಹಣಕಾಸು ಒದಗಿಸುತ್ತದೆ, ಕೆಡಿಎ ಜಿಲ್ಲಾ ಘಟಕಗಳಲ್ಲಿ ಶಿಕ್ಷಕರನ್ನು ನಿಯೋಜಿಸುತ್ತದೆ ಎಂದು ಹೇಳಿದ್ದಾರೆ.
ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷ ಮತ್ತು ನಿವೃತ್ತ ಐಪಿಎಸ್ ಅಧಿಕಾರಿ ನಿಸಾರ್ ಅಹ್ಮದ್ ಅವರು ಮಾತನಾಡಿ, ಪಠ್ಯಕ್ರಮವನ್ನು ಕನ್ನಡಕ್ಕೆ ಭಾಷಾಂತರಿಸಲು, ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಕನ್ನಡವನ್ನು ಕಲಿಯಲು, ಕನ್ನಡ ಭಾಷೆಯನ್ನು ತಮ್ಮ ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳಲು ಉರ್ದು ಅಕಾಡೆಮಿಗೆ ಜವಾಬ್ದಾರಿ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಮೊದಲಿಗೆ ಎಲ್ಲಾ ಕೇಂದ್ರಗಳಲ್ಲಿ ಈ ಉಪಕ್ರಮವನ್ನು ಅಳವಡಿಸಿಕೊಳ್ಳಲಾಗುತ್ತದೆ. ನಂತರ ದಾಖಲಾತಿಯನ್ನು ಅವಲಂಬಿಸಿ ಇತರೆ ಭಾಗಗಳಲ್ಲೂ ಜಾರಿಗೆ ತರಲಾಗುವುದು ಎಂದು ಹೇಳಿದ್ದಾರೆ.
ಕಾರ್ಯಕ್ರಮವು ನವೆಂಬರ್ 1 ರಂದು ಪ್ರಾರಂಭವಾಗಲಿದ್ದು, ಪ್ರತಿಕ್ರಿಯೆಯನ್ನು ಅವಲಂಬಿಸಿ, ಅಲ್ಪಸಂಖ್ಯಾತರ ನಿರ್ದೇಶನಾಲಯದ ಅಡಿಯಲ್ಲಿ ಬರುವ ರಾಜ್ಯಾದ್ಯಂತ 2,000 ಕ್ಕೂ ಹೆಚ್ಚು ಸಂಸ್ಥೆಗಳಲ್ಲಿ ವಿಸ್ತರಿಸಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈ ನಡುವೆ ಈ ಉಪಕ್ರಮವನ್ನು ಬೆಂಗಳೂರಿನ ಜಾಮಿಯಾ ಮಸೀದಿಯ ಮುಖ್ಯ ಇಮಾಮ್ ಮಕ್ಸೂದ್ ಇಮ್ರಾನ್ ರಶಾದಿ ಅವರು ಶ್ಲಾಘಿಸಿದ್ದು, ಸಮುದಾಯದ ಸದಸ್ಯರು ರಾಜ್ಯ ಭಾಷೆಯನ್ನು ಕಲಿತರೆ ಅವರಿಗೆ ಅನುಕೂಲವಾಗುತ್ತದೆ. ನಾವು ಕನ್ನಡ ಭಾಷೆಯ ಬಗ್ಗೆ ಜಾಗೃತಿ ಮೂಡಿಸುತ್ತೇವೆ ಎಂದು ಹೇಳಿದ್ದಾರೆ.
ಕೆಡಿಎಯ ಹಿರಿಯ ಅಧಿಕಾರಿಯೊಬ್ಬರು ಮಾತನಾಡಿ, ಇಲ್ಲಿಯವರೆಗೆ ಉತ್ತರ ಭಾರತದ ಕನ್ನಡೇತರರಲ್ಲಿ ಭಾಷೆಯನ್ನು ಉತ್ತೇಜಿಸಲು ಕೆಡಿಎ ಕಾರ್ಯಕ್ರಮಗಳನ್ನು ಜಾರಿಗೆ ತಂದಿತ್ತು. ಉರ್ದು ಅಕಾಡೆಮಿ ಅನುವಾದಗಳನ್ನು ಪೂರ್ಣಗೊಳಿಸಿದ ನಂತರ, ಕನ್ನಡವನ್ನು ಓದಲು ಅಥವಾ ಬರೆಯಲು ತಿಳಿದಿಲ್ಲದ ಹೆಚ್ಚಿನ ಉರ್ದು ಭಾಷಿಕರಿಗೆ ಭಾಷೆ ಮತ್ತು ಅದರ ಮಹತ್ವವನ್ನು ತಿಳಿದುಕೊಳ್ಳುವ ಅವಕಾಶ ಸಿಗುತ್ತದೆ ಎಂದು ಹೇಳಿದ್ದಾರೆ.