ಬೆಂಗಳೂರು: ಸಾಮಾಜಿಕ ನ್ಯಾಯವನ್ನು ಖಚಿತಪಡಿಸುವುದು ರಾಹುಲ್ ಗಾಂಧಿ ಅವರ ಧ್ಯೇಯವಾಗಿದ್ದು, ಇದಕ್ಕಾಗಿ ಉನ್ನತ ಹುದ್ದೆಯನ್ನು ತ್ಯಾಗ ಮಾಡಲು ಸಿದ್ಧರಿದ್ದಾರೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಇಂಡಿಯಾ ಮೈತ್ರಿಕೂಡ ಬಹುಮತ ಪಡೆದಿದ್ದೇ ಆದರೆ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ದೇಶದ ಪ್ರಧಾನಮಂತ್ರಿಯಾಗಬಹುದು ಎಂದು ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ಪರಿಶಿಷ್ಟ ಜಾತಿ ವಿಭಾಗದ ಅಧ್ಯಕ್ಷ ರಾಜೇಂದ್ರ ಪಾಲ್ ಗೌತಮ್ ಅವರು ಬುಧವಾರ ಹೇಳಿದ್ದಾರೆ.
ಗೌತಮ್ ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ನಡೆಸಿದ ತಮ್ಮ ಇಲಾಖೆಯ ಪದಾಧಿಕಾರಿಗಳ ಸಭೆಯ ಬಳಿಕ ರಾಜೇಂದ್ರ ಪಾಲ್ ಗೌತಮ್ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆಗೆ ಮಾತನಾಡಿದರು.
ಮಲ್ಲಿಕಾರ್ಜುನ ಖರ್ಗೆಯವರು ದೇಶದ ಪ್ರಧಾನಮಂತ್ರಿಯಾಗುವ ಎಲ್ಲಾ ಸಾಧ್ಯತೆಗಳಿವೆ. ಅದಕ್ಕಾಗಿಯೇ ನಾವು ಎಸ್ಸಿಯನ್ನು ಬಲಪಡಿಸುತ್ತಿದ್ದೇವೆ. ರಾಹುಲ್ ಶುದ್ಧ ಹೃದಯದ ವ್ಯಕ್ತಿ, ತ್ಯಾಗದ ಕುಟುಂಬಕ್ಕೆ ಸೇರಿದ ಅವರು, ಪ್ರಧಾನಮಂತ್ರಿ ಹುದ್ದೆಯನ್ನೂ ತ್ಯಾಗ ಮಾಡಲು ಸಿದ್ಧರಿದ್ದಾರೆ. ಏಕೆಂದರೆ ರಾಹುಲ್ ಅವರ ಧ್ಯೇಯ ಸಾಮಾಜಿಕ ನ್ಯಾಯ ಒದಗಿಸುವುದಾಗಿದೆ. ಕರ್ನಾಟಕದಲ್ಲೂ ಕೂಡ ಸಮಯ ಬಂದರೆ ದಲಿತರೊಬ್ಬರು ಮುಖ್ಯಮಂತ್ರಿಯಾಗುತ್ತಾರೆಂದು ಹೇಳಿದ್ದಾರೆ.
ಏತನ್ಮಧ್ಯೆ ಗೌತಮ್ ಅವರು, ಕೇಂದ್ರ ಸರ್ಕಾರ ಮತ್ತು ಕಾಂಗ್ರೆಸ್ ಆಡಳಿತದ ರಾಜ್ಯಗಳು ಖಾಸಗಿ ವಲಯದಲ್ಲಿ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿಯನ್ನು ಜಾರಿಗೆ ತರಬೇಕೆಂದು ಒತ್ತಾಯಿಸಿದರು.
ಬಿಜೆಪಿ ಅಧಿಕಾರಕ್ಕೆ ಬಂದ ನಂತರ, ಕೇಂದ್ರವು ಗ್ರೂಪ್ -4 ಉದ್ಯೋಗಗಳನ್ನು ಹೊರಗುತ್ತಿಗೆ ನೀಡಿದೆ ಮತ್ತು ಗ್ರೂಪ್ 1, 2 ಮತ್ತು 3 ಉದ್ಯೋಗಗಳಲ್ಲಿ ಶೇ.50 ಅನ್ನು ಕಡಿತಗೊಳಿಸಿದೆ, ಇದರಲ್ಲಿ ಶೇ.50 ರಷ್ಟು ಹುದ್ದೆ ಹೊರಗುತ್ತಿಗೆಯಾಗಿದೆ, ಇದು ಉದ್ಯೋಗ ಭದ್ರತೆಯನ್ನು ಅಂತ್ಯಗೊಳಿಸಿದೆ. ಈಗಾಗಲೇ ಎಲ್ಲಾ ಕಾಂಗ್ರೆಸ್ ಆಡಳಿತದ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದೇನೆ. ಈ ನಿಟ್ಟಿನಲ್ಲಿ ಕರ್ನಾಟಕ ಸಿಎಂ ಸಿದ್ದರಾಮಯ್ಯ ಅವರನ್ನೂ ಭೇಟಿ ಮಾಡುತ್ತೇನೆಂದು ತಿಳಿಸಿದರು,
2006 ರಲ್ಲಿ ಯುಪಿಎ ಸರ್ಕಾರವು ರಾಜ್ಯ ಸರ್ಕಾರಗಳು ಖಾಸಗಿ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಮೀಸಲಾತಿಯನ್ನು ಕಡ್ಡಾಯಗೊಳಿಸಲು ಸಂವಿಧಾನಕ್ಕೆ 93 ನೇ ತಿದ್ದುಪಡಿಯನ್ನು ತಂದಿತು. ವಿಶೇಷ ನಿಬಂಧನೆಗಳನ್ನು ಮಾಡಲು 15ನೇ ವಿಧಿಗೆ ಷರತ್ತು 5 ಅನ್ನು ಸೇರ್ಪಡೆಗೊಳಿಸಿತು. 2014 ರಲ್ಲಿ ಸುಪ್ರೀಂ ಕೋರ್ಟ್ ಇದು ಕಾನೂನುಬದ್ಧವಾಗಿದೆ ಎಂದು ಘೋಷಿಸಿದರೂ, ಮೋದಿ ಸರ್ಕಾರ ಅದನ್ನು ಜಾರಿಗೆ ತರಲಿಲ್ಲ ಎಂದು ಕಿಡಿಕಾರಿದರು.
ಸಿದ್ದರಾಮಯ್ಯ ಸರ್ಕಾರವು ಎಸ್ಸಿಪಿ/ಟಿಎಸ್ಪಿ ಅನುದಾನಗಳನ್ನು ಬೇರೆಡೆಗೆ ತಿರುಗಿಸುತ್ತಿದೆ ಎಂಬ ಆರೋಪ ಕುರಿತು ಮಾತನಾಡಿ, ನಮ್ಮ ಇಲಾಖೆಯು ಅದರ ಮೇಲೆ ನಿಗಾ ಇಡುತ್ತದೆ ಎಂದು ಹೇಳಿದರು. ಏತನ್ಮಧ್ಯೆ, ಕರ್ನಾಟಕದ ಒಳಮೀಸಲಾತಿ ಅನುಷ್ಠಾನವನ್ನು ಗೌತಮ್ ಅವರು ಸಮರ್ಥಿಸಿಕೊಂಡರು.
ಸರ್ಕಾರ ತನ್ನ ಕೈಲಾದಷ್ಟು ಮಾಡಿದೆ, ಮೀಸಲಾತಿಯನ್ನು ಹಂಚುವುದು ಕಷ್ಟಕರವಾದ ಕೆಲಸ. ಹಂಚಿಕೆಯಲ್ಲಿ ಅಲೆಮಾರಿ ಎಸ್ಸಿಗಳಿಗೆ ಅನ್ಯಾಯವಾದರೆ ಭವಿಷ್ಯದಲ್ಲಿ ಕೆಲವು ಮಾರ್ಪಾಡುಗಳಾಗಬಹುದು ಎಂದರು.