ಬೆಂಗಳೂರು: ರಸ್ತೆ ಅಪಘಾತ ಸಂತ್ರಸ್ತರಿಗೆ ಹೆಚ್ಚುವರಿಯಾಗಿ 1 ಲಕ್ಷ ರೂ. ಆರ್ಥಿಕ ನೆರವು ನೀಡಲು ಕರ್ನಾಟಕ ಸರ್ಕಾರ ಅನುಮೋದನೆ ನೀಡಿದೆ. ಇದು ಕೇಂದ್ರದ ರಸ್ತೆ ಅಪಘಾತ ಸಂತ್ರಸ್ತರಿಗೆ ನಗದು ರಹಿತ ಚಿಕಿತ್ಸಾ ಯೋಜನೆ(ಸಿಟಿಆರ್ಎವಿ) 2025 ರ ಅಡಿಯಲ್ಲಿ ಅಸ್ತಿತ್ವದಲ್ಲಿರುವ 1.5 ಲಕ್ಷ ರೂ. ನಗದು ರಹಿತ ಚಿಕಿತ್ಸಾ ಪ್ರಯೋಜನಕ್ಕೆ ಪೂರಕವಾಗಿದೆ.
ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್(ಎಸ್ಎಎಸ್ಟಿ) ಪ್ರಸ್ತಾವನೆಯನ್ನು ಅನುಸರಿಸಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಅಪಘಾತ ಸಂಬಂಧಿತ ಸಾವುನೋವುಗಳಲ್ಲಿ ಕರ್ನಾಟಕ ದೇಶದಲ್ಲಿ ಐದನೇ ಸ್ಥಾನದಲ್ಲಿದ್ದು, ರಾಜ್ಯದಲ್ಲಿ, ಪ್ರತಿ ವರ್ಷ ಸುಮಾರು 40,000 ಅಪಘಾತಗಳು ದಾಖಲಾಗುತ್ತವೆ. ಇದರ ಪರಿಣಾಮವಾಗಿ ಪ್ರತಿ ವರ್ಷ ಸುಮಾರು 11,000 ಸಾವುಗಳು ಸಂಭವಿಸುತ್ತಿವೆ ಎಂದು ಎಸ್ಎಎಸ್ಟಿ ಹೇಳಿದೆ.
ಅಧಿಸೂಚನೆಯ ಪ್ರಕಾರ, ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ(MoRTH), 1988 ರ ಮೋಟಾರು ವಾಹನ ಕಾಯ್ದೆಯ ಸೆಕ್ಷನ್ 162 ರ ಅಡಿಯಲ್ಲಿ, CTRAV ಯೋಜನೆ 2025 ಅನ್ನು ಪ್ರಕಟಿಸಿದೆ.
ಈ ಯೋಜನೆಯಡಿಯಲ್ಲಿ, "ಗೋಲ್ಡನ್ ಅವರ್" (ಮೊದಲ ಒಂದು ಗಂಟೆ) ಸಮಯದಲ್ಲಿ ಮತ್ತು ಅಪಘಾತದ ನಂತರ ಏಳು ದಿನಗಳವರೆಗೆ ಪ್ರತಿ ವ್ಯಕ್ತಿಗೆ 1.5 ಲಕ್ಷ ರೂ.ಗಳ ಮಿತಿಯವರೆಗೆ ಉಚಿತ ತುರ್ತು ವೈದ್ಯಕೀಯ ಚಿಕಿತ್ಸೆ ನೀಡಲಾಗುತ್ತದೆ.
"CTRAV ಅಡಿಯಲ್ಲಿ 1.5 ಲಕ್ಷ ರೂ. ನೆರವು ಸಾಮಾನ್ಯವಾಗಿ ಸಾಕಾಗುತ್ತದೆ. ಆದರೆ ಏಳು ದಿನಗಳನ್ನು ಮೀರಿದ ಚಿಕಿತ್ಸೆ ಅಗತ್ಯವಿರುವ ಬಹು ಅಂಗಾಂಗ ವೈಫಲ್ಯ, ವೆಂಟಿಲೇಟರ್ ಬೆಂಬಲ ಅಥವಾ ನಿರ್ಣಾಯಕ ಆರೈಕೆಯಂತಹ ವಿಶೇಷ ಪ್ರಕರಣಗಳಲ್ಲಿ ಹೆಚ್ಚಿನ ನೆರವಿನ ಅಗತ್ಯ ಇದೆ" ಎಂದು ಅದು ಹೇಳಿದೆ.
"ಪ್ರಸ್ತಾವನೆಯಲ್ಲಿ ವಿವರಿಸಿದ ಅಂಶಗಳನ್ನು ಗಮನದಲ್ಲಿಟ್ಟುಕೊಂಡು, ರಾಜ್ಯ ಸರ್ಕಾರವು ಅಸ್ತಿತ್ವದಲ್ಲಿರುವ ಅಪಘಾತ ಸಂತ್ರಸ್ತ ಯೋಜನೆಯ ಮಾರ್ಪಾಡುಗಳನ್ನು ಅನುಮೋದಿಸುತ್ತದೆ. ಇದರಿಂದಾಗಿ ಭಾರತ ಸರ್ಕಾರದ CTRAV 2025 ಯೋಜನೆಯ ಜೊತೆಗೆ, ರಾಜ್ಯ ಸರ್ಕಾರವು ಪ್ರತಿ ವ್ಯಕ್ತಿಗೆ ರೂ. 1 ಲಕ್ಷ ಟಾಪ್-ಅಪ್ ಅನ್ನು ಒದಗಿಸುತ್ತದೆ" ಎಂದು ಸೆಪ್ಟೆಂಬರ್ 15 ರ ಆದೇಶದಲ್ಲಿ ತಿಳಿಸಲಾಗಿದೆ.
ಪರಿಷ್ಕೃತ ರಾಜ್ಯ ಯೋಜನೆಯಡಿಯಲ್ಲಿ, ವೆಂಟಿಲೇಟರ್ ಬೆಂಬಲದಲ್ಲಿರುವ ರೋಗಿಗಳು, ಬಹು-ಅಂಗಾಂಗ ವೈಫಲ್ಯ ಹೊಂದಿರುವವರು ಅಥವಾ CTRAVನ ಏಳು ದಿನಗಳ ಮಿತಿಯನ್ನು ಮೀರಿ ಚಿಕಿತ್ಸೆ ಮುಂದುವರಿಸುವ ಇತರ ನಿರ್ಣಾಯಕ ಆರೈಕೆಯ ಅಗತ್ಯವಿರುವವರು ರಾಜ್ಯ ಪ್ಯಾಕೇಜ್ ಅಡಿಯಲ್ಲಿ ರೂ. 1 ಲಕ್ಷ ಹೆಚ್ಚುವರಿ ಟಾಪ್-ಅಪ್ಗೆ ಅರ್ಹರಾಗಿರುತ್ತಾರೆ.