ಕಲಬುರಗಿ: ಸೆಪ್ಟೆಂಬರ್ 22 ರಿಂದ ಅಕ್ಟೋಬರ್ 7 ರವರೆಗೆ ನಡೆಯಲಿರುವ ಜಾತಿ ಸಮೀಕ್ಷೆಯಲ್ಲಿ ಕುರುಬ ಸಮುದಾಯದ ಜನರು ತಮ್ಮ ಜಾತಿಯ ಹೆಸರನ್ನು 'ಕುರುಬ' ಎಂದು ನೋಂದಾಯಿಸಿಕೊಳ್ಳುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬುಧವಾರ ಒತ್ತಾಯಿಸಿದರು.
ಕರ್ನಾಟಕ ಪ್ರದೇಶ ಕುರುಬಗೊಂಡ ಸಂಘದ ಜಿಲ್ಲಾ ಘಟಕ ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಯುವಕ ಸಂಘದಿಂದ ಬುಧವಾರ ಆಯೋಜಿಸಿದ್ದ ಬೃಹತ್ ಅಭಿನಂದನಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
‘ಸೆ.22ರಿಂದ ನಡೆಯಲಿರುವ ಸಾಮಾಜಿಕ ಆರ್ಥಿಕ ಶೈಕ್ಷಣಿಕ ಸಮೀಕ್ಷೆ ಬರೀ ಕುರುಬರು ಎಸ್ಸಿ–ಎಸ್ಟಿಗಳಿಗೆ ಅಲ್ಲ. ಅದು ರಾಜ್ಯದ ಎಲ್ಲ ಏಳು ಕೋಟಿ ಜನರ ಸ್ಥಿತಿಗತಿ ಅರಿಯಲು ನಡೆಸಲಾಗುತ್ತಿದೆ. ನೀವೆಲ್ಲರೂ ಸಮೀಕ್ಷೆಯಲ್ಲಿ ಜಾತಿ ಕಾಲಂನಲ್ಲಿ ಕುರುಬ ಎಂದೇ ಬರೆಸಬೇಕು. ಹಾಗೆ ಬರೆಸದಿದ್ದರೆ ನಿಮ್ಮ ಸಂಖ್ಯೆ ಕಡಿಮೆಯಾಗಿ ಸಿಗಬೇಕಾದ ಸವಲತ್ತು ಸಿಗುವುದು ಕಷ್ಟವಾಗುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು ಎಂದು ಹೇಳಿದರು.
ಕುರುಬ ಸಮುದಾಯವನ್ನು ST ಗೆ ಸೇರಿಸಲು ಹಿಂದೆಯೂ ಕೇಂದ್ರಕ್ಕೆ ಶಿಫಾರಸ್ಸು ಮಾಡಲಾಗಿತ್ತು. ಇದನ್ನು ಕೇಂದ್ರ ಸರ್ಕಾರ ವಾಪಸ್ ಕಳುಹಿಸಿದೆ. ಹೀಗಾಗಿ ಮತ್ತೆ ಹೆಚ್ಚುವರಿ ಅಂಕಿಅಂಶಗಳು ಮತ್ತು ದಾಖಲೆಗಳ ಸಮೇತ ಕೇಂದ್ರಕ್ಕೆ ಮತ್ತೆ ಶಿಫಾರಸ್ಸು ಕಳುಹಿಸಲಾಗುವುದು ಎಂದು ಭರವಸೆ ನೀಡಿದರು.
ರಾಯಣ್ಣ ಜನ್ಮದಿನ ಸ್ವಾತಂತ್ರ್ಯೋತ್ಸವದ ಆಗಸ್ಟ್ 15. ರಾಯಣ್ಣರನ್ನು ಬ್ರಿಟಿಷರು ಗಲ್ಲಿಗೆ ಏರಿಸಿದ್ದು ಜನವರಿ 26ರ ಗಣರಾಜ್ಯೋತ್ಸವ ದಿನದಂದು. ಇದು ಕಾಕತಾಳೀಯ ಆದರೂ ಸತ್ಯವಾದ ಸಂಗತಿ. ಸ್ವಾತಂತ್ರ್ಯ ಸೇನಾನಿ ರಾಯಣ್ಣ ಯುವಕರಿಗೆ ಪ್ರೇರಣೆ ಆಗಿದ್ದಾರೆ. ಶೇ.7 ರಷ್ಟಿರುವ ಕುರುಬ ಸಮುದಾಯ ಶಿಕ್ಷಣದಲ್ಲಿ ಬಹಳ ಹಿಂದುಳಿದಿದೆ. ಆದ್ದರಿಂದ ಸಮುದಾಯದ ಪ್ರತಿಯೊಬ್ಬರೂ ವಿದ್ಯಾವಂತರಾಗುವುದು ಅವಶ್ಯವಾಗಿದೆ. ಸಮುದಾಯವನ್ನು ಶಿಕ್ಷಣ ಕ್ಷೇತ್ರದಲ್ಲಿ ಉನ್ನತೀಕರಿಸಬೇಕಿದೆ.
ನಾವು ರಾಜ್ಯ ಪ್ರವಾಸ ಮಾಡಿ ಕನಕ ಗುರುಪೀಠ ಸ್ಥಾಪಿಸಿದೆವು. ಪೀಠದ ಉದ್ದೇಶ ಎಲ್ಲಾ ಶೋಷಿತ ಸಮುದಾಯಗಳಿಗೂ ಶಿಕ್ಷಣ ಕೊಡುವುದೇ ಆಗಿತ್ತು. ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಮತ್ತು ನಾರಾಯಣಗುರು ಇಬ್ಬರೂ ಶಿಕ್ಷಣದಿಂದ ಸ್ವತಂತ್ರರಾಗಬಹುದು, ಸ್ವಾಭಿಮಾನಿಗಳಾಗಬಹುದು ಎಂದು ಹೇಳಿದ್ದಾರೆ. ಇಡೀ ರಾಜ್ಯ ಸುತ್ತಿ ಮಠ ಮಾಡಿದ್ದು ನಾವು. ಆದರೆ, ಈಗ ಕೆಲವು ಡೋಂಗಿ ಜನ ನಾವೇ ಮಠದ ಸ್ಥಾಪನೆ ಮಾಡಿದ್ದು ಎಂದು ಹೇಳಿಕೊಳ್ಳುತ್ತಿದ್ದಾರೆ. ಅವರ ಮಾತು ನಂಬಬೇಡಿ. ತೀರ್ಮಾನ ನಿಮಗೆ ಬಿಡುತ್ತಿದ್ದೇನೆ.
ನಿಮ್ಮ ಪ್ರೀತಿ, ವಿಶ್ವಾಸ ಸದಾ ನನ್ನ ಮೇಲೆ ಇರಲಿ. ನಾನು ರಾಜಕಾರಣ ಮಾಡೋದೇ ಸಾಮಾಜಿಕ ನ್ಯಾಯಕ್ಕಾಗಿ. ನಾನು ಅಧಿಕಾರದಲ್ಲಿ ಇರಲಿ, ಬಿಡಲಿ ಸಾಮಾಜಿಕ ನ್ಯಾಯಕ್ಕಾಗಿಯೇ ಕೆಲಸ ಮಾಡುತ್ತೇನೆ. ನಾವೆಲ್ಲರೂ ಕನಕದಾಸರು ಮತ್ತು ಸಂಗೊಳ್ಳಿ ರಾಯಣ್ಣ ಅವರು ನಡೆದ ದಾರಿಯಲ್ಲೇ ನಡೆಯೋಣ ಎಂದು ತಿಳಿಸಿದರು.