ಬೆಂಗಳೂರು: ಜಾತಿ ಗಣತಿಯಲ್ಲಿ ಒಕ್ಕಲಿಗ ಸಮುದಾಯದ ಹಿತಾಸಕ್ತಿಗಳನ್ನು ಕಾಪಾಡಲು "ವಿಶೇಷ ಕಾರ್ಯತಂತ್ರ" ರೂಪಿಸುವುದಾಗಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಶನಿವಾರ ಭರವಸೆ ನೀಡಿದರು.
ಆದಿಚುಂಚಗಿರಿ ಶ್ರೀಗಳಾದ ನಿರ್ಮಲಾನಂದ ಸ್ವಾಮೀಜಿಗಳ ನೇತೃತ್ವದಲ್ಲಿ ನಗರದಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಜನಗಣತಿಯ ಬಗ್ಗೆ ನೀವು ಚಿಂತಿಸಬೇಕಾಗಿಲ್ಲ. ಜಾತಿ ಗಣತಿಯಲ್ಲಿ ಒಕ್ಕಲಿಗ ಸಮುದಾಯದ ಹಿತಾಸಕ್ತಿಗಳನ್ನು ಕಾಪಾಡಲು "ವಿಶೇಷ ಕಾರ್ಯತಂತ್ರ" ರೂಪಿಸಲಾಗುತ್ತದೆ. ಜಾತಿಗಣತಿ ಕುರಿತು ನೀವು ಆಕ್ಷೇಪಣೆಗಳನ್ನು ಎತ್ತಬಹುದು. ಆದರೆ, ಜನಗಣತಿಯನ್ನು ಒಂದು ಅವಕಾಶವಾಗಿ ಬಳಸಿಕೊಳ್ಳಿ. ಮಾಧ್ಯಮ ಸೇರಿದಂತೆ ಎಲ್ಲಾ ವೇದಿಕೆಗಳಲ್ಲಿ ವ್ಯಾಪಕ ಪ್ರಚಾರದ ಮೂಲಕ ಸಮುದಾಯದಲ್ಲಿ ಹೆಚ್ಚಿನ ಜಾಗೃತಿ ಮೂಡಿಸಿ. ನಾನು ಕೂಡ ಅದಕ್ಕೆ ಹಣಕಾಸು ಒದಗಿಸುತ್ತೇನೆಂದು ಹೇಳಿದರು.
ನಿರ್ಮಲಾನಂದ ಸ್ವಾಮೀಜಿಗೆ ನಾನೇ ಒತ್ತಾಯ ಮಾಡಿ ಸಭೆಗೆ ದಿನಾಂಕ ಫಿಕ್ಸ್ ಮಾಡಿಸಿದೆ. ಸಮಾಜ ಉಳಿಸಿಕೊಳ್ಳಬೇಕು, ಸಮಾಜದ ಋಣ ತೀರಿಸಬೇಕು ಎಂದು ಬಂದಿದ್ದೀರಿ. ನಾನು ಹಿಂದಿನ ವಿಚಾರದ ಬಗ್ಗೆ ಚರ್ಚೆಗೆ ಹೋಗಲ್ಲ, ಎಲ್ಲರೂ ಮಾತನಾಡಿದ್ದಾರೆ. ನಾವು ಯಾರೇ ಎಷ್ಟು ದೊಡ್ಡ ಸ್ಥಾನಕ್ಕೆ ಹೋಗಿದ್ರು ಅದು ನಿಮ್ಮ ಸಮಾಜದಿಂದಲೇ ಅನ್ನೋದು ಗಮನ ಇರಲಿ. ನಾನು ನಮ್ಮ ಕರ್ತವ್ಯ ಮಾಡಿದ್ದೇವೆ. ಈಗ ನಿಮ್ಮ ಕೈಲಿದೆ, 15 ದಿನದ ಸಮೀಕ್ಷೆ ಸಾಕಾಗುತ್ತಾ ಇಲ್ವಾ ಅನ್ನೋದು ಮುಂದೆ ಚರ್ಚೆ ಮಾಡ್ತೇವೆ. ನೀವು ನಿಮ್ಮ ಸಮಾಜಕ್ಕೆ ಏನು ಮಾಡ್ತೀರಿ ಎಂಬುದು ಮುಖ್ಯ. ಈ ಸಮೀಕ್ಷೆಯಿಂದ ಸಮುದಾಯಕ್ಕೆ ಅನುಕೂಲ ಆಗಲಿದೆ. ನಮ್ಮ ಸಮುದಾಯದ ರಕ್ಷಣೆಗೆ ನಾವು ಬೇರೆ ಸ್ಟ್ರಾಟಜಿ ಮಾಡಬೇಕು.
ಆತುರವಾಗಿ ಮಾಡ್ತಿರೋದು ಸರಿಯೋ, ತಪ್ಪೋ ಚರ್ಚೆ ಬೇಡ. ಇನ್ನು ಡಬಲ್ ಶಿಕ್ಷಕರನ್ನ ನೇಮಿಸಿ ಮಾಡ್ತಾರೆ ಅಂತ ಹೇಳಿದ್ದಾರೆ. ನಾವು ಇದನ್ನ ಮುಂದೆ ಹಾಕೋಕೆ ನಮ್ಮ ಪ್ರಯತ್ನ ಮಾಡ್ತಿದ್ದೇವೆ. 15 ದಿನಗಳಲ್ಲಿ ಮಾಡೋಕಾಗಲ್ಲ ಅನ್ನೋದರ ಬಗ್ಗೆ ನಿಮಗೆ ಬೇಡ. ಇದನ್ನ ಮುಂದೂಡಬೇಕಾ ಮತ್ತೊಂದಾ ಅದೆಲ್ಲಾ ನಮಗೆ ಬಿಡಿ ಎಂದು ಹೇಳುತ್ತಾ ಸಮಾಜ ಒಗ್ಗಟ್ಟಿಗಾಗಿ ಶ್ರಮಿಸಿ ಎಂದು ಕರೆ ನೀಡಿದರು.
ಇದೇ ವೇಳೆ ಸಮಾಜದ ಪರವಾಗಿ ತಾವು ತೆಗೆದುಕೊಂಡ ನಿರ್ಧಾರಗಳ ಕುರಿತು ಮಾತನಾಡಿದ ಅವರು, ಹಿಂದಿನ ಕಾಂತರಾಜ್ ಆಯೋಗದ ವರದಿಗೂ ತಡೆ ಬಗ್ಗೆಯೂ ಪ್ರಸ್ತಾಪ ಮಾಡಿದ್ದಾರೆ. ಈ ಸಂದರ್ಭದಲ್ಲಿ ವೀರಶೈವ ಲಿಂಗಾಯತ ಸಮಾಜದ ಸಹಾಯದಿಂದ ನಮ್ಮ ಆ ಪ್ರಯತ್ನ ಯಶಸ್ವಿಯಾಯ್ತು ಎಂದು ಸ್ಮರಿಸಿದರು.
ಕಾಂತರಾಜ್ ಆಯೋಗದಲ್ಲಿ 1350 ಜಾತಿಗಳಿದ್ದವು, ಆದರೆ, ಈಗ 1563 ಜಾತಿಗಳು ಆಗಿವೆ. ಯಾರು ಏನು ಜಾತಿ ಹೆಸರು ತಗೊಂಡು ಬಂದು ಮನವಿ ಕೊಟ್ಟಿದ್ದಾರೋ, ಅದನ್ನ ಸೇರಿಸಿದ್ದಾರೆ. ಆದರೆ ಇನ್ಮೇಲೆ ಅದಕ್ಕೆ ಅವಕಾಶ ಇಲ್ಲ, ಅದು ಕಾನೂನಾತ್ಮಕವಾಗಿ ಆಗಬೇಕು ಎಂದು ಹೇಳಿದರು.