ಬೆಂಗಳೂರು: ಹಿಂದುಳಿದ ವರ್ಗಗಳ ಆಯೋಗವು ಕೈಗೊಳ್ಳಲಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ಮುಂದೂಡುವಂತೆ ಒಕ್ಕಲಿಗ ಸಮುದಾಯ ಶನಿವಾರ ಆಗ್ರಹಿಸಿದೆ.
ಆದಿಚುಂಚನಗಿರಿ ಮಠದ ಪೀಠಾಧಿಪತಿ ನಿರ್ಮಲಾನಂದನಾಥ ಸ್ವಾಮೀಜಿ ಅವರ ನೇತೃತ್ವದಲ್ಲಿ ನಗರದ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಶನಿವಾರ ಒಕ್ಕಲಿಗ ಸಮುದಾಯದ ಸಭೆ ನಡೆಯಿತು.
ಸಭೆಯಲ್ಲಿ ಸ್ವಾಮೀಜಿಗಳು, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಚಿವರು, ಸಂಸದರು, ಶಾಸಕರು, ಒಕ್ಕಲಿಗರ ಸಂಘದ ಪದಾಧಿಕಾರಿಗಳು ಪಾಲ್ಗೊಂಡು, ಸಾಧಕ -ಬಾಧಕಗಳ ಬಗ್ಗೆ ಚರ್ಚಿಸಿದರು.
ನಿರ್ಮಲಾನಂದನಾಥ ಶ್ರೀಗಳ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಮೂರು ಪಕ್ಷಗಳ ನಾಯಕರು ಭಾಗಿಯಾದರು. ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ, ಡಿಸಿಎಂ ಡಿಕೆ ಶಿವಕುಮಾರ್, ಅಶ್ವತ್ಥ್ ನಾರಾಯಣ್, ಆರ್.ಅಶೋಕ್, ಮಾಜಿ ಸಿಎಂ ಡಿ.ವಿ.ಸದಾನಂದಗೌಡ, ಕೇಂದ್ರ ಸಚಿವೆ ಶೋಭಾ ಸೇರಿದಂತೆ ಪ್ರಮುಖರು ಭಾಗಿಯಾದರು. ಸುದೀರ್ಘ ಚರ್ಚೆ ಮೂಲಕ ಮಹತ್ವದ ನಿರ್ಧಾರವನ್ನೂ ಕೈಗೊಳ್ಳಲಾಯಿತು.
ಸಭೆ ಬಳಿಕ ಮಾತನಾಡಿದ ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಶ್ರೀಗಳು, ಯಾವುದೇ ಕಾರಣಕ್ಕೂ ಕ್ರಿಶ್ಚಿಯನ್ ಜೊತೆ ಒಕ್ಕಲಿಗರನ್ನು ಸೇರಿಸಬಾರದು. ಸಮೀಕ್ಷೆಯನ್ನು ಮುಂದೂಡಬೇಕು ಎಂದು ಆಗ್ರಹಿದರು.
ಜಾತಿಗಣತಿ ಸಮೀಕ್ಷೆ ಪಟ್ಟಿಯಲ್ಲಿ ಧರ್ಮ ಹಿಂದೂ, ಜಾತಿ ಒಕ್ಕಲಿಗ ಬರೆಸಲು ನಿರ್ಣಯ ಕೈಗೊಳ್ಳಲಾಯಿತು. ಯಾರೂ ಗೊಂದಲ ಮಾಡಿಕೊಳ್ಳದಂತೆ ಶ್ರೀಗಳು ಸಲಹೆ ನೀಡಿದರು.
ಉಪ ಜಾತಿಯಲ್ಲೂ ಒಕ್ಕಲಿಗ ಎಂದೇ ನಮೂದಿಸಲು ನಿರ್ಣಯ ತೆಗೆದುಕೊಳ್ಳಲಾಗಿದೆ. ನಿರ್ಣಯವನ್ನು ನಿರ್ಮಲಾನಂದನಾಥ ಶ್ರೀ ಮಂಡಿಸಿದರೆ, ಅದಕ್ಕೆ ಸಭೆಯಲ್ಲಿದ್ದ ಡಿಸಿಎಂ ಡಿ.ಕೆ.ಶಿವಕುಮಾರ್, ಕೇಂದ್ರ ಸಚಿವ ಕುಮಾರಸ್ವಾಮಿ, ಸದಾನಂದಗೌಡ ಸೇರಿ ಹಲವು ನಾಯಕರು ಅನುಮೋದನೆ ಕೊಟ್ಟರು. ಇನ್ನು ಸಮೀಕ್ಷೆಯನ್ನು 45 ದಿನಗಳ ಕಾಲ ಮುಂದೂಡಿಕೆ ಮಾಡಬೇಕು ಎಂದೂ ಒತ್ತಾಯಿಸಲಾಯಿತು.
ನವರಾತ್ರಿ ಹಬ್ಬಗಳು ಮತ್ತು ಆಚರಣೆಗಳಲ್ಲಿ ನಿರತರಾಗಿರುವ ಸಮುದಾಯದ ಜನ ಜನಗಣತಿಯಲ್ಲಿ ತೊಡಗಿಸಿಕೊಳ್ಳಲು ಕಷ್ವಗುತ್ತದೆ. ನವದುರ್ಗೆಯರನ್ನು ಪೂಜಿಸುವ ಈ ಕಾಲದಲ್ಲಿ ಮಹಿಳೆಯರಿಗೆ ತಮ್ಮ ಮನೆಗಳಲ್ಲಿ ನೆರವೇರಿಸಲೇಬೇಕಾದ ಧಾರ್ಮಿಕ ಕಾರ್ಯಗಳು ಇರುತ್ತವೆ. ಈ ಸಮಯದಲ್ಲಿ ಸಮೀಕ್ಷೆ ಹೇಗೆ ಸಾಧ್ಯ? ಹೀಗಾಗಿ ಇದು ಸಮೀಕ್ಷೆಗೆ ಸಕಾಲವಲ್ಲ. ಮುಂದಕ್ಕೆ ಹಾಕಿ ಅಥವಾ ಸಮಯ ವಿಸ್ತರಿಸಿ. ಜನರಿಗೆ ಪ್ರಾಮಾಣಿಕ, ವಸ್ತುನಿಷ್ಠ, ಸತ್ಯನಿಷ್ಠ ಸಮೀಕ್ಷೆ ಬೇಕು. ಇಲ್ಲವಾದರೆ ಇದಕ್ಕೂ ಹಿಂದಿನ ಎರಡು ಸಮೀಕ್ಷಾ ವರದಿಗಳ ಗತಿಯೇ ಆಗಲಿದೆ ಎಂದು ಅವರು ಎಚ್ಚರಿಕೆ ನೀಡಿದರು.
ಜನರ ತೆರಿಗೆ ಹಣ ಪೋಲಾಗಬೇಕೆ? ಇನ್ನೂ ಎಷ್ಟು ಕೋಟಿ ಖರ್ಚಾಗಬೇಕು? ಕೊನೇ ಪಕ್ಷ 3 ತಿಂಗಳ ಕಾಲಾವಕಾಶ ಬೇಕೇಬೇಕು. ಹಂತ ಹಂತವಾಗಿ ಸಮೀಕ್ಷೆ ನಡೆಸಿ. ಅದಕ್ಕೇನು ಸಮಸ್ಯೆ?ಆತುರಾತುರ ಸಮೀಕ್ಷೆ ಯಾರ ಆನಂದಕ್ಕೆ? ಎಲ್ಲರನ್ನೂ ಒಳಗೊಳ್ಳುವ, ಯಾವ ಸಮುದಾಯಕ್ಕೂ ಅನ್ಯಾಯ ಆಗದಂತೆ ಆದರ್ಶ ಸಮೀಕ್ಷೆ ಅಗತ್ಯ. ತಪ್ಪಿದರೆ ಈ ಸಮೀಕ್ಷೆಯ ಹಿಂದಿರುವ ಶಕ್ತಿಗಳಿಗೆ ಶಿಕ್ಷೆ ತಪ್ಪಿದ್ದಲ್ಲ ಎಂದು ಅವರು ಕಿವಿಮಾತು ಹೇಳಿದರು.
ಪಟ್ಟನಾಯಕನಹಳ್ಳಿಯ ಸ್ಫಟಿಕ ಪುರಿ ಮಠದ ಪೀಠಾಧ್ಯಕ್ಷ ಶ್ರೀ ನಂಜಾವಧೂತ ಸ್ವಾಮೀಜಿ ಮಾತನಾಡಿ, ಹಿಂದುಳಿದ ವರ್ಗಗಳ ಆಯೋಗ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ಹೊಸ ಜಾತಿಯ ಹೆಸರುಗಳು ಪ್ರಕಟವಾಗಿವೆ. ಅಲ್ಲದೆ ಒಕ್ಕಲಿಗ ಸಮುದಾಯದ ಜೊತೆ ಧರ್ಮದ ಹೆಸರು ತಳುಕು ಹಾಕಲಾಗಿದೆ. ಇದಕ್ಕೆ ನಮ್ಮ ತೀವ್ರ ಆಕ್ಷೇಪವಿದೆ ಎಂದು ಹೇಳಿದರು.
ಈ ರೀತಿ ಯಾವುದೇ ಜಾತಿ, ಧರ್ಮ ಪ್ರಕಟವಾಗಬೇಕಾದರೆ ಆಯೋಗಕ್ಕೆ ಅರ್ಜಿ ಸಲ್ಲಿಸಿ, ಆಯೋಗದಲ್ಲಿ ಚರ್ಚಿಸಿ ಸರ್ಕಾರಕ್ಕೆ ಶಿಫಾರಸು ಮಾಡಬೇಕು. ಅದನ್ನು ಗೆಜೆಟ್ನಲ್ಲಿ ಪ್ರಕಟಿಸಬೇಕು. ಈ ರೀತಿಯ ಯಾವ ಪ್ರಕ್ರಿಯೆಗಳೂ ನಡೆದಿಲ್ಲ ಎಂದು ಕಿಡಿಕಾರಿದರು.
ಜಾತಿಗಣತಿಗೆ ಇದು ಸಕಾಲವಲ್ಲ. ಕೃಷಿ ಚಟುವಟಿಕೆಗಳಲ್ಲಿ ಸಮುದಾಯದವರು ತೊಡಗಿದ್ದಾರೆ. ಪಿತೃಪಕ್ಷ, ನವರಾತ್ರಿ, ದಸರಾ ಸೇರಿದಂತೆ ಸಾಲುಸಾಲು ಹಬ್ಬಗಳಿವೆ. ಆಯೋಗ ಅವಸರವಾಗಿ ಗಣತಿಗೆ ಮುಂದಾಗಿರುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಾವಿರಾರು ಅಹವಾಲು, ಆಕ್ಷೇಪಗಳನ್ನು ಆಯೋಗಕ್ಕೆ ಸಲ್ಲಿಸಲಾಗಿದ್ದರೂ ಅವುಗಳಿಗೆ ಸಮಂಜಸ ಉತ್ತರ ನೀಡದೇ ಏಕ ಪಕ್ಷೀಯವಾಗಿ ತೆಗೆದುಕೊಂಡು ತರಾತುರಿಯಲ್ಲಿ ಸಮೀಕ್ಷೆ ಕೈಗೊಳ್ಳಲಾಗುತ್ತಿದೆ. ವೀರಶೈವ ಲಿಂಗಾಯತ ಸಮುದಾಯವೂ ಕೂಡ ಸಮೀಕ್ಷೆಯನ್ನು ಮುಂದೂಡಬೇಕು ಮತ್ತು ಹೆಚ್ಚು ಸಮಯಾವಕಾಶ ನೀಡಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸುವೆ ಎಂದರು.