ಯಾದಗಿರಿ: ಪಾಪಿ ತಂದೆಯೊಬ್ಬ ತನ್ನ ಪತ್ನಿಯ ಶೀಲ ಶಂಕಿಸಿ ಇಬ್ಬರು ಮಕ್ಕಳನ್ನು ಕುಡುಗೋಲಿನಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿರುವ ಅಮಾನವೀಯ ಘಟನೆ ಯಾದಗಿರಿ ತಾಲೂಕಿನ ದುಗನೂರು ಕ್ಯಾಂಪ್ ನಲ್ಲಿ ನಡೆದಿದೆ.
ಆರೋಪಿ ಶರಣಪ್ಪ, ತನ್ನ ಪತ್ನಿ ಹಾಗೂ ತಾಯಿ ಬಹಿರ್ದೆಸೆಗೆ ಹೋದ ವೇಳೆ ಮನೆಯಲ್ಲಿದ್ದ ಮೂರು ವರ್ಷ ಮಗ ಭಾರ್ಗವ್ ಮತ್ತು ಐದು ವರ್ಷದ ಸಾನ್ವಿಯನ್ನು ಕುಡುಗೋಲುನಿಂದ ಕೊಚ್ಚಿ ಕೊಲೆ ಮಾಡಿದ್ದಾನೆ. ಮತ್ತೋರ್ವ ಮಗ ಹೇಮಂತ್(8) ಮೇಲೂ ದಾಳಿ ಮಾಡಿದ್ದು, ಆತನ ಸ್ಥಿತಿ ಚಿಂತಾಜನಕವಾಗಿದೆ. ಘಟನೆ ಬಳಿಕ ಶರಣಪ್ಪ ಪರಾರಿಯಾಗಿದ್ದು, ಕುಟುಂಬಸ್ಥರ ರೋದನೆ ಮುಗಿಲು ಮುಟ್ಟಿದೆ.
ಗಾಯಗೊಂಡ ಹೇಮಂತನಿಗೆ ಯಾದಗಿರಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದೆ.
ಆರೋಪಿ ಶರಣಪ್ಪ 10 ವರ್ಷಗಳ ಹಿಂದೆ ಜಯಮ್ಮಳ ಜೊತೆ ಮದುವೆ ಆಗಿದ್ದು, ಆರಂಭದ ವರ್ಷಗಳಲ್ಲಿ ಎಲ್ಲವೂ ಚೆನ್ನಾಗಿಯೇ ಇತ್ತು. ಇಬ್ಬರ ದಾಂಪತ್ಯಕ್ಕೆ ಸಾಕ್ಷಿಯೆಂಬಂತೆ ಮೂರು ಜನ ಮುದ್ದಾದ ಮಕ್ಕಳೂ ಇದ್ದರು. ಆದರೆ ಕಳೆದ ಎರಡು ವರ್ಷಗಳಿಂದ ವಿಪರೀತವಾಗಿ ಪತ್ನಿಯ ಶೀಲ ಶಂಕಿಸುತ್ತಿದ್ದ ಶರಣಪ್ಪ, ಜಯಮ್ಮ ಯಾರ ಜೊತೆಗೆ ಮಾತಾಡಿದ್ರೂ ಅನುಮಾನ ಪಡುತ್ತಿದ್ದ. ಇರುವ ಮೂವರು ಮಕ್ಕಳು ತನಗೆ ಹುಟ್ಟಿಲ್ಲ ಎನ್ನುತ್ತಿದ್ದ. ಇದೇ ಕಾರಣಕ್ಕೆ ಜೀವ ಭಯದಿಂದ ಎರಡು ವರ್ಷಗಳ ಹಿಂದೆ ಮಕ್ಕಳ ಜೊತೆ ಜಯಮ್ಮ ತವರು ಸೇರಿದ್ದರು. ರಾಜಿ ಪಂಚಾಯತಿ ಬಳಿಕ ಕಳೆದ 15 ದಿನಗಳ ಹಿಂದೆಯಷ್ಟೇ ಪತಿ ಮನೆಗೆ ವಾಪಸ್ ಬಂದಿದ್ದರು.
ಪಾಪಿ ಶರಣಪ್ಪನೇ ಕೊಲೆ ಮಾಡಿ ಓಡಿ ಹೋಗಿದ್ದಾನೆ. ಅವನು ಸಿಕ್ರೆ ಅಲ್ಲೇ ಸಾಯಿಸಬೇಕು ಅಂತ ಆರೋಪಿಯ ತಾಯಿ ಭೀಮವ್ವ ಕಣ್ಣೀರು ಹಾಕಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸಂಬಂಧಿಕರೂ ಆಗಮಿಸಿದ್ದು, ಮನೆಯಲ್ಲಿ ನಿರವ ಮೌನ ಆವರಿಸಿದೆ.
ಘಟನಾ ಸ್ಥಳಕ್ಕೆ ಯಾದಗಿರಿ ಎಸ್ಪಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ಸಂಬಂಧ ಯಾದಗಿರಿ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ. ಆರೋಪಿ ಶರಣಪ್ಪನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದು, ತಂಡ ರಚಿಸಿ ಹುಡುಕಾಟ ನಡೆಸಲಾಗುತ್ತಿದೆ.