ಬೆಂಗಳೂರು: ಬೆಂಗಳೂರಿನ ಘನತ್ಯಾಜ್ಯ ನಿರ್ವಹಣಾ ಲಿಮಿಟೆಡ್ (BSWML) ಅಧಿಕಾರಿಗಳು ಚಾಮರಾಜಪೇಟೆಯಲ್ಲಿರುವ ಪ್ಲಾಸ್ಟಿಕ್ ಗೋದಾಮಿನ ಮೇಲೆ ದಾಳಿ ಶುಕ್ರವಾರ ನಡೆಸಿದ್ದು, ಈ ವೇಳೆ ಐದು ಟನ್ ಏಕ-ಬಳಕೆಯ ಪ್ಲಾಸ್ಟಿಕ್ ಮತ್ತು ಇತರ ಪ್ಲಾಸ್ಟಿಕ್ ಉತ್ಪನ್ನಗಳನ್ನು ವಶಪಡಿಸಿಕೊಂಡಿದ್ದಾರೆ.
ನಗರವನ್ನು ಏಕಬಳಕೆ ಪ್ಲಾಸ್ಟಿಕ್ಮುಕ್ತ ನಗರವನ್ನಾಗಿಸಲು ಹಲವು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಸಿಇಒ ಕರೀಗೌಡ ತಿಳಿಸಿದ್ದಾರೆ.
ಚಾಮರಾಜಪೇಟೆ ವ್ಯಾಪ್ತಿಯಲ್ಲಿ ಫರ್ಲ್ ಪಲಿಫಿಲಂ ಮ್ಯಾನುಫ್ಯಾಕ್ಚರರ್ ದಾಸ್ತಾನು ಘಟಕದ ಮೇಲೆ ಶುಕ್ರವಾರ ದಾಳಿ ನಡೆಸಿ, 5 ಟನ್ ಏಕಬಳಕೆ ಪ್ಲಾಸ್ಟಿಕ್ ವಶಪಡಿಸಿಕೊಂಡು ರೂ.10 ಲಕ್ಷ ದಂಡ ವಿಧಿಸಲಾಗಿದೆ. ಮತ್ತೆ ಏಕಬಳಕೆ ಪ್ಲಾಸ್ಟಿಕ್ ಬಳಸದಂತೆ ಘಟಕದ ಮಾಲೀಕರಿಗೆ ಎಚ್ಚರಿಕೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು.
ಇದೇ ವೇಳೆ ನಗರದಲ್ಲಿ ಏಕಬಳಕೆ ಪ್ಲಾಸ್ಟಿಕ್ ನಿಯಂತ್ರಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದ್ದು, ಇದರಿಂದ ಬರುವ ದಂಡವನ್ನು ವಿಧಾನಸಭೆ ಕ್ಷೇತ್ರಗಳಿಗೆ ಬಾಡಿಗೆ ಮೂಲಕ ಟ್ರ್ಯಾಕ್ಟರ್ಗಳನ್ನು ಒದಗಿಸಲಾಗುತ್ತಿದೆ. ಇದಕ್ಕಾಗಿ ಟೆಂಡರ್ ಕರೆಯಲಾಗುತ್ತಿದ್ದು, ಅಕ್ಟೋಬರ್ 3ರಿಂದ ಟ್ರ್ಯಾಕ್ಟರ್ಗಳು ಬಳಕೆಗೆ ಲಭ್ಯವಾಗಲಿವೆ ಎಂದು ಹೇಳಿದರು.
ವಿಧಾನಸಭೆ ಕ್ಷೇತ್ರಗಳಲ್ಲಿ ಕಟ್ಟಡ ತ್ಯಾಜ್ಯ, ಬ್ಲ್ಯಾಕ್ ಸ್ಪಾಟ್ಗಳಲ್ಲಿನ ಕಸ ವಿಲೇವಾರಿ, ಮರಗಳ ಕೊಂಬೆಗಳನ್ನು ಸಾಗಿಸುವುದು ಸೇರಿದಂತೆ ಸ್ವಚ್ಛತೆಗೆ ಟ್ರ್ಯಾಕ್ಟರ್ಗಳ ಕೊರತೆ ಇದೆ. ಹೀಗಾಗಿ, ಪ್ಲಾಸ್ಟಿಕ್ ಬಳಕೆಗೆ ವಿಧಿಸಲಾಗುತ್ತಿರುವ ದಂಡವನ್ನು ಟ್ರ್ಯಾಕ್ಟರ್ಗಳ ಬಾಡಿಗೆಗೆ ಉಪಯೋಗಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
25 ವಿಧಾನಸಭೆ ಕ್ಷೇತ್ರಗಳಿಗೆ ತಲಾ ಒಂದು ಟ್ರ್ಯಾಕ್ಟರ್ ಅನ್ನು ನೀಡಲಾಗುತ್ತದೆ. ಹೆಚ್ಚಿನ ವ್ಯಾಪ್ತಿ ಹೊಂದಿರುವ ಮಹದೇವಪುರಕ್ಕೆ ಆರು ಹಾಗೂ ಕೆ.ಆರ್.ಪುರ ವಿಧಾನಸಭೆ ಕ್ಷೇತ್ರಕ್ಕೆ ನಾಲ್ಕು ಟ್ರ್ಯಾಕ್ಟರ್ಗಳನ್ನು ಬಾಡಿಗೆ ಆಧಾರದಲ್ಲಿ ಒದಗಿಸಲಾಗುತ್ತಿದೆ ಎಂದು ಅವರು ತಿಳಿಸಿದರು.