ಚಾಮರಾಜನಗರ: ಪೋಷಕರು ತಮ್ಮ ಪ್ರೀತಿಗೆ ವಿರೋಧ ವ್ಯಕ್ತಪಡಿಸಿದ್ದಕ್ಕೆ ಮನನೊಂದ ಪ್ರೇಮಿಗಳು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ. ಮೃತರು 19 ವರ್ಷದ ನದಿಯಾ ಹಾಗೂ 21 ವರ್ಷದ ನಾಗೇಂದ್ರ ಎಂದು ತಿಳಿದುಬಂದಿದೆ.
ನಾಗೇಂದ್ರ ಪಾಲಾರ್ ಗ್ರಾಮದ ನದಿಯಾಳನ್ನು ಪ್ರೀತಿಸುತ್ತಿದ್ದನು. ಇವರ ಮದುವೆಗೆ ಎರಡು ಮನೆಯವರು ಒಪ್ಪಿರಲಿಲ್ಲ. ಇನ್ನು ನಾಗೇಂದ್ರ ಪೊನ್ನಾಚಿಯಲ್ಲಿರುವ ತನ್ನ ತಾತನ ಮನೆಗೆ ಮೂರು ದಿನಗಳ ಹಿಂದೆ ನದಿಯಾಳನ್ನು ಕರೆದುಕೊಂಡು ಹೋಗಿದ್ದನು. ಇನ್ನು ತಮ್ಮ ಮಗಳು ನಾಪತ್ತೆಯಾಗಿದ್ದಾಳೆಂದು ಪೋಷಕರು ಮಲೆ ಮಹದೇಶ್ವರ ಬೆಟ್ಟದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ವಿಷಯ ತಿಳಿದು ಹೆದರಿದ ನಾಗೇಂದ್ರ ಮತ್ತು ನದಿಯಾ ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿದ್ದಾರೆ. ಘಟನಾ ಸ್ಥಳಕ್ಕೆ ಮಲೆ ಮಹದೇಶ್ವರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.