ಬೆಂಗಳೂರು: 2023ರ ವಿಧಾನಸಭಾ ಚುನಾವಣೆಯಲ್ಲಿ ಶೃಂಗೇರಿ ಕ್ಷೇತ್ರದಲ್ಲಿ ಮತದಾನವಾಗಿರುವ ಒಟ್ಟು ಅಂಚೆ ಮತಗಳಲ್ಲಿ ತಿರಸ್ಕೃತಗೊಂಡಿರುವ 279 ಮತಗಳನ್ನು ಮರು ಪರಿಶೀಲನೆ ನಡೆಸಿ ಹೊಸದಾಗಿ ಫಲಿತಾಂಶ ಪ್ರಕಟ ಮಾಡುವಂತೆ ಕೇಂದ್ರ ಚುನಾವಣಾ ಆಯೋಗಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ.
2023ರಲ್ಲಿ ಶೃಂಗೇರಿ ಕ್ಷೇತ್ರದಿಂದ ಜಯಗಳಿಸಿರುವ ಕಾಂಗ್ರೆಸ್ನ ಟಿ.ಡಿ.ರಾಜೇಗೌಡ ಆಯ್ಕೆಯನ್ನು ಅಸಿಂಧುಗೊಳಿಸಬೇಕು ಎಂದು ಪರಾಜಿತ ಬಿಜೆಪಿ ಅಭ್ಯರ್ಥಿ ಡಿ.ಎನ್.ಜೀವರಾಜ್ ಸಲ್ಲಿಸಿದ್ದ ಚುನಾವಣಾ ತಕರಾರು ಅರ್ಜಿಯನ್ನು ಭಾಗಶಃ ಪುರಸ್ಕರಿಸಿ ನ್ಯಾಯಮೂರ್ತಿ ಆರ್.ನಟರಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ನೀಡಿದೆ. ಇದೇ ವೇಳೆ ನ್ಯಾಯಾಲಯವು ತನ್ನ ಆದೇಶಕ್ಕೆ 2 ವಾರಗಳ ತಡೆಯಾಜ್ಞೆ ನೀಡಿದ್ದು ಪ್ರತಿವಾದಿಗಳಿಗೆ ಸುಪ್ರೀಂಕೋರ್ಟ್ನಲ್ಲಿ ಈ ತೀರ್ಪು ಪ್ರಶ್ನಿಸಲು ಅವಕಾಶ ನೀಡಿದೆ.
ತಿರಸ್ಕೃತಗೊಂಡಿದ್ದ 279 ಅಂಚೆ ಮತಗಳನ್ನು ಮುಂದಿನ 2 ವಾರಗಳಲ್ಲಿ ಮರು ಪರಿಶೀಲನೆ ನಡೆಸಬೇಕು. ಈ ಸಂದರ್ಭದಲ್ಲಿ ಚುನಾವಣಾಧಿಕಾರಿಗಳು ಕೈಪಿಡಿಯ ಮಾರ್ಗಸೂಚಿಗಳು -2023 ಅನ್ನು ಕಟ್ಟುನಿಟ್ಟಾಗಿ ಅನುಸರಿಸಬೇಕು.
ತಿರಸ್ಕೃತ ಮತಗಳನ್ನು ಮರು ಪರಿಶೀಲನೆ ಸಂದರ್ಭದಲ್ಲಿ ಅರ್ಜಿದಾರರು ಮತ್ತು ಪ್ರತಿವಾದಿ ರಾಜೇಗೌಡ ಅವರಿಗೆ ಹಂಚಿಕೆಯಾಗಿರುವ ಮತಗಳಲ್ಲಿ ಗಣನೀಯ ಲೋಪ ಕಂಡುಬಂದಲ್ಲಿ ಎಲ್ಲ ಅಂಚೆ ಮತಗಳನ್ನು ಮರು ಎಣಿಕೆ ಮಾಡಿ ಹೊಸದಾಗಿ ಫಲಿತಾಂಶ ಪ್ರಕಟಿಸಬೇಕು ಎಂದು ಪೀಠ ತಿಳಿಸಿದೆ.
ಆದೇಶದ ಪ್ರತಿಯನ್ನು ಕೇಂದ್ರ ಚುನಾವಣಾ ಆಯೋಗ ಕಾರ್ಯದರ್ಶಿ, ಜಿಲ್ಲಾ ಮುಖ್ಯ ಚುನಾವಣಾಧಿಕಾರಿಗಳು ಮತ್ತು ಶೃಂಗೇರಿಯ ಚುನಾವಣಾಧಿಕಾರಿಗಳಿಗೆ ಇ-ಮೇಲ್ ಇಲ್ಲವೇ ಸ್ಪೀಡ್ ಪೋಸ್ಟ್ ಮೂಲಕ ರವಾನಿಸಬೇಕು ಎಂದು ಹೈಕೋರ್ಟ್ ರಿಜಿಸ್ಟ್ರಾರ್ಗೆ ಸೂಚನೆ ನೀಡಿದೆ.
ಆದೇಶ ಪ್ರಕಟವಾಗುತ್ತಿದ್ದಂತೆ ರಾಜೇಗೌಡ ಪರ ವಕೀಲರು, ಆದೇಶಕ್ಕೆ 3 ವಾರಗಳ ಕಾಲ ತಡೆ ನೀಡಬೇಕು. ಈ ಆದೇಶವನ್ನು ಸುಪ್ರೀಂಕೋರ್ಟ್ನಲ್ಲಿ ಪ್ರಶ್ನಿಸಲಾಗುವುದು ಎಂದು ಹೇಳಿದರು. ಈ ವೇಳೆ ನ್ಯಾಯಾಲಯವು ಆದೇಶಕ್ಕೆ ಎರಡು ವಾರಗಳಿಗೆ ತಡೆ ನೀಡಿತು. ಆದೇಶಕ್ಕೆ ತಡೆ ನೀಡುವುದಕ್ಕೆ ಜೀವರಾಜ್ ಪರ ವಕೀಲರು ವಿರೋಧಿಸಿದರು. ಈ ವೇಳೆ ನ್ಯಾಯಪೀಠ, ಚುನಾವಣೆ ಫಲಿತಾಂಶವನ್ನು ರದ್ದುಗೊಳಿಸಿಲ್ಲ ಎಂದು ತಿಳಿಸಿತು.