ಕರ್ನಾಟಕ 2ನೇ ಪಿಯುಸಿ ಫಲಿತಾಂಶ 2026 ಪ್ರಕಟ: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ (KSEAB) ನಿನ್ನೆ ಏಪ್ರಿಲ್ 9 ರಂದು 2026ರ 2ನೇ ಪಿಯುಸಿ ಪರೀಕ್ಷೆ-1 ಫಲಿತಾಂಶವನ್ನು ಅಧಿಕೃತವಾಗಿ ಪ್ರಕಟಿಸಿದೆ.
ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಪತ್ರಿಕಾಗೋಷ್ಠಿಯಲ್ಲಿ ಫಲಿತಾಂಶ ಪ್ರಕಟಿಸಿದರು. ಈ ವರ್ಷ ಒಟ್ಟು 86% ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಕಳೆದ ವರ್ಷದ 73.45% ಗೆ ಹೋಲಿಸಿದರೆ ಗಣನೀಯ ಏರಿಕೆ ಕಂಡಿದೆ.
ಜಿಲ್ಲಾವಾರು ಟಾಪರ್ಗಳ ಪಟ್ಟಿ
ದಕ್ಷಿಣ ಕನ್ನಡ (ವಿಜ್ಞಾನ ವಿಭಾಗ)
ಮಂಗಳೂರು ಎಕ್ಸ್ಪರ್ಟ್ ಪಿಯು ಕಾಲೇಜಿನ ಶಾಮನ್ಯು ಎಸ್. ಶೆಟ್ಟಿ ಮತ್ತು ನಂದನ್ ನಾಯಕ್ ತಲಾ 600ರಲ್ಲಿ 598 ಅಂಕಗಳನ್ನು ಪಡೆದು ಸಾಧನೆ ಮಾಡಿದ್ದಾರೆ.
ಉಡುಪಿ (ವಿಜ್ಞಾನ)
ಕಾರ್ಕಳದ ಜ್ಞಾನಸುಧಾ ಪಿಯು ಕಾಲೇಜಿನ ವೈಷ್ಣವಿ 600ರಲ್ಲಿ 597 ಅಂಕಗಳನ್ನು ಪಡೆದು ಅಗ್ರಸ್ಥಾನ ಪಡೆದಿದ್ದಾರೆ. ಅದೇ ಕಾಲೇಜಿನ ಅರ್ಣವಿ ಕೂಡ 597 ಅಂಕಗಳನ್ನು ಗಳಿಸಿದ್ದಾರೆ.
ಕೋಲಾರ (ವಿಜ್ಞಾನ)
ಬಂಗಾರಪೇಟೆಯ ಎಸ್ಡಿಸಿ ಕಾಲೇಜಿನ ಅರ್ಚನಾ 600ರಲ್ಲಿ 595 ಅಂಕಗಳನ್ನು ಪಡೆದು ಗಮನಸೆಳೆದಿದ್ದಾರೆ.
ಬೆಂಗಳೂರು ದಕ್ಷಿಣ (ಸೈನ್ಸ್)
ಅರ್ಪಿತಾ 600ರಲ್ಲಿ 582 ಅಂಕಗಳನ್ನು ಪಡೆದಿದ್ದಾರೆ.
ವಿಜಯನಗರ – ಕೊಟ್ಟೂರು (ಕಲಾ)
ಕೊಟ್ಟೂರು ಪಿಯು ಕಾಲೇಜಿನ ಅರ್ಚನಾ ಮತ್ತು ಸಂಗೀತಾ ತಲಾ 600ರಲ್ಲಿ 598 ಅಂಕಗಳನ್ನು ಪಡೆದು ಕಲಾ ವಿಭಾಗದಲ್ಲಿ ಸಾಧನೆ ಕಂಡಿದ್ದಾರೆ.
ದಕ್ಷಿಣ ಕನ್ನಡ (ವಾಣಿಜ್ಯ ವಿಭಾಗ)
ಅಳ್ವಾಸ್ ಕಾಲೇಜಿನ ದಿಶಾ 600ರಲ್ಲಿ 600 ಅಂಕಗಳನ್ನು ಪಡೆದು ರಾಜ್ಯದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ.
ಬೆಂಗಳೂರು (ಕಾಮರ್ಸ್):
ವಿ.ವಿ.ಪುರಂ ಜೈನ್ ಕಾಲೇಜಿನ ಆದಿತಿ 600ರಲ್ಲಿ 600 ಅಂಕಗಳನ್ನು ಪಡೆದು ಸಾಧನೆ ಮಾಡಿದ್ದಾರೆ. ಕಾರ್ಕಳದ ಅನ್ನಿಕಾ 99.33% ಅಂಕಗಳನ್ನು ಗಳಿಸಿದ್ದಾರೆ.
ಈ ವರ್ಷ ಕನಿಷ್ಠ ಉತ್ತೀರ್ಣ ಅಂಕವನ್ನು 35%ರಿಂದ 33%ಕ್ಕೆ ಕಡಿತಗೊಳಿಸಿರುವುದರಿಂದ ಅನೇಕ ವಿದ್ಯಾರ್ಥಿಗಳಿಗೆ ಸಹಾಯವಾಗಿದೆ. ಫಲಿತಾಂಶದಲ್ಲಿ ತೃಪ್ತಿ ಇಲ್ಲದವರು ಮರುಪರಿಶೀಲನೆ (scrutiny)ಗೆ ಅರ್ಜಿ ಸಲ್ಲಿಸಲು ಅವಕಾಶ ಇರಲಿದೆ.
ವಿಭಾಗವಾರು ಸಾಧನೆ
ಸೈನ್ಸ್ ವಿಭಾಗವು ಅತ್ಯಧಿಕ ಉತ್ತೀರ್ಣ ಪ್ರಮಾಣ ದಾಖಲಿಸಿದ್ದು, ನಂತರ ಕಾಮರ್ಸ್ ಮತ್ತು ಕಲಾ ವಿಭಾಗಗಳು ಸ್ಥಾನ ಪಡೆದಿವೆ.
ಕರ್ನಾಟಕ 2ನೇ ಪಿಯುಸಿ ಪರೀಕ್ಷೆ–3 ರದ್ದು
ಕರ್ನಾಟಕ ಶಾಲಾ ಶಿಕ್ಷಣ ಇಲಾಖೆ ಈ ವರ್ಷ ಪರೀಕ್ಷೆ–3 ನ್ನು ನಡೆಸದಿರಲು ನಿರ್ಧರಿಸಿದೆ. ಈ ಮೂರನೇ ಪರೀಕ್ಷೆಯ ಪರಿಣಾಮ ಸೀಮಿತವಾಗಿರುವುದು ಕಂಡುಬಂದಿದೆ.
ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ಪ್ರಕಾರ, 2025ರಲ್ಲಿ ಪರೀಕ್ಷೆ–2 ಉತ್ತೀರ್ಣ ಪ್ರಮಾಣವನ್ನು ಸುಮಾರು 8% ಹೆಚ್ಚಿಸಲು ಸಹಾಯ ಮಾಡಿದರೆ, ಪರೀಕ್ಷೆ–3 ಕೇವಲ 1.8% ಮಾತ್ರ ಪ್ರಭಾವ ಬೀರಿತ್ತು.
ಈ ವರ್ಷ ಒಟ್ಟಾರೆ ಫಲಿತಾಂಶ ಉತ್ತಮವಾಗಿರುವ ಹಿನ್ನೆಲೆಯಲ್ಲಿ, ಪ್ರಕ್ರಿಯೆಯನ್ನು ಸರಳಗೊಳಿಸಲು ಮತ್ತು ವಿದ್ಯಾರ್ಥಿಗಳ ಮೇಲಿನ ಶೈಕ್ಷಣಿಕ ಒತ್ತಡವನ್ನು ಕಡಿಮೆ ಮಾಡಲು ಮೂರನೇ ಪ್ರಯತ್ನವನ್ನು ರದ್ದುಗೊಳಿಸಲು ಇಲಾಖೆ ತೀರ್ಮಾನಿಸಿದೆ.