ಬೆಂಗಳೂರು: 10 ಕಿ.ಮೀ. ರಸ್ತೆಯನ್ನು ಆದಷ್ಟು ಶೀಘ್ರವೇ ದುರಸ್ತಿ ಮಾಡುವಂತೆ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಮನವಿ ಮಾಡಿದ್ದಾರೆ.
18 ಆವೃತ್ತಿಯ ಟಿಸಿಎಸ್ ವಿಶ್ವ 10 ಓಟ ಏಪ್ರಿಲ್ 26ರಂದು ಬೆಂಗಳೂರಿನಲ್ಲಿ ನಡೆಯಲಿದೆ. ಕಳೆದ ವರ್ಷ ರಸ್ತೆಗಳಲ್ಲಿ ಎಲ್ಲೆಡೆ ಗುಂಡಿಗಳೇ ತುಂಬಿದ್ದರಿಂದ ಓಟಗಾರರು ತೊಂದರೆ ಅನುಭವಿಸಿದ್ದರು. ಈ ಬಾರಿ ಈ ರೀತಿಯ ಸಮಸ್ಯೆ ಆಗಬಾರದು. ಈ ನಿಟ್ಟಿನಲ್ಲಿ ರೇಸ್ ನಡೆಯುವ ಮಾರ್ಗದಲ್ಲಿನ ರಸ್ತೆ ಗುಂಡಿಗಳನ್ನು ಮುಚ್ಚುವಂತೆ ವಿಡಿಯೋ ಮೂಲಕ ಮನವಿ ಮಾಡಿದ್ದಾರೆ.
ಭಾರತದ ಅತಿದೊಡ್ಡ ಓಟದ ಸ್ಪರ್ಧೆಗಳಲ್ಲಿ ಒಂದಾದ ಟಿಸಿಎಸ್ ವರ್ಲ್ಡ್ 10 ಕೆ ಓಟದಲ್ಲಿ ಗಣ್ಯ ಕ್ರೀಡಾಪಟುಗಳು, ಹಿರಿಯ ನಾಗರಿಕರು ಮತ್ತು ವಿಕಲಚೇತನರು ಸೇರಿದಂತೆ ಸುಮಾರು 40,000 ಓಟಗಾರರು ಭಾಗವಹಿಸುತ್ತಾರೆ.
ಈ ಓಟವು ಎಂಜಿ ರಸ್ತೆ, ಕಬ್ಬನ್ ರಸ್ತೆ ಮತ್ತು ರಾಜಭವನದ ಸುತ್ತಮುತ್ತಲಿನ ಪ್ರದೇಶಗಳಂತಹ ಪ್ರಮುಖ ಪ್ರದೇಶಗಳ ಮೂಲಕ ಹಾದುಹೋಗುತ್ತದೆ. ಈ ಹಿಂದೆ ಓಟದಲ್ಲಿ ಭಾಗವಹಿಸಿದ ನಂತರದ ತಮ್ಮ ಅನುಭವವನ್ನು ವಿವರಿಸಿದ್ದಾರೆ.
10 ಕಿ.ಮೀ. ಮಾರ್ಗದ ಒಂದೇ ಒಂದು ಭಾಗವು ಗುಂಡಿಗಳಿಂದ ಮುಕ್ತವಾಗಿಲ್ಲ, ಇದರಿಂದಾಗಿ ಹಲವಾರು ಓಟಗಾರರು ಎಡವಿದರು. ಮತ್ತು ಕಾಲು ಉಳುಕಿಸಿಕೊಂಡರು ಎಂದು ತಿಳಿಸಿದ್ದಾರೆ. ಅಸಮ ರಸ್ತೆಗಳು, ಮುರಿದ ಪಾದಚಾರಿ ಮಾರ್ಗಗಳು ಮತ್ತು ಕಳಪೆ ನಿರ್ವಹಣೆಯಿಂದಾಗಿ ಹಿರಿಯ ನಾಗರಿಕರು ಮತ್ತು ಅಂಗವಿಕಲರು ಹಲವು ಸವಾಲುಗಳನ್ನು ಎದುರಿಸಿದರು ಎಂದು ಮಾಹಿತಿ ನೀಡಿದರು.
ಬೆಂಗಳೂರಿನ ರಸ್ತೆಗಳು ಪ್ರಸ್ತುತ ನಿರ್ಮಾಣ ಸ್ಥಳಗಳನ್ನು ಹೋಲುತ್ತವೆ, ರಸ್ತೆಗಳು ಧೂಳು ಮತ್ತು ಗುಂಡಿಗಳಿಂದ ಕೂಡಿದೆ" ಎಂದು ಸೂರ್ಯ ಹೇಳಿದರು. ನಗರದ ಎಲ್ಲಾ ರಸ್ತೆಗಳನ್ನು ಒಂದೇ ಬಾರಿ ದುರಸ್ತಿ ಮಾಡುವುದು ತಕ್ಷಣ ಸಾಧ್ಯವಾಗದ ವಿಚಾರ ಎನ್ನುವುದು ತಿಳಿದಿದ್ದರೂ, ಕನಿಷ್ಠ ಓಟ ನಡೆಯುವ 10 ಕಿ.ಮೀ ಮಾರ್ಗವನ್ನಾದರೂ ಮುಂದಿನ ಎರಡು ವಾರಗಳಲ್ಲಿ ಸರಿಪಡಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.
ವಿಐಪಿಗಳ ಓಡಾಟಕ್ಕಾಗಿ ರಸ್ತೆಗಳನ್ನು ರಾತ್ರೋರಾತ್ರಿ ದುರಸ್ತಿ ಮಾಡಬಹುದಾದರೆ, ಬೆಂಗಳೂರಿನ ಸಾಮಾನ್ಯ ಜನರಿಗೆ ಖಂಡಿತವಾಗಿಯೂ ಎರಡು ವಾರಗಳಲ್ಲಿ ದುರಸ್ತಿ ಮಾಡಬಹುದು.