ಬೆಳಗಾವಿ: ಬೆಳಗಾವಿಯಲ್ಲಿ ಜಿಲ್ಲಾ ನಗರಾಭಿವೃದ್ಧಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್(ಎಇಇ) ಮನೆ ಮೇಲೆ ಲೋಕಾಯುಕ್ತರು ಅಧಿಕಾರಿಗಳು ದಾಳಿ ನಡೆಸಿದ್ದು, ಚಿನ್ನ, ಬೆಳ್ಳಿ, ಬ್ಯಾಂಕ್ ಠೇವಣಿ ಮತ್ತು ಆಸ್ತಿ ಸೇರಿದಂತೆ 14 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ಅಕ್ರಮ ಆಸ್ತಿ ಪತ್ತೆಯಾಗಿದೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.
ಜಿಲ್ಲಾ ನಗರಾಭಿವೃದ್ಧಿ ಕೋಶದ(ಡಿಯುಡಿಸಿ) ಎಇಇ ಅಜಯ್ಸಿಂಗ್ ಬಾಪುಸಿಂಗ್ ರಾಜಾಪುರ ಅವರ ಮನೆಗಳ ಮೇಲೆ ದಾಳಿ ನಡೆಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಶುಕ್ರವಾರ ರಾಜಾಪುರ ಅವರ ಮನೆ, ಕಚೇರಿ ಮತ್ತು ಬ್ಯಾಂಕ್ ಸೇರಿದಂತೆ ಏಳು ಸ್ಥಳಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಾರ್ಯಾಚರಣೆಯ ಸಮಯದಲ್ಲಿ, ಅಧಿಕಾರಿಗಳು ಬೆಳಗಾವಿಯಲ್ಲಿ ಮೂರು ಮನೆಗಳು, ಒಂದು ಕಚೇರಿ ಮತ್ತು ಬ್ಯಾಂಕ್ ಲಾಕರ್ ಅನ್ನು ಪರಿಶೀಲಿಸಿದ್ದಾರೆ. ಈ ವೇಳೆ ಸವದತ್ತಿ, ಹುಕ್ಕೇರಿ, ಹುಬ್ಬಳ್ಳಿಯಲ್ಲಿ 18 ನಿವೇಶನ ಪತ್ತೆಯಾಗಿದ್ದರೆ ಮನೆಯಲ್ಲಿ 5.96 ಕೆಜಿ ಮೌಲ್ಯದ ಚಿನ್ನ, 5 ಕೆಜಿ ಬೆಳ್ಳಿ, 3.12 ಕೋಟಿ ಡೆಪಾಸಿಟ್, ಐಷಾರಾಮಿ ಕಾರು, ಬೈಕ್ಗಳು ಪತ್ತೆಯಾಗಿವೆ.
ಅಧಿಕಾರಿಗಳ ಪ್ರಕಾರ, ವಶಪಡಿಸಿಕೊಂಡ ಆಸ್ತಿಗಳಲ್ಲಿ 5.96 ಕೆಜಿ ಚಿನ್ನ, 5 ಕೆಜಿ ಬೆಳ್ಳಿ, 3.12 ಕೋಟಿ ರೂ. ಬ್ಯಾಂಕ್ ಠೇವಣಿ ಮತ್ತು ಐಷಾರಾಮಿ ಕಾರುಗಳು ಮತ್ತು ಬೈಕ್ಗಳು ಸೇರಿವೆ.
ಒಟ್ಟಾರೆಯಾಗಿ, ಇಲ್ಲಿಯವರೆಗೆ 14 ಕೋಟಿ ರೂ.ಗೂ ಹೆಚ್ಚು ಮೌಲ್ಯದ ಚರ ಮತ್ತು ಸ್ಥಿರ ಆಸ್ತಿಗಳು ಪತ್ತೆಯಾಗಿವೆ.
ಅಧಿಕಾರಿಯ ವಿರುದ್ಧ ಆದಾಯಕ್ಕೆ ಮೀರಿದ ಆಸ್ತಿ ಹೊಂದಿದ್ದಕ್ಕಾಗಿ ಭ್ರಷ್ಟಾಚಾರ ತಡೆ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಆದಾಯಕ್ಕೆ ಮೀರಿದ ಆಸ್ತಿಗಳ ಬಗ್ಗೆ ತನಿಖೆ ಮುಂದುವರೆದಿದೆ ಎಂದು ಲೋಕಾಯುಕ್ತರು ತಿಳಿಸಿದ್ದಾರೆ.
ದಿನಗೂಲಿ ನೌಕರನೊಬ್ಬ ಕುಬೇರನಾದ ಕಥೆ
ಮೂಲತಃ ಹುಕ್ಕೇರಿಯವರಾದ ಅಜಯಸಿಂಗ್ ಅವರು 1992ರಲ್ಲಿ ದಿನಗೂಲಿ ನೌಕರನಾಗಿ ಸೇವೆ ಆರಂಭಿಸಿದ್ದನು. 2006ರವರೆಗೂ ದಿನಗೂಲಿ ನೌಕರನಾಗಿಯೇ ಮುಂದುವರಿದಿದ್ದು, 2008ರಲ್ಲಿ ಸರ್ಕಾರ ಅವರ ಸೇವೆಯನ್ನು ಖಾಯಂಗೊಳಿಸಿತ್ತು. ಬಳಿಕ ಅಸಿಸ್ಟೆಂಟ್ ಇಂಜಿನಿಯರ್, ಜ್ಯೂನಿಯರ್ ಇಂಜಿನಿಯರ್ ಹೀಗೆ ಹಂತಹಂತವಾಗಿ ಬೆಳೆದ ಅಜಯಸಿಂಗ್ ಇದೀಗ ನಗರಾಭಿವೃದ್ಧಿ ಇಲಾಖೆ ಎಇಇ ಹುದ್ದೆವರೆಗೆ ಏರಿದ್ದಾರೆ. ಆದರೆ ಈ ಅವಧಿಯಲ್ಲಿ ಸುಳ್ಳು ಆದಾಯ ತೋರಿಸಿ ಕೋಟಿ ಕೋಟಿ ಅಕ್ರಮ ಆಸ್ತಿ ಸಂಪಾದನೆ ಮಾಡಿರುವ ಆರೋಪ ಅವರ ವಿರುದ್ಧ ಕೇಳಿಬಂದಿದೆ.