ಬೆಂಗಳೂರು: ಕನ್ನಡ ನಟ ಉಪೇಂದ್ರ ಅವರು ತಮ್ಮ ಪಕ್ಷ ‘ಪ್ರಜಾಕೀಯ’ದ ವೆಬ್ ಸೈಟ್ ನ್ನು ಆರಂಭಿಸಿದ್ದಾರೆ. ಈ ವೆಬ್ಸೈಟ್ನಲ್ಲಿ ಪ್ರತಿಯೊಂದು ವಿಧಾನಸಭಾ ಕ್ಷೇತ್ರದ ಪಕ್ಷದ ಕಾರ್ಯಕರ್ತರ ಮಾಹಿತಿ ಮತ್ತು ಆರೋಗ್ಯ, ಉದ್ಯೋಗ ಹಾಗೂ ಮೂಲಸೌಕರ್ಯ ಸಂಬಂಧಿತ ಸಮಸ್ಯೆಗಳನ್ನು ವರದಿ ಮಾಡುವ ಅವಕಾಶ ಇದೆ.
ನಿನ್ನೆ ಸೋಮವಾರ ಸಂಜೆ ವೇಳೆಗೆ 15,065 ನಾಗರಿಕರು ಮತ್ತು 250 ಚುನಾವಣಾ ಟಿಕೆಟ್ ಆಸಕ್ತರು ಈ ವೆಬ್ಸೈಟ್ನಲ್ಲಿ ನೋಂದಾಯಿಸಿಕೊಂಡಿದ್ದಾರೆ.
ಟಿಕೆಟ್ ಆಸಕ್ತರು ಒಂದು ಘೋಷಣೆ ಮತ್ತು ಒಪ್ಪಂದಕ್ಕೆ ಸಹಿ ಹಾಕಬೇಕು. ಅದರ ಪ್ರಕಾರ, ಅವರು ಆಯ್ಕೆಯಾದ ನಂತರ ತಮ್ಮ ಕ್ಷೇತ್ರದ ಜನರಿಗಾಗಿ ಕೆಲಸ ಮಾಡಬೇಕು, ಪ್ರತಿ ಆರು ತಿಂಗಳಿಗೆ ಒಮ್ಮೆ ಕಾರ್ಯಕ್ಷಮತಾ ಮೌಲ್ಯಮಾಪನಕ್ಕೆ ಒಳಗಾಗಬೇಕು. 50ಶೇಕಡಾಕ್ಕಿಂತ ಹೆಚ್ಚು ನಾಗರಿಕರು ಅಸಮಾಧಾನ ವ್ಯಕ್ತಪಡಿಸಿದರೆ ಮತ್ತೊಮ್ಮೆ ಮೌಲ್ಯಮಾಪನ ನಡೆಯುತ್ತದೆ. ಎರಡನೇ ಮೌಲ್ಯಮಾಪನದಲ್ಲಿಯೂ ವಿಫಲವಾದರೆ, ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಬೇಕು.
ಆಸಕ್ತರು ತಮ್ಮ ಮೂಲಭೂತ ಮಾಹಿತಿಯನ್ನು ನೀಡಬೇಕು ಮತ್ತು ತಮ್ಮ ಆಸಕ್ತಿಗಳನ್ನು ವ್ಯಕ್ತಪಡಿಸಬೇಕು. ಟಿಕೆಟ್ಗೆ ಅರ್ಜಿ ಸಲ್ಲಿಸಲು ಅಂತಿಮವಾಗಿ ಒಂದು ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್ (SOP) ಗೆ ಸಹಿ ಹಾಕಬೇಕು.
ಜನರು ವೆಬ್ಸೈಟ್ನಲ್ಲಿ ನೀಡಿರುವ ಫೋನ್ ಮತ್ತು ವಾಟ್ಸಾಪ್ ಸಂಖ್ಯೆಗಳ ಮೂಲಕ ಆಸಕ್ತರನ್ನು ಸಂಪರ್ಕಿಸಬಹುದು. ನಾಗರಿಕರು ತಮ್ಮ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡ ನಂತರ ಉದ್ಯೋಗ, ಆರೋಗ್ಯ, ಶಿಕ್ಷಣ, ರಸ್ತೆ, ನೀರು, ಒಳಚರಂಡಿ ಮತ್ತು ಕಸದ ಸಮಸ್ಯೆಗಳ ಬಗ್ಗೆ ವರದಿ ಮಾಡಬಹುದು.
‘ಪ್ರಜಾಕೀಯ’ ಪಕ್ಷವನ್ನು 2018ರಲ್ಲಿ ಸಮಾಜವಾದಿ ಪಕ್ಷವೆಂದು ಹೇಳಿಕೊಂಡು ಉಪೇಂದ್ರ ಆರಂಭಿಸಿದ್ದರು. ಇದು 2019ರ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ ಎಲ್ಲಾ ಕ್ಷೇತ್ರಗಳಲ್ಲಿ ಸ್ಪರ್ಧಿಸಿತ್ತು.