ಬೆಂಗಳೂರು: ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಮುಂದಾಳತ್ವದಲ್ಲಿ ರಚನೆಯಾದ ಸಂವಿಧಾನವೇ ನಮ್ಮ ದೇಶದ ಭಗವದ್ಗೀತೆ, ಕುರಾನ್, ಬೈಬಲ್ ಎಂದು ನಾವು ಪೂಜಿಸಿ ಬದುಕುತ್ತಿದ್ದೇವೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ನಿನ್ನೆ ಏಪ್ರಿಲ್ 14ರಂದು ಕೆಪಿಸಿಸಿ ಕಚೇರಿಯ ಭಾರತ್ ಜೋಡೋ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಡಾ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಕೊಟ್ಟಿರುವ ಸಂವಿಧಾನವೇ ನಮ್ಮ ಈ ಪ್ರಜಾಪ್ರಭುತ್ವ ದೇಶಕ್ಕೆ ನೀಡಿರುವ ಬೆಳಕು. ಅಂಬೇಡ್ಕರ್ ಅವರು ಅಸಮಾನತೆ ನಿವಾರಣೆಗೆ, ಭೇದ ಭಾವ ಹೋಗಲಾಡಿಸಲು ಶ್ರಮಪಟ್ಟವರು ಎಂದರು.
ಅಂಬೇಡ್ಕರ್ ಅವರು ತಮ್ಮದೇ ಪಕ್ಷವನ್ನು ಸ್ಥಾಪಿಸಿದರು. ಕಾಂಗ್ರೆಸ್ ಪಕ್ಷ ಭಿನ್ನ ರಾಜಕೀಯ ನಿಲುವುಗಳನ್ನು ಹೊಂದಿದ್ದರೂ ಅಂಬೇಡ್ಕರ್ ಅವರಿಗೆ ಮಹೋನ್ನತ ಜವಾಬ್ದಾರಿಗಳನ್ನು ನೀಡಿತ್ತು. ಈ ದೇಶವನ್ನು ಮುನ್ನಡೆಸಲು ವಿದ್ಯಾವಂತರು, ಬುದ್ಧಿವಂತರು ಇರಬೇಕು ಎಂದು ಜವಾಹರ್ ಲಾಲ್ ನೆಹರು ಅವರು ತಮ್ಮ ಸಂಪುಟದಲ್ಲಿ ಅಂಬೇಡ್ಕರ್ ಅವರಿಗೆ ಸ್ಥಾನ ನೀಡಿದರು ಎಂದು ಹೇಳಿದರು.
ಸಂಘಟಿತರಾಗಿ, ವಿದ್ಯಾವಂತರಾಗಿ, ಹೋರಾಟ ಮಾಡಿ ಎಂದು ಮಾತ್ರ ಅಂಬೇಡ್ಕರ್ ಅವರು ಹೇಳಲಿಲ್ಲ. ಪ್ರಜಾಪ್ರಭುತ್ವ ಎಂದರೆ ಸರ್ವ ಜನಾಂಗಗಳು ಒಗ್ಗೂಡಿ ಮುನ್ನಡೆಸುವ ಸಾಧನ ಎಂದಿದ್ದರು. ಎಲ್ಲಾ ಧರ್ಮ ಜಾತಿಗಳು ಸಂವಿಧಾನದ ಅಡಿಯಲ್ಲಿ ಬಂದು ಇಡೀ ದೇಶವೇ ಇದನ್ನು ಒಪ್ಪುವಂತೆ ಮಾಡಿದವರು ಎಂದರು.
ತಾನು ಅಭಿವೃದ್ಧಿಯಾಗುವುದರ ಜತೆಗೆ ಇತರರನ್ನು ಬೆಳೆಸಬೇಕು ಎಂಬುದು ಅಂಬೇಡ್ಕರ್ ಅವರ ಆಶಯವಾಗಿತ್ತು. ಸಂವಿಧಾನದ ಕಾರಣಕ್ಕೆ ಅನೇಕ ಶೋಷಿತ ವರ್ಗಗಳು ಮೀಸಲಾತಿ ಪಡೆದಿವೆ. ಇದರಿಂದ ನಾಯಕರು ಬೆಳೆದಿದ್ದಾರೆ. ಅವರೂ ಸಹ ಮೀಸಲಾತಿ ಪಡೆದಿದ್ದಾರೆ.
ಆದರೆ ಪಡೆದ ಸೌಲಭ್ಯವನ್ನು ಬಳಸಿಕೊಂಡು ತಮ್ಮ ಸಮುದಾಯದ ನೊಂದ ಎಷ್ಟು ಜನರನ್ನು ಮೇಲಕ್ಕೆ ಎತ್ತಿದ್ದಾರೆ ಎಂಬುದು ಮುಖ್ಯವಾಗುತ್ತದೆ ಎಂದರು. ನಮ್ಮನ್ನು ನಂಬಿದ ಸಮಾಜವನ್ನು ಎಷ್ಟು ಮುಂದುವರಿಯುವಂತೆ ಮಾಡಿದ್ದೇವೆ. ಎಷ್ಟು ಜನ ಸುಖಿಗಳಾಗಿದ್ದಾರೆ, ಶಾಂತಿಯಿಂದ ಬದುಕುತ್ತಿದ್ದಾರೆ ಎಂಬುದು ಇಲ್ಲಿ ಮುಖ್ಯವಾಗುತ್ತದೆ. ಅದಕ್ಕೆ ಇತಿಹಾಸವನ್ನು ಮರೆತವನು ಎಂದಿಗೂ ಇತಿಹಾಸ ಸೃಷ್ಟಿಸಲು ಸಾಧ್ಯವಿಲ್ಲ ಎಂದು ಹೇಳಿದರು.
ಪರಿಶಿಷ್ಟ ಜಾತಿ ಪಂಗಡಗಳ ಅಭಿವೃದ್ದಿಗೆ 80 ಸಾವಿರ ಕೋಟಿಯನ್ನು ಕೇಂದ್ರ ಸರ್ಕಾರ ಈ ಹಿಂದೆ ನೀಡುತ್ತಾ ಇತ್ತು. ಆಗ ಬೆಳಗಾವಿ ಅಧಿವೇಶನದಲ್ಲಿ ಅಂದು ಸಚಿವರಾಗಿದ್ದ ಆಂಜನೇಯ ಅವರು ಎಸ್ಇಎಸ್ಪಿ, ಟಿಎಸ್ಪಿ ಕಾಯ್ದೆಯ ಅಡಿ 29 ಸಾವಿರ ಕೋಟಿ ನೀಡಿದ್ದು ಕರ್ನಾಟಕ ಕಾಂಗ್ರೆಸ್ ಸರ್ಕಾರ. ಆದರೂ ಬಿಜೆಪಿಯವರು ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಿದ್ದಾರೆ. ಶೋಷಿತ ಜನಾಂಗಗಳ ಪರವಾಗಿ ಚಿಂತನೆ ಮಾಡುವ ಏಕೈಕ ಪಕ್ಷ ಕಾಂಗ್ರೆಸ್ ಎಂದರು.
ಮಹಿಳೆಯರಿಗೆ ಶೇ. 50 ರಷ್ಟು ಮೀಸಲಾತಿಯನ್ನು ನೀಡಿದ್ದು ಕಾಂಗ್ರೆಸ್ ಪಕ್ಷ. ಜಿಬಿಎನಲ್ಲಿ ಇದನ್ನು ಜಾರಿಮಾಡಲಾಗಿದೆ. ಸೋನಿಯಾ ಗಾಂಧಿ ಅವರು ಅಂದು ರಾಜ್ಯಸಭೆಯಲ್ಲಿ ಮಹಿಳಾ ಮೀಸಲಾತಿ ಕಾಯ್ದೆಯನ್ನು ಮಂಡಿಸಿದ್ದರು. ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಸ್ಪರ್ಧಿಸಿ ನಾಯಕರಾಗಿ ಹೊರಹೊಮ್ಮಿ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದರು.