ಬೆಂಗಳೂರು: ನಗರದ ಫ್ಲೈಓವರ್ಗಳ ಕೆಳಭಾಗದಲ್ಲಿ ಕಸದ ರಾಶಿ, ಧೂಳು, ಅನಾಥವಾಗಿ ನಿಂತ ವಾಹನಗಳು ಕಾಣಿಸುವುದು ಸಾಮಾನ್ಯ. ಇದೇ ರೀತಿ ಬೆಳ್ಳಂದೂರು ಫ್ಲೈಓವರ್ ಕೂಡ ಕಸದ ರಾಶಿಯಿಂದ ಗಬ್ಬೆದ್ದು ನಾರುತ್ತಿತ್ತು. ಆದರೀಗ ಇಲ್ಲಿನ ಸಂಪೂರ್ಣ ಚಿತ್ರಣವೇ ಬದಲಾಗಿದೆ.
ಈ ಹಿಂದೆ ಕಸ ಮತ್ತು ಧೂಳಿನಿಂದ ಕೂಡಿದ್ದ ಬೆಳ್ಳಂದೂರು ಫ್ಲೈಓವರ್ ಕೆಳಭಾಗದ ಜಾಗವನ್ನು ಈಗ ಸುಂದರವಾದ ಸಾರ್ವಜನಿಕ ಸ್ಥಳವಾಗಿ ಅಭಿವೃದ್ಧಿಪಡಿಸಲಾಗಿದೆ.
ಇಂಟೆಲ್ ಇಂಡಿಯಾ ಕಂಪನಿಯ ಸಿ.ಎಸ್.ಆರ್ ಅನುದಾನದಡಿ ಮತ್ತು ರೈಸಿಂಗ್ ಇಂಡಿಯಾ ಟ್ರಸ್ಟ್ ಸಹಯೋಗದೊಂದಿಗೆ ಈ ಜಾಗದಲ್ಲಿ ಗಿಡಗಳನ್ನು ಬೆಳೆಸಿ, ಕಲಾತ್ಮಕ ವಿನ್ಯಾಸ ಮತ್ತು ಆಸನ ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ.
ಪಾದಚಾರಿ ಮೊದಲು' (Pedestrian First) ಎಂಬ ವಿನ್ಯಾಸದಡಿ ವಿಶಾಲವಾದ ಫುಟ್ಪಾತ್ಗಳನ್ನು ನಿರ್ಮಿಸಲಾಗಿದೆ. ಸಾರ್ವಜನಿಕರಿಗೆ ವಿಶ್ರಮಿಸಲು ಆಸನ ವ್ಯವಸ್ಥೆಗಳು, ಹಸಿರು ಗಿಡಗಳು ಮತ್ತು ಕಲಾತ್ಮಕ ಗೋಡೆ ವಿನ್ಯಾಸಗಳನ್ನು ಅಳವಡಿಸಲಾಗಿದೆ.
ಈ ಜಾಗದಲ್ಲಿ ಪೌರಕಾರ್ಮಿಕರಿಗಾಗಿ ಪ್ರತ್ಯೇಕ 'ಸುವಿಧಾ' (Suvidha) ಕ್ಯಾಬಿನ್ಗಳನ್ನು ಸ್ಥಾಪಿಸಲಾಗಿದ್ದು, ಇದರಲ್ಲಿ ಅವರಿಗೆ ಮೂಲಭೂತ ಸೌಕರ್ಯಗಳು ಮತ್ತು ಸುಧಾರಿತ ಕೆಲಸದ ವಾತಾವರಣ ಸಿಗಲಿದೆ.
ಏಪ್ರಿಲ್ 15, 2026 ರಂದು ಬಿಬಿಎಂಪಿ ಹೆಚ್ಚುವರಿ ಆಯುಕ್ತರಾದ (ಅಭಿವೃದ್ಧಿ) ಲೋಖಂಡೆ ಸ್ನೇಹಲ್ ಸುಧಾಕರ್ ಅವರು ಈ ಜಾಗವನ್ನು ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, "ಇದು ಪಾದಚಾರಿ ಸುರಕ್ಷತೆ, ನಗರ ಸೌಂದರ್ಯವನ್ನು ಹೆಚ್ಚಿಸುವ ಮತ್ತು ನಾಗರಿಕರಿಗೆ ಸುರಕ್ಷಿತ ಸಾರ್ವಜನಿಕ ಸ್ಥಳಗಳನ್ನು ಸೃಷ್ಟಿಸುವ ಗುರಿಯನ್ನು ಹೊಂದಿದೆ" ಎಂದು ಹೇಳಿದರು.
ಈ ಯೋಜನೆಯು ನಗರದ ಇತರ ಕಡೆಗಳಲ್ಲೂ ಇಂತಹ ಬಳಕೆಯಿಲ್ಲದ ಜಾಗಗಳನ್ನು ಹೇಗೆ ಸಾರ್ವಜನಿಕ ಉಪಯೋಗಕ್ಕೆ ಬಳಸಿಕೊಳ್ಳಬಹುದು ಎಂಬುದಕ್ಕೆ ಒಂದು ಉತ್ತಮ ಉದಾಹರಣೆಯಾಗಿದೆ.