ಬೆಂಗಳೂರು: ಇಡ್ಲಿ, ವಡೆ ಮತ್ತು ಸಾಂಬಾರ್-ಅನ್ನ ಸೇವಿಸಿದ ನಂತರ 97 ಉದ್ಯೋಗಿಗಳು ಅಸ್ವಸ್ಥರಾದ ಘಟನೆಯೊಂದು ಬೆಂಗಳೂರಿನಲ್ಲಿ ವರದಿಯಾಗಿದೆ.
ಉತ್ತರ ಬೆಂಗಳೂರಿನ ದೇವನಹಳ್ಳಿಯ ಖಾಸಗಿ ಕಂಪನಿಯ ಕ್ಯಾಂಟೀನ್ನಲ್ಲಿ ಇಡ್ಲಿ, ವಡೆ ಮತ್ತು ಸಾಂಬಾರ್-ಅನ್ನ ತಿಂದ ನಂತರ 97 ಉದ್ಯೋಗಿಗಳು ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ತಿಳಿದುಬಂದಿದೆ.
ಮೂಲಗಳ ಪ್ರಕಾರ ಉದ್ಯೋಗಿಗಳು ಕಚೇರಿ ಕ್ಯಾಂಟೀನ್ನಲ್ಲಿ ಆಹಾರ ಸೇವಿಸಿದ್ದರು. ಉದ್ಯೋಗಿಗಳು ಬೆಳಗಿನ ಉಪಾಹಾರ ಮತ್ತು ಮಧ್ಯಾಹ್ನದ ಊಟದ ಸಮಯದಲ್ಲಿ ಇಡ್ಲಿ, ವಡೆ, ಸಾಂಬಾರ್ ಮತ್ತು ಅನ್ನವನ್ನು ಸೇವಿಸಿದ್ದರು. ನಂತರ ಅವರಿಗೆ ಹೊಟ್ಟೆ ನೋವು, ವಾಂತಿ, ಭೇದಿ ಮತ್ತು ವಿಷಾಹಾರ(Food Poisoning)ದ ಇತರ ಲಕ್ಷಣಗಳು ಕಂಡುಬಂದಿವೆ ಎಂದು ಹೇಳಲಾಗಿದೆ.
ಪ್ರಸ್ತುತ ಅಸ್ವಸ್ಥ ಉದ್ಯೋಗಿಗಳನ್ನು ಎರಡು ಖಾಸಗಿ ಆಸ್ಪತ್ರೆಗಳಿಗೆ ದಾಖಲಿಸಲಾಗಿದ್ದು, ಅವರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ಯಾವುದೇ ಪ್ರಾಣಾಪಾಯವಿಸಿಲ್ಲ ಎಂದು ಹೇಳಿದ್ದಾರೆ ಎಂದು ವರದಿಯಾಗಿದೆ. ಅಸ್ವಸ್ಥ ಉದ್ಯೋಗಿಗಳ ಆರೋಗ್ಯ ಸ್ಥಿರಗೊಳಿಸಲು ಅವರಿಗೆ ಐವಿ ಫ್ಲೂಯಿಡ್ಸ್ (IV fluids) ಮೂಲಕ ಚಿಕಿತ್ಸೆ ನೀಡಲಾಗಿದೆ ಎಂದು ವೈದ್ಯರೊಬ್ಬರು ತಿಳಿಸಿದ್ದಾರೆ.
ಮುಂಜಾಗ್ರತಾ ಕ್ರಮವಾಗಿ ಕ್ಯಾಂಟೀನ್ ನ ಉಳಿದ ಆಹಾರದ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು, ಫಲಿತಾಂಶಕ್ಕಾಗಿ ಕಾಯಲಾಗುತ್ತಿದೆ.
ಉದ್ಯೋಗಿಗಳ ಆರೋಗ್ಯಕ್ಕೆ ಕುತ್ತು ತಂದ ಇಡ್ಲಿ, ವಡೆ?
ಇನ್ನು ಉದ್ಯೋಗಿಗಳ ದಿಢೀರ್ ಅಸ್ವಸ್ಥತೆಗೆ ಹುದುಗಿಸಿದ ಆಹಾರಗಳು ಅಂದರೆ ಫರ್ಮಂಟೆಡ್ ಆಹಾರಗಳು ಕಾರಣವಾಗಿರಬಹುದು ಎಂದು ಹೇಳಲಾಗಿದೆ. ಈ ಆಹಾರಗಳು ಬೇಸಿಗೆಯಲ್ಲಿ ವಿಭಿನ್ನವಾಗಿ ಪ್ರತಿಕ್ರಿಯಿಸುತ್ತವೆ, ಆದ್ದರಿಂದ ಅವುಗಳ ನಿರ್ವಹಣೆ ಮತ್ತು ಸೇವನೆಯಲ್ಲಿ ಹೆಚ್ಚಿನ ಜಾಗರೂಕತೆ ಅಗತ್ಯ ಎಂದು ತಜ್ಞರು ತಿಳಿಸಿದ್ದಾರೆ.