ಹಾವೇರಿ: ದೇಶದ ಪ್ರಮುಖ ಟೆಕ್ ಕಂಪನಿ ಟಿಸಿಎಸ್ ನಲ್ಲಿ ಲವ್ ಜಿಹಾದ್ ಕರ್ಮಕಾಂಡಗಳು ಬಯಲಾದ ಬೆನ್ನಲ್ಲೇ ಈಗ ಹಾವೇರಿಯಲ್ಲೂ ಲವ್ ಜಿಹಾದ್ ಆರೋಪಗಳು ಕೇಳಿ ಬಂದಿವೆ.
ಇಂದು ಬೆಳಗ್ಗೆ ಮಗಳ ನಿಶ್ಚಿತಾರ್ಥ ಮಾಡಲು ಸಜ್ಜಾಗಿದ್ದ ಕುಟುಂಬಕ್ಕೆ ದೊಡ್ಡ ಆಘಾತ ಎದುರಾಗಿದೆ. ನಿಶ್ಚಿತಾರ್ಥ ಮಾಡಿಕೊಳ್ಳಬೇಕಿದ್ದ ಯುವತಿ ಮಧ್ಯರಾತ್ರಿಯೇ ನಾಪತ್ತೆಯಾಗಿದ್ದು, ಎಂಗೇಜ್ಮೆಂಟ್ ಮುರಿದು ಬಿದ್ದಿದೆ.
ನರೇಗಲ್ ಗ್ರಾಮದ ಇಬ್ರಾಹಿಂ ನೆಗಳೂರು ಎಂಬಾತ ನಮ್ಮ ಮನೆಯ ಹುಡುಗಿಯನ್ನ ಪುಸಲಾಯಿಸಿ ಕರೆದೊಯ್ದು ಲವ್ ಜಿಹಾದ್ಗೆ ಯತ್ನಿಸಿದ್ದಾನೆ ಎಂದು ಯುವತಿ ಕುಟುಂಬಸ್ಥರು ಆರೋಪಿಸಿದ್ದಾರೆ.
ಪೋಷಕರು ತಮ್ಮ ಮಗಳ ನಿಶ್ಚಿತಾರ್ಥವನ್ನು ಅದ್ದೂರಿಯಾಗಿ ಮಾಡಲು ಭರ್ಜರಿ ಸಿದ್ಧತೆ ಮಾಡಿಕೊಂಡಿದ್ದರು. ಅಲ್ಲದೆ ಮೇ 11ಕ್ಕೆ ಮದುವೆ ಡೇಟ್ ಕೂಡ ಫಿಕ್ಸ್ ಆಗಿತ್ತು. ಆದ್ರೆ ಹಸೆಮಣೆ ಏರಬೇಕಿದ್ದ ಯುವತಿ ರಾತ್ರೋ ರಾತ್ರಿ ಪರಾರಿಯಾಗಿ ಮನೆ ಮಂದಿಗೆ ಶಾಕ್ ಕೊಟ್ಟಿದ್ದಾಳೆ.
ಹಾನಗಲ್ ತಾಲೂಕಿನ ಶಂಕ್ರಿಕೊಪ್ಪದ ಗ್ರಾಮದ ಹಿಂದೂ ಯುವತಿ ಶಂಕ್ರಮ್ಮ ಎಂಬಾಕೆಯನ್ನ ಮುಸ್ಲಿಂ ಯುವಕ ಇಬ್ರಾಹಿಂ ಎಂಬಾತನೇ ಕರೆದುಕೊಂಡು ಹೋಗಿದ್ದಾನೆ ಎಂದು ಯುವತಿ ಪೋಷಕರು ಆರೋಪಿಸಿದ್ದಾರೆ.
ಮತ್ತೊಂದೆಡೆ ಇದು ಪಕ್ಕಾ ಲವ್ ಜಿಹಾದ್ ಎಂದು ಹಿಂದೂಪರ ಸಂಘಟನೆಗಳು ಆಕ್ರೋಶ ಹೊರಹಾಕಿವೆ.
ರಾತ್ರಿ ನಿಶ್ಚಿತಾರ್ಥದ ಹುಡುಗನ ಜತೆ ಪೋನ್ ನಲ್ಲಿ ಮಾತನಾಡಿದ್ದ ಯುವತಿ ಬೆಳಗ್ಗೆ ಆಗುವಷ್ಟರಲ್ಲಿ ನಾಪತ್ತೆಯಾಗಿದ್ದಾಳೆ. ಮನೆ ಹಿಂಬದಿ ಬಾಗಿಲಿನಿಂದ ಬಂದ ಇಬ್ರಾಹಿಂ ಆಕೆಯನ್ನ ಕರೆದೊಯ್ದು ಆರೋಪ ಕೇಳಿಬಂದಿದೆ. ನಮ್ಮ ಮಗಳು ಬೇಕು ಎಂದು ಪೊಲೀಸ್ ಠಾಣೆ ಮುಂದೆ ತಾಯಿ ಕಣ್ಣೀರು ಹಾಕಿದ್ದಾರೆ.
ಈ ಸಂಬಂಧ ಅಡೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.