ಬೆಳಗಾವಿ: ಸಮಾಜದಲ್ಲಿ ಇನ್ನೂ ಸಾಮಾಜಿಕ ಬಹಿಷ್ಕಾರದಂತಹ ಕಠಿಣ ಪದ್ಧತಿಗಳು ಮುಂದುವರಿಯುತ್ತಿರುವುದಕ್ಕೆ ಬೆಳಗಾವಿ ಜಿಲ್ಲೆಯ ಈ ಘಟನೆ ಸಾಕ್ಷಿಯಾಗಿದೆ.
ಕುರಬ ಸಮುದಾಯದ ಒಂದು ಕುಟುಂಬ, ತಮ್ಮದೇ ಸಮುದಾಯದಿಂದ ಬಹಿಷ್ಕಾರಕ್ಕೆ ಒಳಗಾಗಿ ಕೊನೆಗೆ ಗ್ರಾಮ ಬಿಟ್ಟು ತೆರಳಬೇಕಾದ ಪರಿಸ್ಥಿತಿ ಎದುರಿಸಿದೆ.
ಬೆಳಗಾವಿ ಗ್ರಾಮಾಂತರ ಕ್ಷೇತ್ರದ ಕೊಂಡಸ್ಕೊಪ್ಪ ಗ್ರಾಮದಲ್ಲಿರುವ ನರಸೋಬ ಸಾಂಬ್ರೇಕರ್ ಅವರ ಕುಟುಂಬ ಸಮುದಾಯದಿಂದ ಬಹಿಷ್ಕಾರಕ್ಕೊಳಗಾದ ಕುಟುಂಬವಾಗಿದೆ.
ನರಸೋಬ ಸಾಂಬ್ರೇಕರ್ ಅವರು ಸ್ಥಳೀಯ ಬೀರದೇವರ ದೇವಸ್ಥಾನದ ಪೂಜಾರಿಗಳಾಗಿದ್ದು, ದೇವಸ್ಥಾನದ ಆಚರಣೆಗಳಿಗೆ ಸಂಬಂಧಿಸಿದ ವಿವಾದ ಮತ್ತು ಕುಟುಂಬದ ಒಬ್ಬ ಸದಸ್ಯನ ಅಂತರ್ ಸಮುದಾಯ ಸಂಬಂಧ ವಿಚಾರವನ್ನು ಮುಂದಿಟ್ಟುಕೊಂಡು ಗ್ರಾಮದ ಕೆಲವರು ಕುಟುಂಬವನ್ನು ಸಮಾಜದಿಂದ ದೂರ ಇಡುವಂತೆ ಆಜ್ಞೆ ಹೊರಡಿಸಿದ್ದಾರೆ. ಅಲ್ಲದೆ, ಕುಟುಂಬದೊಂದಿಗೆ ಮಾತನಾಡಿದವರಿಗೆ ರೂ.5 ಸಾವಿರ ದಂಡ ವಿಧಿಸಲಾಗುತ್ತದೆ. ಮಾಹಿತಿ ನೀಡಿದವರಿಗೆ ರೂ.1 ಸಾವಿರ ಬಹುಮಾನ ಎಂದೂ ಘೋಷಿಸಲಾಗಿದೆ ಎಂದ ತಿಳಿದುಬಂದಿದೆ.
ಬಹಿಷ್ಕಾರಕ್ಕೆ ಒಳಗಾದ ಕುಟುಂಬದವರು ತೀವ್ರ ಸಂಕಷ್ಟ ಅನುಭವಿಸುತ್ತಿದ್ದು, ಮದುವೆ, ಧಾರ್ಮಿಕ ಕಾರ್ಯಕ್ರಮಗಳು ಸೇರಿದಂತೆ ಯಾವುದೇ ಸಾಮಾಜಿಕ ಚಟುವಟಿಕೆಗೆ ಆಹ್ವಾನ ನೀಡಲಾಗುತ್ತಿಲ್ಲ. ದಿನನಿತ್ಯದ ಬದುಕಿನಲ್ಲಿಯೂ ಗ್ರಾಮಸ್ಥರು ಮಾತನಾಡುವುದನ್ನು ನಿಲ್ಲಿಸಿರುವುದಾಗಿ ಅಳಲು ತೋಡಿಕೊಂಡಿದ್ದಾರೆ.
ಈ ಬಹಿಷ್ಕಾರ ಕೇವಲ ಮಾತಿನ ಮಟ್ಟಕ್ಕೆ ಸೀಮಿತವಾಗದೇ, ಕಲ್ಲು ತೂರಾಟ, ನಿಂದನೆ, ಸಾಮಾಜಿಕವಾಗಿ ಸಂಪೂರ್ಣ ದೂರವಿಟ್ಟು, ಮದುವೆ ಮತ್ತು ಸಮುದಾಯ ಕಾರ್ಯಕ್ರಮಗಳಿಂದ ಹೊರಗುಳಿಸುವ ಮಟ್ಟಕ್ಕೆ ತಲುಪಿದೆ ಎಂದು ಕುಟುಂಬ ಆರೋಪಿಸಿದೆ. ಐದು ವರ್ಷದ ಮಗುವಿನೊಂದಿಗೂ ಕೂಡ ಯಾರು ಮಾತನಾಡುತ್ತಿಲ್ಲ ಎಂದು ಕುಟುಂಬಸ್ಥರು ಕಣ್ಣೀರಿಟ್ಟಿದ್ದಾರೆ.
ಏಪ್ರಿಲ್ 6ರಂದು ನಡೆದ ಗ್ರಾಮ ಸಭೆಯ ನಂತರ ಸಂಪೂರ್ಣವಾಗಿ ನಮ್ಮನ್ನು ಸಮಾಜದಿಂದ ದೂರ ಮಾಡಲಾಗಿದೆ. ಯಾರೂ ಮಾತನಾಡುವುದಿಲ್ಲ, ರಾತ್ರಿ ವೇಳೆ ಮನೆ ಮೇಲೆ ದಾಳಿ ನಡೆಯುತ್ತಿದೆ ಎಂದು ನರಸೋಬಾ ಹೇಳಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಕ್ಷ್ಯಗಳೂ ನಮ್ಮ ಬಳಿ ಇವೆ ಎಂದು ಅವರು ತಿಳಿಸಿದ್ದಾರೆ.
ಈ ಕುರಿತು ಹಿರೇಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದರೂ ಯಾವುದೇ ಪರಿಣಾಮಕಾರಿ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಕುಟುಂಬ ಆರೋಪಿಸಿದೆ. ದೂರು ಹಿಂಪಡೆಯುವಂತೆ ಗ್ರಾಮಸ್ಥರಿಂದ ಒತ್ತಡವೂ ಇದೆ ಎಂದು ಅವರು ಹೇಳಿದ್ದಾರೆ. ನಿರಂತರ ಹಿಂಸೆ ಮತ್ತು ಒತ್ತಡವನ್ನು ಸಹಿಸಲಾಗದೆ, ಕುಟುಂಬ ಈಗ ಬೆಳಗಾವಿ ನಗರಕ್ಕೆ ತೆರಳಿ ಅಲ್ಲಿ ತಂಗಿದೆ ಎಂದು ತಿಳಿದುಬಂದಿದೆ.
ಇದಕ್ಕೆ ಪ್ರತಿಕ್ರಿಯಿಸಿದ ಗ್ರಾಮ ಪಂಚಾಯತ್ ಸದಸ್ಯರೊಬ್ಬರು, ಕುಟುಂಬವು ಗ್ರಾಮದ ದೇವತೆ ಮತ್ತು ಹಿರಿಯರನ್ನು ಅವಮಾನಿಸಿದ್ದರಿಂದ ಈ ಪರಿಸ್ಥಿತಿ ಎದುರಾಗಿದೆ ಎಂದು ಹೇಳಿ ಆರೋಪಗಳನ್ನು ತಳ್ಳಿ ಹಾಕಿದ್ದಾರೆ.