ಶಿವಮೊಗ್ಗ : ರಾಜ್ಯದಲ್ಲಿ ವರುಣಾರ್ಭಟ ಜೋರಾಗಿದ್ದು, ಶಿವಮೊಗ್ಗ ಜಿಲ್ಲೆಯಲ್ಲಿ ನಿರಂತರ ಮಳೆಗೆ ಭಾರೀ ಅವಘಡ ಸಂಭವಿಸಿದೆ. ತೀರ್ಥಹಳ್ಳಿಯ ಇಂದಿರಾ ನಗರದಲ್ಲಿ ಗುಡ್ಡ ಕುಸಿದು ಒಂದೇ ಕುಟುಂಬದ ಮೂವರು ಸಾವನ್ನಪ್ಪಿದ್ದಾರೆ.
ತಡರಾತ್ರಿ 2:30 ವೇಳೆಯಲ್ಲಿ ಮಳೆಯ ಅಬ್ಬರ ಹೆಚ್ಚಾಗಿ ಗುಡ್ಡ ಕುಸಿದಿದೆ. ಕೊಕ್ಕರೆಗಾರು ಗ್ರಾಮ ಗಂಗಾವತಿ ತಾಲೂಕು ಕೊಪ್ಪಳ ಜಿಲ್ಲೆಯವರಾಗಿದ್ದು, ಮಲ್ಲಿಕಾರ್ಜುನ (35) ನಾಗವೇಣಿ (28 ), ಹಾಗೂ ಮೂರು ವರ್ಷದ ಸಂತೋಷ ಎಂದು ಗುರುತಿಸಲಾಗಿದೆ.
ಇವರೆಲ್ಲ ಮಲಗಿದ್ದಾಗ ರಾತ್ರಿ ಮನೆ ಮೇಲೆ ಗುಡ್ಡ ಕುಸಿದಿದೆ. ಮಣ್ಣಿನಡಿ ಮೃತದೇಹಗಳು ಸಿಲುಕಿವೆ. ಜೆಸಿಬಿ ಬಳಸಿ ತೆರವು ಕಾರ್ಯಾಚರಣೆ ನಡೆಯುತ್ತಿದೆ. ತೆರವು ಕಾರ್ಯಕ್ಕೆ ಮಳೆಯಿಂದ ಕಷ್ಟವಾಗುತ್ತಿದೆ.
ಸ್ಥಳಕ್ಕೆ ಪೊಲೀಸ್ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ತೀರ್ಥಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.