ಮೈಸೂರು: ತನ್ನ ಜೊತೆ ವಾಸಿಸುತ್ತಿದ್ದ ಮಹಿಳೆಯೊಬ್ಬಳನ್ನು ಕೊಲೆ ಮಾಡಿದ ಸುಮಾರು 20 ದಿನಗಳ ನಂತರ 64 ವರ್ಷದ ವ್ಯಕ್ತಿ ಪೊಲೀಸರ ಮುಂದೆ ಶರಣಾಗಿದ್ದಾನೆ. ಆರೋಪಿ ಪೊಲೀಸ್ ಠಾಣೆಗೆ ಹೋಗಿ ತಪ್ಪೊಪ್ಪಿಕೊಂಡ ನಂತರವೇ ಈ ಘಟನೆ ಬೆಳಕಿಗೆ ಬಂದಿದೆ.
ಮೃತಳನ್ನು ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಅಗಸನಪುರ ಗ್ರಾಮದ ಜ್ಯೋತಿ (40) ಎಂದು ಗುರುತಿಸಲಾಗಿದೆ. ಕನಕಪುರ ಮೂಲದ ಆರೋಪಿ ಸಿದ್ದರಾಜು (64) ಮೈಸೂರಿನ ಬನ್ನೂರು ರಸ್ತೆಯ ಭುಗತಹಳ್ಳಿಯಲ್ಲಿ ಜ್ಯೋತಿ ಜೊತೆ ವಾಸಿಸುತ್ತಿದ್ದ ಎಂದು ವರದಿಯಾಗಿದೆ.
ಜ್ಯೋತಿ ಅವರ ಪತಿ 10 ವರ್ಷಗಳ ಹಿಂದೆ ಮೃತಪಟ್ಟಿದ್ದು, ಸಂಬಂಧಿಕ ಸಿದ್ದರಾಜು ಜೊತೆಗೆ ಮೈಸೂರಿನ ಬನ್ನೂರು ರಸ್ತೆಯ ಭುಗತಹಳ್ಳಿಯ ಆಶ್ರಯ ಲೇಔಟ್ನಲ್ಲಿ ಜ್ಯೋತಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಈಚೆಗೆ ಸಿದ್ದರಾಜುವನ್ನು ಜ್ಯೋತಿ ನಿರ್ಲಕ್ಷಿಸುತ್ತಿದ್ದರು ಎನ್ನಲಾಗಿದೆ.
ಇವರು ಆಗಾಗ ಪೋಷಕರ ಮನೆಗೆ ತೆರಳುತ್ತಿದ್ದ ಹಿನ್ನೆಲೆಯಲ್ಲಿ ಇಬ್ಬರ ನಡುವೆ ಜಗಳ ನಡೆಯುತ್ತಿತ್ತು. ಜುಲೈ 13ರಂದು ನಡೆದ ಜಗಳ ವಿಕೋಪಕ್ಕೆ ಹೋಗಿ ಜ್ಯೋತಿ ಮಲಗಿದ್ದಾಗ ಆರೋಪಿ ಆಕೆಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿ ಮನೆಯಿಂದ ಪರಾರಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಮನೆ ಬೀಗ ಹಾಕಿದ್ದರಿಂದ ಕೊಲೆ ಸುಮಾರು ಮೂರು ವಾರಗಳ ಕಾಲ ಪತ್ತೆಯಾಗಿರಲಿಲ್ಲ. ಸಿದ್ದರಾಜು ಆಲನಹಳ್ಳಿ ಪೊಲೀಸ್ ಠಾಣೆಯಲ್ಲಿ ಶರಣಾಗಿ ಜ್ಯೋತಿಯನ್ನು ಕೊಂದಿರುವುದಾಗಿ ಒಪ್ಪಿಕೊಂಡ ನಂತರವೇ ಪ್ರಕರಣ ಬೆಳಕಿಗೆ ಬಂದಿತು.