ಎಐ ಸೃಷ್ಟಿತ ಚಿತ್ರ 
ರಾಜ್ಯ

ಒಂದಲ್ಲ, 5 ಪೊಲೀಸ್‌ ಆಯುಕ್ತಾಲಯಗಳು; ಬೆಂಗಳೂರು ಪೊಲೀಸ್‌ ವ್ಯವಸ್ಥೆಗೆ ಮೇಜರ್‌ ಸರ್ಜರಿ; ಆ.15ರಂದು ಡಿಕೆ.ಶಿವಕುಮಾರ್ ಮಹತ್ವದ ಘೋಷಣೆ..?

ಬೆಂಗಳೂರು ನಗರ ಪೊಲೀಸ್‌ ವ್ಯವಸ್ಥೆಯನ್ನು ಗ್ರೇಟರ್‌ ಬೆಂಗಳೂರು ಪ್ರಾಧಿಕಾರ (ಜಿಬಿಎ) ಮಾದರಿಯಲ್ಲಿ ಮರುಸಂಘಟಿಸಲು ಸರ್ಕಾರ ಮುಂದಾಗಿದೆ. ಈ ಹೊಸ ವ್ಯವಸ್ಥೆಯನ್ನು ಸರ್ಕಾರದ ಕಾರ್ಯನಿರ್ವಾಹಕ ಆದೇಶದ ಮೂಲಕ ಜಾರಿಗೆ ತರಲು ಯೋಜನೆ ರೂಪಿಸಿದೆ.

ಬೆಂಗಳೂರು: ಬೆಂಗಳೂರು ನಗರ ಪೊಲೀಸ್‌ (ಬಿಸಿಪಿ) ವ್ಯವಸ್ಥೆಯ ಸಮಗ್ರ ಪುನರ್‌ರಚನೆಗೆ ರಾಜ್ಯ ಸರ್ಕಾರ ಅಂತಿಮ ಹಂತದ ಸಿದ್ಧತೆ ನಡೆಸಿದ್ದು, ಆಗಸ್ಟ್‌ 15ರ ಸ್ವಾತಂತ್ರ್ಯ ದಿನಾಚರಣೆಯಂದೇ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಮಹತ್ವದ ಘೋಷಣೆ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಹೊಸ ಪೊಲೀಸ್‌ ವ್ಯವಸ್ಥೆಯ ರೂಪುರೇಷೆಯನ್ನು ಇದೇ ದಿನ ಅಧಿಕೃತವಾಗಿ ಪ್ರಕಟಿಸಿ, ಅದರ ಜಾರಿಗೆ ಪ್ರತ್ಯೇಕ ದಿನಾಂಕವನ್ನು ನಿಗದಿಪಡಿಸುವ ಸಾಧ್ಯತೆ ಇದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಮೂಲಗಳ ಪ್ರಕಾರ, ಬೆಂಗಳೂರು ನಗರ ಪೊಲೀಸ್‌ ವ್ಯವಸ್ಥೆಯನ್ನು ಗ್ರೇಟರ್‌ ಬೆಂಗಳೂರು ಪ್ರಾಧಿಕಾರ (ಜಿಬಿಎ) ಮಾದರಿಯಲ್ಲಿ ಮರುಸಂಘಟಿಸಲು ಸರ್ಕಾರ ಮುಂದಾಗಿದೆ. ಈ ಹೊಸ ವ್ಯವಸ್ಥೆಯನ್ನು ಸರ್ಕಾರದ ಕಾರ್ಯನಿರ್ವಾಹಕ ಆದೇಶದ ಮೂಲಕ ಜಾರಿಗೆ ತರಲು ಯೋಜನೆ ರೂಪಿಸಿದೆ ಎಂದು ತಿಳಿದುಬಂದಿದೆ.

ಆಗಸ್ಟ್‌ 1ರಂದು ನಗರ ಪೊಲೀಸ್‌ ಆಯುಕ್ತ ಸೀಮಂತ್‌ ಸಿಂಗ್‌ ಅವರು ಸರ್ಕಾರ ಸೂಚಿಸಿದ್ದ ಮಾರ್ಗಸೂಚಿಗಳ ಆಧಾರದ ಮೇಲೆ ಕರಡು ಪ್ರಸ್ತಾವನೆಯನ್ನು ಸಲ್ಲಿಸಿದ್ದರು.

ಗ್ರೇಟರ್‌ ಬೆಂಗಳೂರು ವ್ಯಾಪ್ತಿಯ ಐದು ಮಹಾನಗರ ಪಾಲಿಕೆಗಳ ಮಾದರಿಯಲ್ಲಿ ಬೆಂಗಳೂರು ನಗರ ಪೊಲೀಸ್‌ ವ್ಯವಸ್ಥೆಯನ್ನು ಮರುಸಂಘಟಿಸುವ ಕುರಿತು ಆ ಪ್ರಸ್ತಾವನೆಯಲ್ಲಿ ವಿವರಿಸಲಾಗಿದೆ. ಆದರೆ, ಅಂತಿಮ ತೀರ್ಮಾನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರದ್ದಾಗಿದ್ದು, ಸರ್ಕಾರ ಅಗತ್ಯವೆನಿಸಿದರೆ ಪ್ರಸ್ತಾವನೆಯಲ್ಲಿ ಬದಲಾವಣೆ ಮಾಡಿ, ಜಾರಿಗೆ ತರಬಹುದು ಅಥವಾ ಯಥಾವತ್ತಾಗಿ ಅಂಗೀಕರಿಸಬಹುದು ಎಂದು ಮೂಲಗಳು ತಿಳಿಸಿವೆ.

ಈ ಪುನರ್‌ರಚನೆ ಕೇವಲ ಆಡಳಿತಾತ್ಮಕ ಬದಲಾವಣೆಯಾಗದೆ, ಹೊಸ ಹುದ್ದೆಗಳ ಸೃಷ್ಟಿ, ಹೊಸ ಪೊಲೀಸ್‌ ಠಾಣೆಗಳ ಸ್ಥಾಪನೆ, ಸಿಬ್ಬಂದಿ ನಿಯೋಜನೆ, ಮೂಲಸೌಕರ್ಯ ಹಾಗೂ ಅಗತ್ಯ ಲಾಜಿಸ್ಟಿಕ್ಸ್‌ ವ್ಯವಸ್ಥೆ ಸೇರಿದಂತೆ ಹಲವು ಹಂತಗಳಲ್ಲಿ ಅನುಷ್ಠಾನಗೊಳ್ಳಲಿದೆ. ಹೀಗಾಗಿ ಈ ಪ್ರಕ್ರಿಯೆ ಪೂರ್ಣಗೊಳ್ಳಲು ಸಾಕಷ್ಟು ಸಮಯ ಬೇಕಾಗಬಹುದು ಎಂದು ಹೇಳಲಾಗುತ್ತಿದೆ.

ಹೊಸ ಪ್ರಸ್ತಾವನೆಯಂತೆ, ಐದು ಪ್ರತ್ಯೇಕ ಪೊಲೀಸ್‌ ಆಯುಕ್ತಾಲಯಗಳನ್ನು ರಚಿಸುವ ಉದ್ದೇಶವಿದ್ದು, ಪ್ರತಿಯೊಂದಕ್ಕೂ ಐಜಿಪಿ ಅಥವಾ ಡಿಐಜಿಪಿ ಹುದ್ದೆಯ ಅಧಿಕಾರಿಯನ್ನು ಪೊಲೀಸ್‌ ಆಯುಕ್ತರಾಗಿ ನೇಮಿಸುವ ಸಾಧ್ಯತೆ ಇದೆ. ಇವರೆಲ್ಲರ ಮೇಲ್ವಿಚಾರಣೆಗೆ ಡಿಜಿಪಿ ಹುದ್ದೆಯ ಅಧಿಕಾರಿಯನ್ನು ಮುಖ್ಯ ಪೊಲೀಸ್‌ ಆಯುಕ್ತರಾಗಿ ನೇಮಿಸುವ ಪ್ರಸ್ತಾವವೂ ಸರ್ಕಾರದ ಮುಂದಿದೆ.

ಆದರೆ, ಕರ್ನಾಟಕ ಪೊಲೀಸ್‌ ಇಲಾಖೆಯಲ್ಲಿ ಐಜಿಪಿ ಹುದ್ದೆಯ ಅಧಿಕಾರಿಗಳ ಕೊರತೆ ಎದುರಾಗಿರುವುದರಿಂದ ಕೆಲವು ಆಯುಕ್ತಾಲಯಗಳಿಗೆ ಐಜಿ ಹಾಗೂ ಡಿಐಜಿ ಹುದ್ದೆಯ ಅಧಿಕಾರಿಗಳನ್ನು ನೇಮಿಸುವ ಸಾಧ್ಯತೆಯೂ ಇದೆ.

ರಾಜ್ಯದ ಏಳು ಪೊಲೀಸ್‌ ವಲಯಗಳಲ್ಲಿ ಈಗಾಗಲೇ ಎರಡು ವಲಯಗಳಿಗೆ ಡಿಐಜಿ ಹುದ್ದೆಯ ಅಧಿಕಾರಿಗಳೇ ನೇತೃತ್ವ ವಹಿಸಿರುವುದರಿಂದ, ಇದೇ ಮಾದರಿಯನ್ನು ಬೆಂಗಳೂರಿನ ಹೊಸ ಪೊಲೀಸ್‌ ಆಯುಕ್ತಾಲಯಗಳಲ್ಲೂ ಅನುಸರಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಪ್ರಸ್ತುತ ದೇಶದ ಮಹಾನಗರಗಳಲ್ಲಿ ಒಂದೇ ಪೊಲೀಸ್‌ ಆಯುಕ್ತಾಲಯ ಹೊಂದಿರುವ ಏಕೈಕ ನಗರ ಬೆಂಗಳೂರು. ಹೊಸ ಯೋಜನೆ ಜಾರಿಯಾದರೆ, ಐದು ಪ್ರತ್ಯೇಕ ಪೊಲೀಸ್‌ ಆಯುಕ್ತಾಲಯಗಳನ್ನು ಹೊಂದಿರುವ ದೇಶದ ಮೊದಲ ಮಹಾನಗರ ಎಂಬ ದಾಖಲೆಯನ್ನೂ ಬೆಂಗಳೂರು ನಿರ್ಮಿಸಲಿದೆ. ಈ ಐದು ಆಯುಕ್ತಾಲಯಗಳ ಆಯುಕ್ತರು ಮುಖ್ಯ ಪೊಲೀಸ್‌ ಆಯುಕ್ತರಿಗೆ ವರದಿ ಸಲ್ಲಿಸಲಿದ್ದಾರೆ.

ಹೊಸ ವ್ಯವಸ್ಥೆಯಿಂದ ನಗರದಲ್ಲಿ ಇನ್ನಷ್ಟು ಪೊಲೀಸ್‌ ಠಾಣೆಗಳನ್ನು ಆರಂಭಿಸಲು ಅವಕಾಶ ದೊರೆಯಲಿದ್ದು, ಹೆಚ್ಚಿನ ಪ್ರದೇಶಗಳು ಮತ್ತು ಜನಸಂಖ್ಯೆಯನ್ನು ಪರಿಣಾಮಕಾರಿಯಾಗಿ ಪೊಲೀಸ್‌ ಸೇವೆಯ ವ್ಯಾಪ್ತಿಗೆ ತರಲು ನೆರವಾಗಲಿದೆ.

ಅಪರಾಧ ನಿಯಂತ್ರಣ, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವುದು, ಮಾದಕ ವಸ್ತುಗಳ ಜಾಲದ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದು ಹಾಗೂ ವೇಗವಾಗಿ ಬೆಳೆಯುತ್ತಿರುವ ಬೆಂಗಳೂರಿನ ಆಡಳಿತಾತ್ಮಕ ಅಗತ್ಯಗಳಿಗೆ ತಕ್ಕಂತೆ ಪೊಲೀಸ್‌ ವ್ಯವಸ್ಥೆಯನ್ನು ಬಲಪಡಿಸುವುದು ಈ ಪುನರ್‌ರಚನೆಯ ಪ್ರಮುಖ ಉದ್ದೇಶವಾಗಿದೆ ಎಂದು ಸರ್ಕಾರದ ಮೂಲಗಳು ಮಾಹಿತಿ ನೀಡಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಭಾರತದ ಕಾನೂನು ಪಾಲಿಸುತ್ತಿದ್ದೀರಾ?': Metaಗೆ ಖಡಕ್ ಕ್ಲಾಸ್‌ ತೆಗೆದುಕೊಂಡ ಕೇಂದ್ರ ಸರ್ಕಾರ, ತೀವ್ರ ವಿಚಾರಣೆ

ಸಂಪುಟ ವಿಸ್ತರಣೆ ಕಿಚ್ಚು; 'ಕೈ' ಪಾಳಯದಲ್ಲಿ ಹೈ ಡ್ರಾಮಾ: ಡ್ಯಾಮೇಜ್ ಕಂಟ್ರೋಲ್‌ಗೆ ಸುರ್ಜೇವಾಲಾ ಎಂಟ್ರಿ..!

'Real estate mafia ಲಾಭಕ್ಕಾಗಿ ಬಿಡದಿ ಯೋಜನೆ'; ಸರ್ಕಾರದ ವಿರುದ್ಧ BJP-JDS ವಾಗ್ದಾಳಿ, ಜಂಟಿ ಪಾದಯಾತ್ರೆಗೆ ಮುಂದು..!

ಎಗ್ಗಿಲ್ಲದ AI ಕಂಟೆಂಟ್, ಡೀಪ್‌ಫೇಕ್‌ಗಳಿಗೆ ಬ್ರೇಕ್: ಸಾಮಾಜಿಕ ಜಾಲತಾಣಗಳಿಗೆ ಕೇಂದ್ರದ ಹೊಸ ನಿಯಮ!

ಪ್ರಧಾನಿ ಮೋದಿಗೆ ಇಸ್ರೇಲ್ ಪ್ರಧಾನಿ ನೆತನ್ಯಾಹು ದೂರವಾಣಿ ಕರೆ; ಪಶ್ಚಿಮ ಏಷ್ಯಾ ಬಿಕ್ಕಟ್ಟು, ಕಾರ್ಯತಂತ್ರದ ಸಂಬಂಧಗಳ ಬಗ್ಗೆ ಚರ್ಚೆ