ಜೆಡಿಎಸ್ ಪಾದಯಾತ್ರೆ 
ರಾಜ್ಯ

'ರೈತರ ಬದುಕು ನಾಶ ಮಾಡಿ ಯೋಜನೆ': ಬಿಡದಿ ಟೌನ್ ಶಿಪ್ ಭೂಸ್ವಾಧೀನ ವಿರೋಧಿಸಿ ಜೆಡಿಎಸ್ ಪಾದಯಾತ್ರೆ: ಮಾಜಿ ಪ್ರಧಾನಿ HD ದೇವೇಗೌಡ ಭಾಗಿ

ಮೂರು ದಿನಗಳ ಪಾದಯಾತ್ರೆಗೆ ಜೆಡಿಎಸ್ ನಾಯಕ ಹಾಗೂ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಭಾನುವಾರ ಬೈರಾಮಂಗಲದಲ್ಲಿ ಚಾಲನೆ ನೀಡಿದ್ದರು. ಪಾದಯಾತ್ರೆ ಒಟ್ಟು ಸುಮಾರು 38 ಕಿ.ಮೀ. ದೂರ ಕ್ರಮಿಸಲಿದೆ.

ಬೆಂಗಳೂರು: ಬೆಂಗಳೂರಿನ ದಕ್ಷಿಣ ಜಿಲ್ಲೆ ಬಿಡದಿ ಸಮೀಪದ ಪ್ರಸ್ತಾವಿತ ಜಿಬಿಐಟಿ ಯೋಜನೆಗಾಗಿ ರೈತರ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವುದನ್ನು ವಿರೋಧಿಸಿ ಜೆಡಿಎಸ್ ನಡೆಸುತ್ತಿರುವ ಪಾದಯಾತ್ರೆಯಲ್ಲಿ ಪಕ್ಷದ ಹಿರಿಯ ನಾಯಕ ಹಾಗೂ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಸೋಮವಾರ ಭಾಗವಹಿಸಿದರು.

ಮೈತ್ರಿ ಪಕ್ಷ ಬಿಜೆಪಿ ಬೆಂಬಲದೊಂದಿಗೆ ನಡೆಯುತ್ತಿರುವ ಈ ಪಾದಯಾತ್ರೆಯು ಬಿಡದಿ ಸಮೀಪದ ಬೈರಾಮಂಗಲದಿಂದ ಬೆಂಗಳೂರಿನ ಫ್ರೀಡಂ ಪಾರ್ಕ್‌ವರೆಗೆ ಸಾಗುತ್ತಿದೆ. ಜೆಡಿಎಸ್ ಯುವ ಘಟಕದ ಅಧ್ಯಕ್ಷ ಹಾಗೂ ದೇವೇಗೌಡರ ಮೊಮ್ಮಗ ನಿಖಿಲ್ ಕುಮಾರಸ್ವಾಮಿ ನೇತೃತ್ವದ ಈ ಪಾದಯಾತ್ರೆ ಸೋಮವಾರ ಎರಡನೇ ದಿನಕ್ಕೆ ಕಾಲಿಟ್ಟಿದೆ.

ಮೂರು ದಿನಗಳ ಪಾದಯಾತ್ರೆಗೆ ಜೆಡಿಎಸ್ ನಾಯಕ ಹಾಗೂ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಭಾನುವಾರ ಬೈರಾಮಂಗಲದಲ್ಲಿ ಚಾಲನೆ ನೀಡಿದ್ದರು. ಪಕ್ಷದ ಮೂಲಗಳ ಪ್ರಕಾರ, ಪಾದಯಾತ್ರೆ ಒಟ್ಟು ಸುಮಾರು 38 ಕಿ.ಮೀ. ದೂರ ಕ್ರಮಿಸಲಿದೆ.

ಈ ವೇಳೆ ಕರ್ನಾಟಕ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಕೂಡ ಉಪಸ್ಥಿತರಿದ್ದರು. 93 ವರ್ಷದ ದೇವೇಗೌಡರು ಬಿಡದಿಯ ಬಿಜಿಎಸ್ ವೃತ್ತದಲ್ಲಿ ಪಾದಯಾತ್ರೆಯ ಎರಡನೇ ದಿನ ಆರಂಭವಾದ ಸಂದರ್ಭದಲ್ಲಿ ಅದರಲ್ಲಿ ಭಾಗವಹಿಸಿದರು.

ಪ್ರತಿಭಟನಾಕಾರರು ‘ನಮ್ಮ ಭೂಮಿ, ನಮ್ಮ ಹಕ್ಕು’ ಎಂಬ ಘೋಷಣೆಗಳನ್ನು ಕೂಗಿದರು. ಸರ್ಕಾರ ರಿಯಲ್ ಎಸ್ಟೇಟ್ ಹಿತಾಸಕ್ತಿಗಳಿಗೆ ಉತ್ತೇಜನ ನೀಡುತ್ತಿದೆ ಹಾಗೂ ರೈತರ ವಿರುದ್ಧ ಸುಳ್ಳು ಪ್ರಕರಣಗಳನ್ನು ದಾಖಲಿಸುವ ಮೂಲಕ ಅವರನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿದೆ ಎಂದು ಅವರು ಆರೋಪಿಸಿದರು.

ರೈತರ ಬದುಕು ನಾಶ ಮಾಡಿ ಯೋಜನೆ ಮಾಡುತ್ತಿದ್ದೀರಿ

ಈ ವೇಳೆ ಸಭೆಯನ್ನುದ್ದೇಶಿಸಿ ಮಾತನಾಡಿದ ದೇವೇಗೌಡರು, 'ತಮ್ಮ ಪುತ್ರ ಕುಮಾರಸ್ವಾಮಿ, ಮೊಮ್ಮಗ ನಿಖಿಲ್ ಹಾಗೂ ಜೆಡಿಎಸ್ ನಾಯಕರು ಮತ್ತು ಶಾಸಕರೊಂದಿಗೆ ಸೇರಿ ರೈತರು ಮತ್ತು ಜನರಿಗೆ ಯಾವುದೇ ಅನ್ಯಾಯವಾಗಲು ಬಿಡುವುದಿಲ್ಲ' ಎಂದು ಸ್ಪಷ್ಟಪಡಿಸಿದರು.

“ರೈತರ ಬದುಕನ್ನು ನಾಶಪಡಿಸಿ ನೀವು ಈ ಯೋಜನೆ ಮಾಡುತ್ತಿದ್ದೀರಿ. ಯಾರಿಗಾಗಿ ಈ ಯೋಜನೆ? ದಯವಿಟ್ಟು ಸತ್ಯ ಹೇಳಿ—ಯಾರಿಗಾಗಿ?” ಎಂದು ದೇವೇಗೌಡ ಅವರು ಪ್ರಶ್ನಿಸಿದರು.

ಸರ್ಕಾರದ ಮಾಹಿತಿಯ ಪ್ರಕಾರ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಸುಮಾರು 20,000 ನಿವೇಶನಗಳು ಖಾಲಿ ಬಿದ್ದಿವೆ. ಅಷ್ಟೇ ಅಲ್ಲದೆ, ಬೆಂಗಳೂರಿನ ವಿವಿಧ ಬಡಾವಣೆಗಳಲ್ಲೂ ಸಾಕಷ್ಟು ನಿವೇಶನಗಳು ಖಾಲಿ ಇವೆ. ಅವುಗಳನ್ನು ಖರೀದಿಸಲು ಯಾರೂ ಮುಂದೆ ಬರುತ್ತಿಲ್ಲ. ನಿರ್ಮಿಸಿರುವ ದೊಡ್ಡ ಸಂಖ್ಯೆಯ ಮನೆಗಳೂ ಖಾಲಿಯಾಗಿವೆ. ಸರ್ಕಾರ ರಚಿಸಿರುವ ಸಮಿತಿಯು ಈ ಕುರಿತು ಸಮಗ್ರ ಮಾಹಿತಿ ಸಂಗ್ರಹಿಸಬೇಕು ಎಂದು ದೇವೇಗೌಡರು ಒತ್ತಾಯಿಸಿದರು.

ಜಿಬಿಐಟಿ ಯೋಜನೆಗಾಗಿ ಭೂಮಿ ಕಳೆದುಕೊಳ್ಳುವ ರೈತರಿಗೆ ಎಕರೆಗೆ ₹3 ಕೋಟಿಗೂ ಅಧಿಕ ಪರಿಹಾರ ನೀಡುವುದಾಗಿ ಪ್ರತಿಭಟನೆಗಳು ತೀವ್ರಗೊಂಡ ಬಳಿಕ ಮುಖ್ಯಮಂತ್ರಿ ಘೋಷಿಸಿರುವುದನ್ನು ಉಲ್ಲೇಖಿಸಿದ ದೇವೇಗೌಡರು, “ಇಲ್ಲಿನ ರೈತರ ಬದುಕನ್ನು ಏಕೆ ನಾಶ ಮಾಡಲು ಹೊರಟಿದ್ದೀರಿ? ಯಾವ ಉದ್ದೇಶಕ್ಕಾಗಿ? ಶಿವಕುಮಾರ್ ಅವರೇ, ನಮಗೆ ತಿಳಿಸಿ” ಎಂದು ಪ್ರಶ್ನಿಸಿದರು.

ನನ್ನ ದೆಹಕ್ಕೆ ವಯಸ್ಸಾಗಿದೆ, ಬುದ್ದಿಗಲ್ಲ..

ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿ ತಾವು ಮುಖ್ಯಮಂತ್ರಿಯಾಗಲು ಶಿವಕುಮಾರ್ ಅವರು ದೆಹಲಿಯಲ್ಲಿ ಯಾವ ಭರವಸೆಗಳನ್ನು ನೀಡಿದ್ದಾರೆ ಎಂಬುದು ತಮಗೆ ತಿಳಿದಿಲ್ಲ ಎಂದು ಹೇಳಿದ ದೇವೇಗೌಡರು, “ಆ ಭರವಸೆಗಳನ್ನು ಈಡೇರಿಸಲು ಇಲ್ಲಿನ ರೈತರ ಭೂಮಿಯನ್ನು ನೀಡುವ ಮೂಲಕ ಅವರ ಬದುಕನ್ನು ನಾಶ ಮಾಡುತ್ತಿದ್ದೀರಿ. ಯಾರಿಗೆ ಕೊಡಲು ಹೊರಟಿದ್ದೀರಿ? ಯಾವ ಕಂಪನಿಗೆ ಕೊಡಲು ಹೊರಟಿದ್ದೀರಿ? ಸತ್ಯ ಹೇಳಿ” ಎಂದು ಆಗ್ರಹಿಸಿದರು.

ತಾನು ವಯಸ್ಸಾದವನು ಎಂದು ಯಾರೂ ತಪ್ಪಾಗಿ ಭಾವಿಸಬಾರದು ಎಂದು ಹೇಳಿದ ದೇವೇಗೌಡರು, “ನನ್ನ ದೇಹ ವಯಸ್ಸಾಗಿದೆ, ಆದರೆ ನನ್ನ ಬುದ್ಧಿ ವಯಸ್ಸಾಗಿಲ್ಲ. ನನ್ನ ಬುದ್ಧಿ ಇನ್ನೂ ಚೆನ್ನಾಗಿಯೇ ಇದೆ. ಜನರಿಂದಲೇ ಹೋರಾಡುವ ಶಕ್ತಿ ಪಡೆಯುತ್ತೇನೆ. ಜನರಿಗಾಗಿ ಹೋರಾಟ ಮುಂದುವರಿಸುತ್ತೇನೆ” ಎಂದು ಹೇಳಿದರು.

ಆಗಸ್ಟ್ 19ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಡೆಯಲಿರುವ ಬೃಹತ್ ಸಭೆಯಲ್ಲಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ದೇವೇಗೌಡರು ಕರೆ ನೀಡಿದರು. “ಯಾರೂ ಧೈರ್ಯ ಕಳೆದುಕೊಳ್ಳಬೇಡಿ, ದೃಢವಾಗಿರಿ. ದಯವಿಟ್ಟು ನಿಮ್ಮ ಭೂಮಿಯನ್ನು ಬಿಟ್ಟುಕೊಡಬೇಡಿ” ಎಂದು ಅವರು ಮನವಿ ಮಾಡಿದರು.

1994ರಲ್ಲಿ ರಾಮನಗರದಿಂದ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿ ಗೆದ್ದ ಬಳಿಕ ಅಲ್ಲಿನ ಜನರೊಂದಿಗಿನ ತಮ್ಮ ಸುದೀರ್ಘ ಒಡನಾಟವನ್ನು ನೆನಪಿಸಿಕೊಂಡ ದೇವೇಗೌಡರು, ನಂತರ ತಾವು ರಾಜ್ಯದ ಮುಖ್ಯಮಂತ್ರಿಯಾಗಿದ್ದು, ಬಳಿಕ ಪ್ರಧಾನಮಂತ್ರಿಯೂ ಆಗಿದ್ದಾಗಿ ಹೇಳಿದರು.

ಉತ್ತಮ ಕೆಲಸ ಮಾಡಿದರೆ ಖಂಡಿತಾ ಬೆಂಬಲ

“ಇಂದು ಒಕ್ಕಲಿಗ ಸಮುದಾಯಕ್ಕೆ ಸೇರಿದ ಮುಖ್ಯಮಂತ್ರಿಯೊಬ್ಬರು, ದೇವೇಗೌಡ, ಕುಮಾರಸ್ವಾಮಿ ಮತ್ತು ನಿಖಿಲ್ ಹೊರತುಪಡಿಸಿ ಬೇರೆ ಯಾವುದೇ ಒಕ್ಕಲಿಗರು ಮುಖ್ಯಮಂತ್ರಿಯಾದರೆ ಅವರಿಗೆ ಸಹಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಸುಳ್ಳು ಆರೋಪ ಮಾಡುತ್ತಿದ್ದಾರೆ. ಆದರೆ ನಾನು ಸ್ಪಷ್ಟವಾಗಿ ಹೇಳುತ್ತೇನೆ. ಯಾರೇ ಮುಖ್ಯಮಂತ್ರಿಯಾಗಿರಲಿ, ಅವರು ಉತ್ತಮ ಕೆಲಸ ಮಾಡಿದರೆ ನಾವು ಅವರಿಗೆ ಬೆಂಬಲ ನೀಡುತ್ತೇವೆ” ಎಂದು ದೇವೇಗೌಡರು ಹೇಳಿದರು.

2006ರಲ್ಲಿ ಮುಖ್ಯಮಂತ್ರಿಯಾಗಿದ್ದ ವೇಳೆ ಕುಮಾರಸ್ವಾಮಿ ಆರಂಭಿಸಿದ್ದ ಜಿಬಿಐಟಿ ಯೋಜನೆಯನ್ನೇ ತಾವು ಮುಂದುವರಿಸುತ್ತಿದ್ದೇವೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿರುವುದನ್ನು ಟೀಕಿಸಿದ ಮಾಜಿ ಪ್ರಧಾನಿ ದೇವೇಗೌಡರು, “ಶಿವಕುಮಾರ್ ಅವರೇ, ನೀವು ಎರಡು ವರ್ಷ ರಾಜ್ಯವನ್ನು ಆಳಿರಿ. ಅದಕ್ಕೆ ನಮ್ಮ ಯಾವುದೇ ಆಕ್ಷೇಪವಿಲ್ಲ. ಆದರೆ ರೈತರ ಬದುಕನ್ನು ನಾಶ ಮಾಡಲು ಸುಳ್ಳುಗಳನ್ನು ಏಕೆ ಹೇಳುತ್ತೀರಿ?” ಎಂದು ಪ್ರಶ್ನಿಸಿದರು.

“ನೀವು ರಾಜ್ಯವನ್ನು ಆಳಬೇಕು, ಅದಕ್ಕೆ ನಮ್ಮ ಯಾವುದೇ ಆಕ್ಷೇಪವಿಲ್ಲ. ಆದರೆ ರೈತರ ಬದುಕನ್ನು ನಾಶ ಮಾಡುವ ಪ್ರಯತ್ನವನ್ನು ನೀವು ನಿಲ್ಲಿಸುವವರೆಗೆ, 93 ವರ್ಷದವನಾದರೂ ಈ ದೇವೇಗೌಡ ಯಾವುದೇ ಕಾರಣಕ್ಕೂ ಹಿಂದೆ ಸರಿಯುವುದಿಲ್ಲ. ಇದೇ ಮಾತು ಕುಮಾರಸ್ವಾಮಿ ಮತ್ತು ನಿಖಿಲ್‌ಗೂ ಅನ್ವಯಿಸುತ್ತದೆ. ಇದನ್ನು ಬರೆದಿಟ್ಟುಕೊಳ್ಳಿ. ರೈತರ ಬದುಕನ್ನು ನಾಶಪಡಿಸಿ ನೀವು ಕಟ್ಟಡಗಳನ್ನು ನಿರ್ಮಿಸಲು ನಾವು ಬಿಡುವುದಿಲ್ಲ” ಎಂದು ಅವರು ಎಚ್ಚರಿಕೆ ನೀಡಿದರು.

ರೈತರು ಹಾಗೂ ಸ್ಥಳೀಯರಿಂದ ಪ್ರತಿಭಟನೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ, ಗ್ರೇಟರ್ ಬೆಂಗಳೂರು ಇಂಟಿಗ್ರೇಟೆಡ್ ಟೌನ್‌ಶಿಪ್ ಯೋಜನೆಗೆ ಸಂಬಂಧಿಸಿದಂತೆ ವ್ಯಕ್ತವಾಗಿರುವ ವಿವಿಧ ಅಭಿಪ್ರಾಯಗಳು ಮತ್ತು ಪ್ರತಿಕ್ರಿಯೆಗಳನ್ನು ಪರಿಶೀಲಿಸಲು ನಿವೃತ್ತ ಹೈಕೋರ್ಟ್ ನ್ಯಾಯಮೂರ್ತಿ ಜಸ್ಟಿಸ್ ಗುಹಾನಾಥನ್ ನರೇಂದ್ರ ಅವರ ನೇತೃತ್ವದಲ್ಲಿ ಸರ್ಕಾರ ಉನ್ನತ ಮಟ್ಟದ ಸಮಿತಿಯನ್ನು ರಚಿಸಿದೆ.

ಈ ಹಿಂದೆ ರೈತರು ಮತ್ತು ಸ್ಥಳೀಯರ ವಿರೋಧದ ನಡುವೆಯೂ, ಭಾರತದ ‘ಮೊದಲ ಕೃತಕ ಬುದ್ಧಿಮತ್ತೆ ಆಧಾರಿತ ಸಮಗ್ರ ಟೌನ್‌ಶಿಪ್’ ಎಂದು ಬಿಂಬಿಸಲಾಗಿರುವ ಜಿಬಿಐಟಿ ಯೋಜನೆಗಾಗಿ ಏಳು ಗ್ರಾಮಗಳಲ್ಲಿ ಹರಡಿರುವ 5,400 ಎಕರೆಗೂ ಅಧಿಕ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಸರ್ಕಾರ ಎರಡು ಹಂತಗಳಲ್ಲಿ ಅಂತಿಮ ಅಧಿಸೂಚನೆಗಳನ್ನು ಹೊರಡಿಸಿತ್ತು.

ಮೂಲಗಳ ಪ್ರಕಾರ, ಬಿಡದಿ ಯೋಜನೆಗೆ ಒಂಬತ್ತು ಕಂದಾಯ ಗ್ರಾಮಗಳು ಮತ್ತು 16 ಕಂದಾಯೇತರ ಗ್ರಾಮಗಳಲ್ಲಿ ಹರಡಿರುವ ಒಟ್ಟು 9,600 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವ ಅಗತ್ಯವಿದೆ.

ಪ್ರಸ್ತಾವಿತ ಯೋಜನೆಗಾಗಿ ಈ ಭಾಗದ ಒಂಬತ್ತು ಗ್ರಾಮಗಳಲ್ಲಿ ಒಟ್ಟು 7,481 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ರಾಜ್ಯ ಸರ್ಕಾರ ಕಳೆದ ವರ್ಷ ಮಾರ್ಚ್‌ನಲ್ಲಿ ಪ್ರಾಥಮಿಕ ಅಧಿಸೂಚನೆ ಹೊರಡಿಸಿತ್ತು. ಮುಂದಿನ ದಿನಗಳಲ್ಲಿ ಇನ್ನಷ್ಟು ಅಧಿಸೂಚನೆಗಳು ಹೊರಬೀಳುವ ನಿರೀಕ್ಷೆಯಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರೇಣುಕಾಸ್ವಾಮಿ ಕೊಲೆ ಪ್ರಕರಣ: ನಟ ದರ್ಶನ್‌, ಪವಿತ್ರಾ ಗೌಡಗೆ ಬಿಗ್ ಶಾಕ್: ಪ್ರದೋಷ್‌ ಮಾಫಿ ಸಾಕ್ಷಿಗೆ ಕೋರ್ಟ್‌ ಅಸ್ತು

ರಾಮ ಮಂದಿರ ಟ್ರಸ್ಟ್‌ CEO ಹುದ್ದೆಗೆ ಬರೋಬ್ಬರಿ 5,200 ಅರ್ಜಿ; ಸಂದರ್ಶನಕ್ಕೆ ಕೇವಲ 20 ಅಭ್ಯರ್ಥಿಗಳು ಆಯ್ಕೆ!

ಬೆಂಗಳೂರು: ತಾಜ್‌ ಹೋಟೆಲ್‌ನಲ್ಲಿ ಘೋರ ಕೃತ್ಯ; ಇಬ್ಬರು ಹೆಣ್ಣುಮಕ್ಕಳನ್ನು ಹತ್ಯೆಗೈದು ತಂದೆ ಆತ್ಮಹತ್ಯೆಗೆ ಯತ್ನ!

17 ದಿನಗಳಿಂದ ಸಂಸತ್ತಿನ ಎರಡೂ ಸದನಗಳು ಸ್ತಬ್ಧ; ನಮ್ಮ ಬೇಡಿಕೆಗಳಿಗೆ ಹೆದರಿ PM ಮೋದಿ, ಅಮಿತ್ ಶಾ ಸದನಕ್ಕೆ ಬರುತ್ತಿಲ್ಲ: ಖರ್ಗೆ

Video: ಬಿಡದಿ ಟೌನ್‌ಶಿಪ್; ಮಧು ಬಂಗಾರಪ್ಪ ಜೊತೆ ಪಿಸುಮಾತು ವಿವಾದ; ಬಿ.ವೈ ವಿಜಯೇಂದ್ರ ಸ್ಪಷ್ಟನೆ