ಹುಬ್ಬಳ್ಳಿ: ರಾಜ್ಯ ಸರ್ಕಾರದ ನಡೆ ನನ್ನ ಮನಸ್ಸಿಗೆ ತುಂಬಾ ನೋವಾಗಿದೆ. ನಾನು ಪರಿಸ್ಥಿತಿಗೆ ಒಳಗಾಗಿ ರಾಜೀನಾಮೆ ನೀಡಿದ್ದೇನೆ. ಅವರಿಗೆ ನನ್ನ ಮೇಲೆ ನಂಬಿಕೆ ಇಲ್ಲ ಅಂದರೆ ಅಲ್ಲಿ ಇರೋದು ಸರಿಯಲ್ಲ ಅನ್ನಿಸಿತು. ಇನ್ನು ಮುಂದೆ ಸಾಮಾನ್ಯ ಸದಸ್ಯನಾಗಿ ಸದನದಲ್ಲಿ ಭಾಗವಹಿಸುತ್ತೇನೆ ಎಂದು ವಿಧಾನ ಪರಿಷತ್ನ ಮಾಜಿ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ನಾನೇನು ತಪ್ಪು ಮಾಡಿದ್ದೇನೆ?, ಭ್ರಷ್ಟಾಚಾರ ಮಾಡಿದ್ದೀನಾ? ಅವ್ಯವಹಾರ ಮಾಡಿದ್ದೀನಾ? ಅವಿಶ್ವಾಸ ಮಂಡನೆ ಮಾಡಲು ಅವರ ಹತ್ತಿರ ವಿಷಯವೇ ಇಲ್ಲ. ನಾನು ಸಿಎಂ ಮನೆಗೆ ಹೋಗಿದ್ದು ನಿಜ. ಆದರೆ ನಾನು ಹೋಗಬಾರದಿತ್ತು. ಹೋಗಿದ್ದು ನನ್ನ ತಪ್ಪು. ಪಕ್ಷದ ಹೈಕಮಾಂಡ್ ತಮ್ಮ ಲೆಟರ್ ಹೆಡ್ನಲ್ಲಿ ಸಭಾಪತಿ ಘೋಷಣೆ ಮಾಡಿದ್ದು ಇಡೀ ದೇಶದಲ್ಲೇ ಮೊದಲು. ಇದು ತಪ್ಪು. ಈ ರೀತಿಯ ನಡೆ ಸರಿಯಲ್ಲ" ಎಂದರು
ವಿಧಾನ ಪರಿಷತ್ ಸಭಾಪತಿ ಸ್ಥಾನಕ್ಕೆ ರಾಜೀನಾಮೆ ನೀಡುವ ವಿಚಾರದಲ್ಲಿ ಮುಖ್ಯಮಂತ್ರಿ ಅವರೊಂದಿಗೆ ಮೊದಲೇ ಮಾತುಕತೆ ನಡೆದಿತ್ತು. ಆ. 14ರಂದು ರಾಜೀನಾಮೆ ನೀಡುವ ಕುರಿತು ಒಪ್ಪಂದವಾಗಿದ್ದರೂ, ಮುಖ್ಯಮಂತ್ರಿ ಅವರಿಂದ ನಿರಂತರ ಒತ್ತಡ ಬಂದ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ಆ. 7ರಂದೇ ರಾಜೀನಾಮೆ ನೀಡಬೇಕಾಯಿತು ಎಂದರು.
ನಾನು ಆಸ್ಪತ್ರೆಯಲ್ಲಿದ್ದಾಗಲೂ ದೂರವಾಣಿ ಮೂಲಕ ಸಂಪರ್ಕಿಸಿ ರಾಜೀನಾಮೆ ನೀಡುವಂತೆ ಮುಖ್ಯಮಂತ್ರಿ ಒತ್ತಾಯಿಸಿದರು. ರಾಜೀನಾಮೆ ಪತ್ರ ಸಿದ್ಧಪಡಿಸುವಂತೆ ನಾನು ಯಾರಿಗೂ ಹೇಳಿರಲಿಲ್ಲ. ಆದರೆ ನನ್ನ ಮುಂದೆಯೇ ರಾಜೀನಾಮೆ ಪತ್ರವನ್ನು ಟೈಪ್ ಮಾಡಿ, ಅದಕ್ಕೆ ಸಹಿ ಹಾಕುವಂತೆ ಒತ್ತಡ ಹೇರಿದರು. ಅಂತಿಮವಾಗಿ ಪರಿಸ್ಥಿತಿಗೆ ಮಣಿದು ರಾಜೀನಾಮೆ ನೀಡಬೇಕಾಯಿತು ಎಂದರು.
'ಪಕ್ಷದ ವಿಚಾರದಲ್ಲಿ ಹೈಕಮಾಂಡ್ ಯಾವುದೇ ನಿರ್ಧಾರ ಕೈಗೊಳ್ಳಬಹುದು. ಆದರೆ ಸಭಾಪತಿ ಹುದ್ದೆಗೆ ಸಂಬಂಧಿಸಿ ಪಕ್ಷದ ಲೆಟರ್ ಹೆಡ್ನಲ್ಲಿ ಹೆಸರು ಘೋಷಣೆ ಮಾಡಿರುವುದು ಸರಿಯಲ್ಲ. ಇದು ದೇಶದಲ್ಲೇ ಮೊದಲ ಬಾರಿಗೆ ನಡೆದ ಬೆಳವಣಿಗೆಯಾಗಿರಬಹುದು' ಎಂದು ಹೇಳಿದರು.
ತಮ್ಮ ರಾಜೀನಾಮೆ ಕುರಿತು ರಾಜ್ಯಪಾಲರಿಂದ ಇನ್ನೂ ಯಾವುದೇ ಮಾಹಿತಿ ಬಂದಿಲ್ಲ ಎಂದು ಹೇಳಿದ ಹೊರಟ್ಟಿ, 46 ವರ್ಷಗಳ ಕಾಲ ಶಾಸಕಾಂಗದಲ್ಲಿ ಸೇವೆ ಸಲ್ಲಿಸಿದ್ದೇನೆ ಮತ್ತು ತಮ್ಮ ರಾಜೀನಾಮೆಯನ್ನು ನಿರ್ವಹಿಸಿದ ರೀತಿಯಿಂದ ತೀವ್ರ ನೋವಾಗಿದೆ ಎಂದು ಹೇಳಿದರು. "ನನಗೆ ವಿದಾಯ ಭಾಷಣ ಮಾಡಲು ಸಹ ಅವಕಾಶ ನೀಡಲಾಗಿಲ್ಲ. ಸದನಕ್ಕೆ ಗೌರವ ಸಲ್ಲಿಸಲು ಅವಕಾಶ ಸಿಗದಿರುವುದು ನನಗೆ ತುಂಬಾ ನೋವನ್ನುಂಟು ಮಾಡಿದೆ" ಎಂದು ಹೇಳಿದರು.
ಬೆಂಗಳೂರಿನಿಂದ ಹಿಂದಿರುಗಿದ ನಂತರ, ಹೊರಟ್ಟಿ ತಮ್ಮ ಜಮೀನಿಗೆ ಭೇಟಿ ನೀಡಿ ತಮ್ಮ ಜಾನುವಾರುಗಳನ್ನು ಮೇಯಿಸುವುದರಲ್ಲಿ ಸಮಯ ಕಳೆದರು, ಅದರ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು.