ಬೆಂಗಳೂರು: ಕೇಂದ್ರ ಅಪರಾಧ ವಿಭಾಗದ(ಸಿಸಿಬಿ) ಪೊಲೀಸ್ ತಂಡ ಶನಿವಾರ ಪರಪ್ಪನ ಅಗ್ರಹಾರ ಜೈಲಿನ ಮೇಲೆ ಹಠಾತ್ ದಾಳಿ ನಡೆಸಿ, ಪರಿಶೀಲನೆ ನಡೆಸಿದ್ದು, ಈ ವೇಳೆ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಜೆಡಿ(ಎಸ್) ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಮತ್ತು ಇನ್ನೊಬ್ಬ ವಿಚಾರಣಾಧೀನ ಕೈದಿ ಬಳಿ ಮೊಬೈಲ್ ಫೋನ್ ಹಾಗೂ ಪೆನ್ ಡ್ರೈವ್ ಪತ್ತೆಯಾಗಿದೆ.
ಸಿಸಿಬಿ ಪೊಲೀಸರು ಕೈದಿಗಳಿಂದ ಮೊಬೈಲ್ ಫೋನ್, ಚಾರ್ಜರ್, ಪೆನ್ ಡ್ರೈವ್ ಮತ್ತು ನೋಟ್ಬುಕ್ ಅನ್ನು ವಶಪಡಿಸಿಕೊಂಡಿದ್ದಾರೆ.
ಮನೆ ಕೆಲಸದಾಕೆಯ ಮೇಲೆ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ಶಿಕ್ಷೆ ಅನುಭವಿಸುತ್ತಿರುವ ಪ್ರಜ್ವಲ್ ರೇವಣ್ಣ ಹಾಗೂ ವಿಚಾರಣಾಧೀನ ಕೈದಿ ಪ್ರತಾಪ್ ರೈ ವಿರುದ್ಧ ಸಿಸಿಬಿ ಪೊಲೀಸರು ಬುಧವಾರ ಈ ಸಂಬಂಧ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ.
ಪೊಲೀಸರ ಪ್ರಕಾರ, ವಿಚಾರಣೆಯ ಸಮಯದಲ್ಲಿ, ನೋಟ್ಬುಕ್ ತನಗೆ ಸೇರಿದ್ದು ಎಂದು ಪ್ರಜ್ವಲ್ ಅಧಿಕಾರಿಗಳಿಗೆ ಹೇಳಿದ್ದಾನೆ. ಪ್ರತಾಪ್ ರೈ ಮೊಬೈಲ್ ಫೋನ್, ಚಾರ್ಜರ್ ಮತ್ತು ಪೆನ್ ಡ್ರೈವ್ ತನ್ನದು ಎಂದು ಹೇಳಿಕೊಂಡಿದ್ದಾನೆ. ತನ್ನ ಸಂಬಂಧಿಕರು ಮತ್ತು ವಕೀಲರನ್ನು ಸಂಪರ್ಕಿಸಲು ಈ ಫೋನ್ ಬಳಸುತ್ತಿದ್ದನೆಂದು ಹೇಳಿದ್ದಾನೆ.
ಪ್ರಜ್ವಲ್ ರೇವಣ್ಣ ಸಹ, ತಮ್ಮ ಸಂಬಂಧಿಕರು ಮತ್ತು ವಕೀಲರನ್ನು ಸಂಪರ್ಕಿಸಲು ಪ್ರತಾಪ್ ರೈ ಅವರಿಂದ ಫೋನ್ ಪಡೆದು ಬಳಸಿರುವುದಾಗಿಯೂ ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಿಸಿಬಿಯ ಮಾದಕ ದ್ರವ್ಯ ನಿಯಂತ್ರಣ ಬ್ಯೂರೋದ ಪೊಲೀಸ್ ಇನ್ಸ್ಪೆಕ್ಟರ್ ಎಂ.ಎಲ್. ಸುಬ್ರಹ್ಮಣ್ಯ ಸ್ವಾಮಿ ಅವರು ನೀಡಿದ ದೂರಿನ ಪ್ರಕಾರ, ಅಧಿಕಾರಿಗಳು ಹೆಚ್ಚಿನ ಭದ್ರತೆಯ ಬ್ಯಾರಕ್ನಲ್ಲಿ ಶೋಧ ನಡೆಸಿದರು. ಭದ್ರತಾ ವಿಭಾಗ 3ರ ಮೊದಲ ಮಹಡಿಯಲ್ಲಿರುವ ಕೊಠಡಿ ಸಂಖ್ಯೆ 4ರಲ್ಲಿ ಹುಡುಕಾಟದ ಸಮಯದಲ್ಲಿ, ತಿಳಿ-ನೀಲಿ ಬಣ್ಣದ ರೆಡ್ಮಿ 5G ಮೊಬೈಲ್ ಫೋನ್, ಬಿಳಿ ಚಾರ್ಜರ್, ನೀಲಿ ಪಾಕೆಟ್ ನೋಟ್ಬುಕ್ ಮತ್ತು ಕಪ್ಪು ಸ್ಯಾನ್ಡಿಸ್ಕ್ ಪೆನ್ಡ್ರೈವ್ ಅನ್ನು ಪತ್ತೆ ಮಾಡಿದ್ದಾರೆ.
ಈ ಇಬ್ಬರು ಕೈದಿಗಳು ಮೊಬೈಲ್ ಫೋನ್, ಪೆನ್ ಡ್ರೈವ್ ಮತ್ತು ಚಾರ್ಜರ್ ಸೇರಿದಂತೆ ನಿಷೇಧಿತ ವಸ್ತುಗಳನ್ನು ಅಪರಿಚಿತ ವ್ಯಕ್ತಿಯಿಂದ ಪಡೆದುಕೊಂಡು, ಜೈಲಿನೊಳಗೆ ಅನುಮತಿಯಿಲ್ಲದೆ ಬಳಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಈ ಸಂಬಂಧ ಕರ್ನಾಟಕ ಕಾರಾಗೃಹ (ತಿದ್ದುಪಡಿ) ಕಾಯ್ದೆ, 2022 ರ ಸೆಕ್ಷನ್ 42 ಮತ್ತು ಬಿಎನ್ಎಸ್ನ ಇತರ ವಿಭಾಗದ ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.