ಬೆಂಗಳೂರು : ಆಹಾರ ನಿರ್ವಹಣೆ ಮತ್ತು ಸಂಗ್ರಹಣೆಯಲ್ಲಿ ನೈರ್ಮಲ್ಯ ಕೊರತೆಯನ್ನು ಪತ್ತೆಹಚ್ಚಿದ ಬಳಿಕ, ಕರ್ನಾಟಕ ಆಹಾರ ಸುರಕ್ಷತೆ ಮತ್ತು ಔಷಧ ನಿಯಂತ್ರಣ ಇಲಾಖೆ ಅಧಿಕಾರಿಗಳು ಬೆಂಗಳೂರಿನಲ್ಲಿ ಕ್ವಿಕ್-ಕಾಮರ್ಸ್ ಸಂಸ್ಥೆಯಾದ ಝೆಪ್ಟೋಗೆ ಸೇರಿದ ಗೋದಾಮು ಹಾಗೂ ಇಂದಿರಾ ಕ್ಯಾಂಟೀನ್ ಒಂದನ್ನು ಮಂಗಳವಾರ ಸೀಲ್ ಮಾಡಿದ್ದಾರೆ.
ಹೊಸಕೋಟೆ ತಾಲೂಕಿನ ನಿಪ್ಪಾನ್ ಎಕ್ಸ್ಪ್ರೆಸ್ನಲ್ಲಿರುವ ಝೆಪ್ಟೋ ಗೋದಾಮಿನಲ್ಲಿ ಕರ್ನಾಟಕ ಆಹಾರ ಸುರಕ್ಷತೆ ಮತ್ತು ಔಷಧ ನಿಯಂತ್ರಣ ಇಲಾಖೆಯು ತಪಾಸಣೆ ನಡೆಸಿ, 2006ರ ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಕಾಯ್ದೆ ಹಾಗೂ ಅದರ ಅಡಿಯಲ್ಲಿ ರೂಪಿಸಲಾದ ನಿಯಮಗಳ ಪ್ರಕಾರ ಗುಣಮಟ್ಟ, ಸುರಕ್ಷತೆ, ಸಂಗ್ರಹಣೆ, ಲೇಬಲಿಂಗ್ ಮತ್ತು ಆಹಾರ ನಿರ್ವಹಣಾ ಅಭ್ಯಾಸಗಳನ್ನು ತಪಾಸಣೆ ನಡೆಸಿತು.
ಅಶುದ್ಧ ಆಹಾರಗಳು, ಅನುಚಿತ ಲೇಬಲಿಂಗ್, ತಪ್ಪಾದ ಬ್ರ್ಯಾಂಡ್ ಬಳಕೆ ಹಾಗೂ ಆಹಾರ ನಿರ್ವಹಣೆ ಮತ್ತು ಸಂಗ್ರಹಣಾ ಅಭ್ಯಾಸಗಳಲ್ಲಿ ಉಲ್ಲಂಘನೆಗಳು ಕಂಡುಬಂದ ಕಾರಣ, ಅನ್ವಯವಾಗುವ FSSAI ನಿಬಂಧನೆಗಳ ಅನುಸಾರ ಗೋದಾಮನ್ನು ಸೀಲ್ ಮಾಡಲಾಗಿದೆ ಎಂದು ಇಲಾಖೆ ತಿಳಿಸಿದೆ. ಅಲ್ಲದೆ, ನೋಟಿಸ್ ಜಾರಿ ಮಾಡಲಾಗಿದ್ದು, ಮುಂದಿನ ಕಾನೂನು ಕ್ರಮಕ್ಕಾಗಿ ಸಂಬಂಧಪಟ್ಟ ನಿರ್ಣಯ ಅಧಿಕಾರಿಗೆ ವಿಷಯವನ್ನು ಶಿಫಾರಸು ಮಾಡಲಾಗಿದೆ.
ಗೊಟ್ಟಿಗೆರೆ, ಸಿಂಗಸಂದ್ರ ಮತ್ತು ಲಿಂಗರಾಜಪುರದಲ್ಲಿರುವ ಮೂರು ಇಂದಿರಾ ಕ್ಯಾಂಟೀನ್ ಗಳಲ್ಲಿ ತಪಾಸಣೆ ನಡೆಸಲಾಗಿದೆ. ಈ ತಪಾಸಣೆಯಲ್ಲಿ ಲೇಬಲಿಂಗ್, ತಪ್ಪಾದ ಬ್ರ್ಯಾಂಡ್ ಬಳಕೆ ಮತ್ತು FSSAI ನಿಯಮಗಳ ಇತರ ಉಲ್ಲಂಘನೆಗಳು ಕಂಡುಬಂದಿವೆ.
ಗೊಟ್ಟಿಗೆರೆ ಕ್ಯಾಂಟೀನ್ ಸೀಲ್ ಮಾಡಲಾಗಿದ್ದು, ಮೂರು ಮಳಿಗೆಗಳಿಗೂ ನೋಟಿಸ್ ಜಾರಿ ಮಾಡಲಾಗಿದೆ ಮತ್ತು ಕಾನೂನು ಕ್ರಮಕ್ಕಾಗಿ ಪ್ರಕರಣಗಳನ್ನು ಶಿಫಾರಸು ಮಾಡಲಾಗಿದೆ. ಬೇಳೆಕಾಳುಗಳು, ಅರಿಶಿನ ಪುಡಿ, ಅಡುಗೆ ಎಣ್ಣೆ, ಬೆಲ್ಲ, ಉಪ್ಪು, ಸಕ್ಕರೆ ಮತ್ತು ತಯಾರಿಸಿದ ಆಹಾರದ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗಾಗಿ ಪ್ರಯೋಗಾಲಯಗಳಿಗೆ ಕಳುಹಿಸಲಾಗಿದೆ.
ಆಹಾರ ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸುವ ಆಹಾರ ವ್ಯವಹಾರಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಮತ್ತು ಸುರಕ್ಷಿತ ಮತ್ತು ಆರೋಗ್ಯಕರ ಆಹಾರವನ್ನು ಪಡೆಯಲು ಇಂತಹ ತಪಾಸಣೆ ಅಭಿಯಾನಗಳು ಮುಂದುವರಿಯುತ್ತವೆ ಎಂದು ಇಲಾಖೆ ತಿಳಿಸಿದೆ.