ಬೆಂಗಳೂರು: ರಾಜ್ಯ ವಿಧಾನಮಂಡಲದ ಮುಂಗಾರು ಅಧಿವೇಶನ ಗುರುವಾರದಿಂದ ಆರಂಭವಾಗಿದ್ದು, ಅಧಿವೇಶನದ ಮೊದಲ ದಿನ ನಮ್ಮನ್ನು ಅಗಲಿದ ಗಣ್ಯರಿಗೆ ಸಂತಾಪ ಸೂಚಿಸಲಾಯಿತು.
ಇಂದು ವಿಧಾನಸಭಾ ಕಲಾಪ ಆರಂಭವಾಗುತ್ತಿದ್ದಂತೆ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು, ಚೆನ್ನಮ್ಮನವರ ನಿಧನಕ್ಕೆ ಸಂತಾಪ ಸೂಚಿಸಿದರು. ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರ ಧರ್ಮಪತ್ನಿ ಚೆನ್ನಮ್ಮ ಅವರು ಇವತ್ತು ನಮ್ಮ ಜೊತೆಯಲ್ಲಿ ಇಲ್ಲ. ಓರ್ವ ರಾಜಕಾರಣಿಯ ಮನೇಲಿ ಯಾವ ರೀತಿಯ ಇರಬೇಕು ಅನ್ನೋದಕ್ಕೆ ಚೆನ್ನಮ್ಮನವರೇ ಸಾಕ್ಷಿ. ಪ್ರತಿ ಸಂದರ್ಭದಲ್ಲೂ ದೇವೇಗೌಡರ ಕುಟುಂಬದ ಜೊತೆಯಲ್ಲಿದ್ದರು ಎಂದರು ಹೇಳಿದರು.
ವಿಧಾನಸಭೆಯಲ್ಲಿ ಸಂತಾಪ ಸೂಚನೆ ನಿರ್ಣಯದ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಡಿಕೆ ಶಿವಕುಮಾರ್, ಚೆನ್ನಮ್ಮ ನಿಧನದ ಸಂದರ್ಭದಲ್ಲಿ ಸರ್ಕಾರಿ ಗೌರವ ನೀಡಿರುವ ಬಗ್ಗೆ ಪ್ರಸ್ತಾಪಿಸಿದರು. ಅವರು ತ್ಯಾಗದ ಹೆಣ್ಣು ಎಂದು ಹೇಳಿಕೊಳ್ಳಲು ನಮಗೆಲ್ಲರಿಗೂ ಹೆಮ್ಮೆ. ಅವರಿಗೆ ಸರ್ಕಾರದ ಗೌರವ ಕೊಡಬೇಕು ಎಂದಾಗ, ಮಾಜಿ ಪ್ರಧಾನಿಯವರ ಹೆಂಡತಿಗೆ ಕೊಡೋಕೆ ಆಗುವುದಿಲ್ಲ ಎಂದೆಲ್ಲ ಚರ್ಚೆ ಬಂತು. ಕೊನೆಗೆ ನಾನು ದಿಟ್ಟ ನಿರ್ಧಾರ ತೆಗೆದುಕೊಂಡು ಅಧಿಕಾರಿಗಳಿಗೆ ಹೇಳಿದೆ. ನಮಗೆ ಅಧಿಕಾರ ಇದ್ದಾಗ ಹೃದಯ ಶ್ರೀಮಂತಿಕೆ ಪ್ರದರ್ಶಿಸಬೇಕು ಎಂದರು.
ಅವರು ದೊಡ್ಡ ಮಹಿಳೆ ರಾಜ್ಯಕ್ಕೆ ದೊಡ್ಡ ದೊಡ್ಡ ರಾಜಕಾರಣಿ ಮಕ್ಕಳನ್ನು ಕೊಟ್ಟಿದ್ದಾರೆ. ಅಂತಹವರಿಗೆ ನಾವು ಗೌರವ ಕೊಡಬೇಕೆಂದು ಅತಿ ಹೆಚ್ಚು ಗೌರವ ಕೊಟ್ಟಿದ್ದೇವೆ. ಆ ತಾಯಿಯ ಆತ್ಮಕ್ಕೆ ಶಾಂತಿ ಸಿಗಲಿ. ಸಾವು ಯಾವಾಗ ಬರುತ್ತದೋ ಗೊತ್ತಿಲ್ಲ. ಅದನ್ನು ಸಂತೋಷದಿಂದಲೇ ಸ್ವೀಕಾರ ಮಾಡಬೇಕು. ಅಗಲಿದ ಎಲ್ಲರ ಆತ್ಮಕ್ಕೂ ಶಾಂತಿ ಸಿಗಲಿ ಎಂದು ಮುಖ್ಯಮಂತ್ರಿಗಳು ಸಂತಾಪ ಸೂಚಿಸಿದರು.