ಬೆಂಗಳೂರು: ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಮತ್ತು ಬಾರ್ ಕೌನ್ಸಿಲ್ ಆಫ್ ಇಂಡಿಯಾ (BCI) ಅಧ್ಯಕ್ಷ ಮನನ್ ಕುಮಾರ್ ಮಿಶ್ರಾ ಅವರನ್ನು ವಿಶ್ವವಿದ್ಯಾಲಯದ ಮುಂಬರುವ ಘಟಿಕೋತ್ಸವ ಸಮಾರಂಭಕ್ಕೆ ಆಹ್ವಾನಿಸಿದ್ದನ್ನು ಭಾರತದ ಪ್ರಮುಖ ಕಾನೂನು ಶಾಲೆಗಳಲ್ಲಿ ಒಂದಾದ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿ (NLSIU) ವಿದ್ಯಾರ್ಥಿಗಳು ಮತ್ತು ಹಳೆಯ ವಿದ್ಯಾರ್ಥಿಗಳು ವಿರೋಧಿಸಿದ್ದಾರೆ.
ಹೈದರಾಬಾದ್ನಲ್ಲಿರುವ ಮತ್ತೊಂದು ಪ್ರಮುಖ ಸಂಸ್ಥೆಯಾದ ನ್ಯಾಷನಲ್ ಅಕಾಡೆಮಿ ಆಫ್ ಲೀಗಲ್ ಸ್ಟಡೀಸ್ ಅಂಡ್ ರಿಸರ್ಚ್ (NALSAR) ಕಾನೂನು ವಿಶ್ವವಿದ್ಯಾಲಯದಲ್ಲಿ ನಡೆದ ಪ್ರಮುಖ ವಿವಾದದ ಕೆಲವು ದಿನಗಳ ನಂತರ NLSIU ನಿಂದಲೂ ವಿರೋಧ ವ್ಯಕ್ತವಾಗಿದೆ.
ಮುಖ್ಯ ನ್ಯಾಯಮೂರ್ತಿ ಕಾಂತ್ ಅವರನ್ನು ತಮ್ಮ ಘಟಿಕೋತ್ಸವಕ್ಕೆ ಮುಖ್ಯ ಅತಿಥಿಯಾಗಿ ಆಹ್ವಾನಿಸಿದ್ದಕ್ಕೆ 2026ರ ಪದವಿ ಪಡೆದ ಬ್ಯಾಚ್ನ ಕೆಲವರು ವಿದ್ಯಾರ್ಥಿಗಳು ಆಕ್ಷೇಪ ವ್ಯಕ್ತಪಡಿಸಿದ ನಂತರ, ಆ ವಿದ್ಯಾರ್ಥಿಗಳನ್ನು ವಕೀಲರಾಗಿ ದಾಖಲಿಸಬಾರದು ಎಂದು BCI ಆದೇಶಿಸಿತ್ತು.
ಬಿಸಿಐ ನ ಆದೇಶಕ್ಕೆ ದೇಶಾದ್ಯಂತ ತೀವ್ರ ವಿರೋಧ, ಟೀಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡ BCI ತನ್ನ ಆದೇಶವನ್ನು ಹಿಂತೆಗೆದುಕೊಂಡಿತ್ತು ಮತ್ತು ಮಿಶ್ರಾ ಕಾನೂನು ವಿದ್ಯಾರ್ಥಿಗಳಲ್ಲಿ ಕ್ಷಮೆಯಾಚಿಸಿದ್ದರು, ವಿದ್ಯಾರ್ಥಿಗಳ "ಘನತೆ, ಚಿಂತನೆಯ ಸ್ವಾತಂತ್ರ್ಯ ಮತ್ತು ಕಾನೂನುಬದ್ಧ ಕಾಳಜಿಗಳನ್ನು" ಗೌರವಿಸಬೇಕು ಎಂದು ಹೇಳಿದ್ದರು.
ಶನಿವಾರ NLSIU ನ ವಿದ್ಯಾರ್ಥಿಗಳು ಮತ್ತು ಹಳೆಯ ವಿದ್ಯಾರ್ಥಿಗಳು ಪತ್ರ ಬರೆದಿದ್ದು, ನಾವು NALSAR ನಲ್ಲಿನ ನಮ್ಮ ಸಹವರ್ತಿಗಳಿಗೆ "ಬೇಷರತ್ ಬೆಂಬಲ" ನಿಡುತ್ತೇವೆ ಮತ್ತು BCI ಅಧ್ಯಕ್ಷರ ನಡವಳಿಕೆಯನ್ನು ಟೀಕಿಸಿದ್ದು, NLSIU ನಲ್ಲಿ ನಡೆಯಲಿರುವ ಘಟಿಕೋತ್ಸವದಲ್ಲಿ CJI ಭಾಗವಹಿಸುವಿಕೆಯನ್ನು ವಿರೋಧಿಸಿದ್ದಾರೆ.
ಪದವಿ ಪ್ರದಾನ ಸಮಾರಂಭದಲ್ಲಿ ಯಾರು ಭಾಗವಹಿಸುತ್ತಾರೆ ಎಂಬುದು ವಿಷಯವಲ್ಲ, ಬದಲಾಗಿ ಭಾರತದ ಪ್ರಮುಖ ಕಾನೂನು ಶಾಲೆಗಳ ವಿದ್ಯಾರ್ಥಿಗಳು ತಮ್ಮ ವೃತ್ತಿಪರ ಭವಿಷ್ಯದ ಪರಿಣಾಮಗಳಿಗೆ ಭಯಪಡದೆ ಪ್ರಬಲ ಸಂಸ್ಥೆಗಳು ಮತ್ತು ಸಾರ್ವಜನಿಕ ಅಧಿಕಾರಿಗಳೊಂದಿಗೆ ಭಿನ್ನಾಭಿಪ್ರಾಯ ಹೊಂದಲು ಮುಕ್ತರಾಗಬೇಕೇ ಎಂಬುದು ವಿಷಯ ಎಂದು ವಿದ್ಯಾರ್ಥಿ ಸಂಘ ಹೇಳಿದೆ.
"ಅಧಿಕಾರದ ಎದುರು ಸತ್ಯವನ್ನು ಮಾತನಾಡುವಲ್ಲಿ ಅನುಕರಣೀಯ ಧೈರ್ಯ ಮತ್ತು ನೈತಿಕ ದೃಢವಿಶ್ವಾಸವನ್ನು ತೋರಿಸಿರುವ NALSAR ನಲ್ಲಿ ನಮ್ಮ ಸಹ ವಿದ್ಯಾರ್ಥಿಗಳೊಂದಿಗೆ ನಾವು ಬೇಷರತ್ ಒಗ್ಗಟ್ಟಿನಿಂದ ನಿಲ್ಲುತ್ತೇವೆ" ಎಂದು ಹೇಳಿಕೆ ತಿಳಿಸಿದೆ.
NLSIU ವಿದ್ಯಾರ್ಥಿಗಳು ಮತ್ತು ಹಳೆಯ ವಿದ್ಯಾರ್ಥಿಗಳು NALSAR ವಿದ್ಯಾರ್ಥಿ ಮತ್ತು ಅಧ್ಯಾಪಕ ಸಮುದಾಯಕ್ಕೆ BCI ನಿಂದ ಬೇಷರತ್ತಾದ ಕ್ಷಮೆಯಾಚನೆಯನ್ನು ಒತ್ತಾಯಿಸಿದ್ದಾರೆ.
BCI ವಿದ್ಯಾರ್ಥಿಗಳ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಮೂಲಭೂತ ಹಕ್ಕನ್ನು ಉಲ್ಲಂಘಿಸಲು ಪ್ರಯತ್ನಿಸುತ್ತಿದೆ ಎಂದು NLSIU ವಿದ್ಯಾರ್ಥಿಗಳು ಮತ್ತು ಹಳೆಯ ವಿದ್ಯಾರ್ಥಿಗಳು ಆರೋಪಿಸಿದ್ದಾರೆ. ವಿವಾದಾತ್ಮಕ ಆದೇಶಕ್ಕೆ ಸಂಬಂಧಿಸಿದಂತೆ ಅದರ ಅಧಿಕೃತ ಲೆಟರ್ಹೆಡ್ ನ್ನು ಅಧ್ಯಕ್ಷರು ಹೇಗೆ ಬಳಸಿಕೊಂಡರು ಎಂಬುದನ್ನು ವಿವರಿಸಲು ಅವರು BCI ಅನ್ನು ಒತ್ತಾಯಿಸಿದ್ದಾರೆ.
ಭಾರತದ ಮುಖ್ಯ ನ್ಯಾಯಮೂರ್ತಿ ಮತ್ತು BCI ಅಧ್ಯಕ್ಷರು ಸೇರಿದಂತೆ ವಿಶ್ವವಿದ್ಯಾಲಯದ ಆಡಳಿತ ಮಂಡಳಿಗಳೊಂದಿಗೆ NLSIU ಮತ್ತು BCI ದೀರ್ಘ ಸಾಂಸ್ಥಿಕ ಸಂಬಂಧವನ್ನು ಹೊಂದಿವೆ. NLSIU ನ 2025 ರ ಘಟಿಕೋತ್ಸವದಲ್ಲಿ, ಮಿಶ್ರಾ ಸ್ವಾಗತ ಭಾಷಣ ಮಾಡುವಾಗ, ಸುಪ್ರೀಂ ಕೋರ್ಟ್ ನ್ಯಾಯಾಧೀಶರಾಗಿದ್ದ ಇಂದಿನ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಇತ್ತೀಚಿನ ವಿವಾದ ದೇಶದ ಎರಡು ಅತ್ಯಂತ ಶಕ್ತಿಶಾಲಿ ಕಾನೂನು ಸಂಸ್ಥೆಗಳಾದ ಸುಪ್ರೀಂ ಕೋರ್ಟ್ ಮತ್ತು ಕಾನೂನು ವೃತ್ತಿಯ ಶಾಸನಬದ್ಧ ನಿಯಂತ್ರಕ ಸಂಸ್ಥೆಯನ್ನು ಭಾರತದ ಅತ್ಯಂತ ಪ್ರಭಾವಶಾಲಿ ಕಾನೂನು ಶಾಲೆಗಳಲ್ಲಿ ಒಂದಾದ ವಿದ್ಯಾರ್ಥಿಗಳೊಂದಿಗಿನ ಚರ್ಚೆಯ ಕೇಂದ್ರಬಿಂದುವನ್ನಾಗಿ ಮಾಡಿದೆ.