ಹಾಸನ: ಸ್ವಾತಂತ್ರ್ಯ ದಿನಾಚರಣೆಯ ದಿನದಂದು ಹೆಚ್’ಎಂಟಿ ಕೈಗಡಿಯಾರಗಳ ಮಾರಾಟ ದಾಖಲೆಯ ಪ್ರಮಾಣದಲ್ಲಿ ಆಗಿದ್ದು ಒಂದೇ ದಿನ ಸುಮಾರು ₹35 ಲಕ್ಷಕ್ಕೂ ಹೆಚ್ಚು ವಹಿವಾಟು ನಡೆದಿದೆ ಎಂದು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ತಿಳಿಸಿದರು.
ಹಾಸನ ಜಿಲ್ಲೆಯ ಹೊಳೆನರಸೀಪುರದಲ್ಲಿ ಮಾತನಾಡಿದ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ, ಸ್ವಾತಂತ್ರ್ಯ ದಿನದ ಪ್ರಯುಕ್ತ ಹೆಚ್ಎಂಟಿ ಕಂಪನಿಯು ವಿಶೇಷ ಆವೃತ್ತಿಯ ಕೆಲ ಅಪರೂಪದ ಕೈಗಡಿಯಾರಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿತ್ತು. ಅಂದು ವಾಚುಗಳ ಖರೀದಿಗೆ ಮುಗಿಬಿದ್ದ ಗ್ರಾಹಕರು ಸುಮಾರು ಎರಡುವರೆ ಕಿಲೋಮೀಟರ್ ಗೂ ಹೆಚ್ಚು ದೂರ ಸಾಲಿನಲ್ಲಿ ನಿಂತು ಖರೀದಿ ಮಾಡಿದ್ದಾರೆ ಎಂದು ಹೇಳಿದರು.
ಅಂದು ನಮ್ಮ ಕಡೆಯಿಂದ ಸಾವಿರಾರು ಕೈ ಗಡಿಯಾರಗಳು ಮಾರಾಟವಾಗಿದ್ದು, ಒಂದೇ 35 ಲಕ್ಷ ರೂ. ವಹಿವಾಟು ನಡೆದಿರುವುದು ಕಂಪನಿಯನ್ನು ಪುನಶ್ಚೇತನಗೊಳಿಸುವ ನಮ್ಮ ಉದ್ದೇಶಕ್ಕೆ ಮತ್ತಷ್ಟು ಬಲ ನೀಡಿದೆ ಎಂದರು.
ಹೆಚ್ಎಂ.ಟಿ ಗಡಿಯಾರಗಳ ಬಗ್ಗೆ ಜನರಲ್ಲಿ ಇವತ್ತಿಗೂ ಅಭಿಮಾನ ಗೌರವ ಇದೆ. ಹಿಂದೆ ಹೆಚ್ ಎಂಟಿ ಗಡಿಯಾರ ಕಟ್ಟುವುದು ಎಂದರೆ ಹೆಮ್ಮೆ ಮತ್ತು ಪ್ರತಿಷ್ಠೆಯ ಸಂಗತಿಯಾಗಿತ್ತು. ಆ ವೈಭವವನ್ನು ಮರಳಿ ತರುವುದು ನಮ್ಮ ಉದ್ದೇಶವಾಗಿದೆ. ಅದಕ್ಕಾಗಿ ಗಂಭೀರ ಪ್ರಯತ್ನಗಳನ್ನು ಮಾಡುತ್ತಿದ್ದೇವೆ ಎಂದು ಹೆಚ್ ಡಿ ಕುಮಾರಸ್ವಾಮಿ ತಿಳಿಸಿದರು.
ಕಾರ್ಖಾನೆಗೆ ಮರುಜೀವ ನೀಡುವ ನಿಟ್ಟಿನಲ್ಲಿ ಎರಡು ವರ್ಷಗಳಿಂದ ನಿರಂತರ ಪ್ರಯತ್ನ ಮಾಡುತ್ತಿದ್ದೇವೆ. ಈ ಕುರಿತು ಯೋಜನಾ ಆಯೋಗದ ಸದಸ್ಯರಾದ ವಿ.ಕೆ. ಸಾರಸ್ವತ ಅವರ ಅಧ್ಯಕ್ಷತೆಯಲ್ಲಿ ಉನ್ನತ ಮಠದ ಸಮಿತಿಯನ್ನು ರಚಿಸಲಾಗಿತ್ತು. ಈಗಾಗಲೇ ಸಮಿತಿ ವರದಿಯನ್ನು ನೀಡಿ ಕೆಲವು ಮಹತ್ವದ ಶಿಫಾರಸ್ಸುಗಳನ್ನು ಮಾಡಿದೆ. ಅದರಂತೆಯೇ ಕಾರ್ಖಾನೆಗೆ ಮರುಜೀವ ನೀಡಲು ಈಗಾಗಲೇ ಕೇಂದ್ರದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರೊಂದಿಗೂ ಕೂಡ ಮಾತಕತೆ ನಡೆಸಿದ್ದೇನೆ ಎಂದು ಹೆಚ್ ಡಿ ಕುಮಾರಸ್ವಾಮಿ ಮಾಹಿತಿ ನೀಡಿದರು.
ಯುವಕರಿಗೆ ಕೃತಜ್ಞತೆ ಸಲ್ಲಿಸಿದ ಹೆ್ಚ್ ಡಿಕೆ: ದೊಡ್ಡ ಪ್ರಮಾಣದಲ್ಲಿ ಯುವಕರು ಸ್ವಾತಂತ್ರ್ಯ ದಿನ ವಾಚ್ ಗಳನ್ನು ಖರೀದಿ ಮಾಡಿದ್ದಾರೆ. ವಯಸ್ಸಿನ ಹಂಗಿಲ್ಲದೆ ಹಿರಿಯರು ಕಿರಿಯರು ಮಕ್ಕಳು ಕೂಡ ಸಾಲಿನಲ್ಲಿ ನಿಂತು ಗಡಿಯಾರಗಳನ್ನು ಖರೀದಿ ಮಾಡಿದ್ದಾರೆ. ಎಚ್ಎಂಟಿಯ ಮೇಲೆ ಅವರೆಲ್ಲರೂ ಇರಿಸಿರುವ ಅಭಿಮಾನಕ್ಕೆ ಧನ್ಯವಾದ ಹೇಳಲು ಬಯಸುತ್ತೇನೆ.
ಮುಖ್ಯವಾಗಿ ಯುವಜನತೆ ನಮ್ಮ ಗಡಿಯಾರಗಳಿಗೆ ಅತಿಹೆಚ್ಚು ಅಭಿಮಾನ ತೋರುತ್ತಿದ್ದಾರೆ, ಅವರ ಬೆಂಬಲ ಹೀಗೆಯೇ ಇರಲಿ ಎಂದು ಹೆಚ್ ಡಿ ಕುಮಾರಸ್ವಾಮಿ ಹೇಳಿದರು.