ಶಹಾಪುರ (ಯಾದಗಿರಿ): ಗಂಡ ಹೆಂಡತಿ ಜಗಳ ಉಂಡು ಮಲಗುವ ತನಕ ಎನ್ನುತ್ತಾರೆ. ಆದರೆ, ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಗೋಗಿ ಗ್ರಾಮದಲ್ಲಿ ನಡೆದ ಗಂಡ ಹೆಂಡತಿಯ ಜಗಳ, ತಾವೇ ಜನ್ಮ ಕೊಟ್ಟ ಮಕ್ಕಳನ್ನ ಕೊಲೆ ಮಾಡುವ ತನಕ ಹೋಗಿದೆ. ಹೌದು, ಶಹಾಪುರ ತಾಲೂಕಿನ ಗಂಗನಾಳ್ ಗ್ರಾಮದ ಶಾಂತಪ್ಪ ಬಿರೆದಾರ್ ಎಂಬಾತ ಹೆಂಡತಿ ಜೊತೆಗೆ ಜಗಳ ಮಾಡಿಕೊಂಡು, ತನ್ನ ಇಬ್ಬರು ಮಕ್ಕಳನ್ನು ಕಾಲುವೆಗೆ (ಕ್ಯಾನಲ್) ಎಸೆದಿರುವ ಆಘಾತಕಾರಿ ಘಟನೆ ನಡೆದಿದೆ. ಆ ಕುರಿತ ವರದಿ ಇಲ್ಲಿದೆ:
ಏನಿದು ಘಟನೆ?
ಗಂಗನಾಳ್ ಗ್ರಾಮದಲ್ಲಿ ಗಾರೆ ಕೆಲಸ ಮಾಡಿಕೊಂಡಿದ್ದ, ಕಕ್ಕಸಗೇರ ಗ್ರಾಮದ ನಿವಾಸಿಯಾದ ಶಾಂತಪ್ಪ ಬಿರೆದಾರ್ ಮತ್ತು ಆತನ ಪತ್ನಿ ರೇಣುಕಾ ನಡುವೆ, ಮಂಗಳವಾರ ಸಂಜೆ ತೀವ್ರ ಕೌಟುಂಬಿಕ ಕಲಹ ಉಂಟಾಗಿದೆ. ಇದರಿಂದ ತೀವ್ರ ಕೋಪಗೊಂಡ ಶಾಂತಪ್ಪ, ತನ್ನ ಮೂವರು ಮಕ್ಕಳನ್ನು ಬೈಕ್ ಮೇಲೆ ಕೂರಿಸಿಕೊಂಡು ಹೋಗಿ, ಗೋಗಿ ಗ್ರಾಮದ ಬಳಿ ಇರುವ ಬೋರುಕ ಕಂಪನಿ ಹತ್ತಿರದ ಕ್ಯಾನಲ್ಗೆ ತಾನೇ ಜನ್ಮ ನೀಡಿದ ಇಬ್ಬರು ಮಕ್ಕಳನ್ನು ಎಸೆದಿದ್ದಾನೆ. ಇನ್ನು, ಮೃತರನ್ನು 9 ವರ್ಷದ ಸಾನ್ವಿ ಮತ್ತು 2 ವರ್ಷದ ಸೃಜನ್ ಎಂದು ಗುರುತಿಸಲಾಗಿದೆ.
ಮತ್ತೊಬ್ಬ ಮಗಳು ಬಚಾವ್
ಹೆಂಡತಿ ಜೊತೆ ಜಗಳವಾಡಿ ಮೂವರು ಮಕ್ಕಳನ್ನು ಬೈಕ್ನಲ್ಲಿ ಕೂರಿಸಿಕೊಂಡು ತೆರಳಿದ್ದ ಶಾಂತಪ್ಪ ಬಿರೆದಾರ್, ಈ ಪೈಕಿ ಇಬ್ಬರು ಮಕ್ಕಳನ್ನ ಕಾಲುವೆಗೆ ಬಿಸಾಡಿದ್ದಾನೆ. ಆದರೆ, ಓರ್ವ ಮಗಳನ್ನು ಅಲ್ಲಿಂದ ವಾಪಸ್ ಕರೆತಂದು ತಾಯಿಗೆ ಒಪ್ಪಿಸಿದ್ದ ಎನ್ನಲಾಗ್ತಿದೆ. ಏತನ್ಮಧ್ಯೆ, ಆರೋಪಿ ಶಾಂತಪ್ಪ ಬಿರೆದಾರ್, ಪೊಲೀಸರ ಎದುರು ತಾನೇ ಮಕ್ಕಳನ್ನು ಕಾಲುವೆಗೆ ಎಸೆದಿದ್ದಾಗಿ ಒಪ್ಪಿಕೊಂಡಿದ್ದಾನೆ. ಇನ್ನು, ಗೋಗಿ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿ, ಆರೋಪಿ ತಂದೆಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮತ್ತೊಂದೆಡೆ, ಮಕ್ಕಳಿಗಾಗಿ ಕಾಲುವೆಯಲ್ಲಿ ಪೊಲೀಸರು ಮತ್ತು ರಕ್ಷಣಾ ಸಿಬ್ಬಂದಿ ಇನ್ನು ಕೂಡ ಶೋಧ ಕಾರ್ಯ ನಡೆಸುತ್ತಿದ್ದಾರೆ.