ಬೆಂಗಳೂರು: ಆದಾಯದಕ್ಕಿಂತ ಹೆಚ್ಚು ಆಸ್ತಿ ಗಳಿಸಿದ ಆರೋಪ ಎದುರಿಸುತ್ತಿರುವ ಬೆಂಗಳೂರಿನ ವಿಶೇಷ ಭೂಸ್ವಾಧೀನಾಧಿಕಾರಿ ಮಲ್ಲಿಕಾರ್ಜುನ ಬಿ. ಅವರಿಗೆ ಸೇರಿದ್ದ 11 ಕಡೆಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ಗುರುವಾರ ಏಕಕಾಲದಲ್ಲಿ ದಾಳಿ ನಡೆಸಿದ್ದು, ಈ ವೇಳೆ ಬರೋಬ್ಬರಿ 18 ಕೋಟಿ ರು.ಗೂ ಅಧಿಕ ಮೌಲ್ಯದ ಅಕ್ರಮ ಆಸ್ತಿ ಪತ್ತೆಯಾಗಿದೆ. ಅಲ್ಲದೇ ಈ ಅಧಿಕಾರಿಯು 100 ಎಕರೆ ಕೃಷಿ ಭೂಮಿ ಹೊಂದಿರುವುದು ಪತ್ತೆಯಾಗಿದೆ.
ಬೆಂಗಳೂರಿನ ಸುಬ್ರಹ್ಮಣ್ಯ ನಗರ, ಗುಡ್ಡದಹಳ್ಳಿ, ಹೆಬ್ಬಾಳ ಸೇರಿದಂತೆ ಹಲವು ಕಡೆ ಮಲ್ಲಿಕಾರ್ಜುನ ಅವರಿಗೆ ಸೇರಿದ ಕಚೇರಿ ಮತ್ತು ನಿವಾಸಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಒಟ್ಟು 11 ಕಡೆಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಿದ ಲೋಕಾಯುಕ್ತ ಅಧಿಕಾರಿಗಳು, ಅಧಿಕಾರಿಯ ಸಂಪತ್ತಿನ ರಾಶಿ ನೋಡಿ ದಂಗಾಗಿದ್ದಾರೆ. ತಮ್ಮ ಕಾನೂನುಬದ್ಧ ಆದಾಯಕ್ಕಿಂತ ಹಲವು ಪಟ್ಟು ಅಧಿಕ ಆಸ್ತಿಯನ್ನು ಹೊಂದಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.
100 ಎಕರೆ ಕೃಷಿ ಭೂಮಿ ಪತ್ತೆ
ಭೂಸ್ವಾಧೀನಾಧಿಕಾರಿಯು ಎರಡು ಐಷಾರಾಮಿ ಮನೆಗಳನ್ನು ಹೊಂದಿದ್ದಾರೆ. ಅಚ್ಚರಿಯ ವಿಷಯವೆಂದರೆ, ಅವರು ಬರೋಬ್ಬರಿ 100 ಎಕರೆ 5 ಗುಂಟೆಯಷ್ಟು ಕೃಷಿ ಜಮೀನನ್ನು ಹೊಂದಿದ್ದಾರೆ. ಈ ಸ್ಥಿರಾಸ್ತಿಯ ಒಟ್ಟು ಮೌಲ್ಯವೇ ಸುಮಾರು 14.28 ಕೋಟಿ ರು. ಎಂದು ಅಂದಾಜಿಸಲಾಗಿದೆ.
ಕೇವಲ ಜಮೀನು ಮಾತ್ರವಲ್ಲದೆ, ಚರಾಸ್ತಿಯಲ್ಲೂ ಅವರು ಅಪಾರ ಸಂಪತ್ತು ಗಳಿಸಿದ್ದಾರೆ. 2.53 ಕೋಟಿ ರು. ನಗದು ಪತ್ತೆಯಾಗಿದೆ. 3.10 ಲಕ್ಷ ರು. ಮೌಲ್ಯದ ಚಿನ್ನಾಭರಣಗಳು. 15 ಲಕ್ಷ ರು. ಮೌಲ್ಯದ ಐಷಾರಾಮಿ ವಾಹನಗಳು. ಬ್ಯಾಂಕ್ ಬ್ಯಾಲೆನ್ಸ್ ರೂಪದಲ್ಲಿ 1 ಕೋಟಿ ರು. ಮತ್ತು 33.40 ಲಕ್ಷ ರು. ಮೌಲ್ಯದ ಮನೆಯ ಗೃಹೋಪಯೋಗಿ ವಸ್ತುಗಳು. ಚರಾಸ್ತಿಯ ಒಟ್ಟು ಮೌಲ್ಯ 4.4 ಕೋಟಿ ರು. ಆಗಿದ್ದು, ಒಟ್ಟಾರೆಯಾಗಿ ಈ ಅಧಿಕಾರಿಯು ಗಳಿಸಿರುವ ಅಕ್ರಮ ಆಸ್ತಿಯ ಮೌಲ್ಯವು 18.33 ಕೋಟಿ ರು.ಆಗಿದ್ದು, ಇದರಲ್ಲಿ ಸುಮಾರು 12.95 ಕೋಟಿ ರು. ಅಕ್ರಮ ಆಸ್ತಿ ಎಂದು ಲೋಕಾಯುಕ್ತ ಅಧಿಕಾರಿಗಳು ತಿಳಿಸಿದ್ದಾರೆ.
ಈ ಸಂಬಂಧ ಭ್ರಷ್ಟಾಚಾರ ನಿಗ್ರಹ ಕಾಯ್ದೆಯ ಅಡಿಯಲ್ಲಿ ಬೆಂಗಳೂರು ನಗರ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇಷ್ಟು ದೊಡ್ಡ ಪ್ರಮಾಣದ ಭೂಮಿಯನ್ನು ಮತ್ತು ನಗದು ಹಣವನ್ನು ಸರ್ಕಾರಿ ಸೇವೆಯಲ್ಲಿದ್ದ ವ್ಯಕ್ತಿ ಹೇಗೆ ಸಂಗ್ರಹಿಸಿದನು ಎಂಬ ಬಗ್ಗೆ ತೀವ್ರ ತನಿಖೆ ನಡೆಯುತ್ತಿದೆ.