ಬೆಂಗಳೂರು: ಸಹಕಾರ ಸಂಘಗಳ ಮೂಲಕ ರೈತ ಸದಸ್ಯರಿಗೆ ನೀಡುವ ಶೂನ್ಯ ಬಡ್ಡಿ ದರದ ಸಾಲಮಿತಿಯನ್ನು 5 ಲಕ್ಷ ರೂ.ಗಳಿಗೆ ಏರಿಸಲಾಗಿದ್ದು, ಈ ಸಂಬಂಧ ಸರ್ಕಾರದಿಂದ ಅಧಿಕೃತ ಸುತ್ತೋಲೆ ಹೊರಡಿಸಲಾಗಿದೆ.
ರೈತರಿಗೆ ಸಹಕಾರಿ ಸಂಘಗಳ ಮೂಲಕ ನೀಡುವ ಶೂನ್ಯ ಬಡ್ಡಿ ದರದ ಬೆಳೆ ಸಾಲ ಮಿತಿಯನ್ನು 2023-24ನೇ ಸಾಲಿನಲ್ಲಿಸರಕಾರ 3ರಿಂದ 5 ಲಕ್ಷ ರೂ.ಗೆ ಏರಿಕೆ ಮಾಡಲಾಗಿತ್ತು. ಆದರೆ ನಬಾರ್ಡ್ ಇದಕ್ಕೆ ಬೇಕಾದ ಮೊತ್ತವನ್ನು ಬಿಡುಗಡೆಗೊಳಿಸದ ಕಾರಣ ಅನೇಕ ರೈತರು ಈ ಯೋಜನೆಯಿಂದ ವಂಚಿತರಾಗಿದ್ದರು.
ಈಗ ಸಾಲ ಮಿತಿ ಏರಿಕೆ ಕುರಿತು ಸಹಕಾರ ಇಲಾಖೆಯಿಂದ ಸುತ್ತೋಲೆ ಪ್ರಕಟವಾಗಿದ್ದು, 2026-27ನೇ ಸಾಲಿನಲ್ಲಿ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ನೀಡುವ 5 ಲಕ್ಷ ರೂ.ವರೆಗಿನ ಕೃಷಿ ಸಾಲ ಮತ್ತು 2 ಲಕ್ಷ ರೂ.ವರೆಗಿನ ಪಶು ಸಂಗೋಪನೆ ಮತ್ತು ಮೀನುಗಾರಿಕೆ ದುಡಿಯುವ ಬಂಡವಾಳ ಸಾಲ ಹಾಗೂ ಶೇ.3 ಬಡ್ಡಿ ದರದಲ್ಲಿ ನೀಡುವ 15 ಲಕ್ಷ ರೂ. ಮಧ್ಯಮಾವಧಿ ಸಾಲ ವಿತರಿಸುವಂತೆ ಸೂಚಿಸಲಾಗಿದೆ. ಇದುವರೆಗೆ ಶೇ.3 ಬಡ್ಡಿ ದರದ ಸಾಲದ ಮಿತಿ ಗರಿಷ್ಠ 10 ಲಕ್ಷ ರೂ. ಆಗಿತ್ತು. ಕನಿಷ್ಠ ಶೇ.10ರಷ್ಟು ಹೊಸ ಸದಸ್ಯರಿಗೆ, ಶೇ.24.10ರಷ್ಟು ಪ.ಜಾತಿ, ಪಂಗಡದ ಸದಸ್ಯರಿಗೆ ಸಾಲ ವಿತರಿಸಲು ನಿರ್ದೇಶನ ನೀಡಲಾಗಿದೆ.
ಪ್ರಿಯ ರೈತರೇ, "ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕ 5 ಲಕ್ಷ ರೂ.ವರೆಗೆ ಪಡೆದ ಬೆಳೆ ಸಾಲವನ್ನು ಗರಿಷ್ಠ ಒಂದು ವರ್ಷದೊಳಗೆ ಬಡ್ಡಿರಹಿತವಾಗಿ ಮರುಪಾವತಿಸಿದಲ್ಲಿ ಸರಕಾರದಿಂದ ಪ್ರತಿವರ್ಷ ಬಡ್ಡಿ ಸಹಾಯಧನ ಪಾವತಿಸಲಾಗುತ್ತದೆ. ಮಂಜೂರಾದ ಸಾಲದ ಹಣ ಡಿಸಿಸಿ ಬ್ಯಾಂಕ್ನಲ್ಲಿರುವ ಉಳಿತಾಯ ಖಾತೆಗೆ ಜಮಾ ಆಗಿರುವುದನ್ನು ಖಚಿತಪಡಿಸಿಕೊಂಡು ಯೋಜನೆಯ ಸದುಪಯೋಗ ಪಡೆದುಕೊಳ್ಳಲು ಕೋರಿಕೊಳ್ಳುತ್ತೇನೆ ಎಂದು ಸಿಎಂ ಡಿಕೆ ಶಿವಕುಮಾರ್ ಸಂದೇಶ ನೀಡಿದ್ದಾರೆ.