ಗದಗ  
ರಾಜ್ಯ

ಗದಗ: ಸರ್ಕಾರಿ ಶಾಲಾ ಬಿಸಿಯೂಟದ ಉಪ್ಪಿಟ್ಟಿನಲ್ಲಿ ಹಲ್ಲಿ ಪತ್ತೆ: ನೂರಾರು ಮಕ್ಕಳು ಆಸ್ಪತ್ರೆಗೆ ದಾಖಲು..!

ಊಟದ ಬಳಿಕ ಹಲವು ವಿದ್ಯಾರ್ಥಿಗಳು ಹೊಟ್ಟೆ ನೋವು ಹಾಗೂ ವಾಂತಿಯಿಂದ ಬಳಲಲು ಆರಂಭಿಸಿದ್ದಾರೆ. ಇದರಿಂದ ಶಾಲೆಯಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಶಿಕ್ಷಕರು ಹಾಗೂ ಪೋಷಕರು ಕಂಗಾಲಾಗಿದ್ದಾರೆ.

ಗದಗ: ಸರ್ಕಾರಿ ಶಾಲೆಯಲ್ಲಿ ಬೆಳಗಿನ ಉಪಾಹಾರವಾಗಿ ನೀಡಿದ್ದ ಉಪ್ಪಿಟ್ಟಿನಲ್ಲಿ ಹಲ್ಲಿ ಪತ್ತೆಯಾದ ಹಿನ್ನೆಲೆಯಲ್ಲಿ ನೂರಕ್ಕೂ ಹೆಚ್ಚು ಮಕ್ಕಳು ಆಸ್ಪತ್ರೆಗೆ ದಾಖಲಾದ ಘಟನೆ ಮುಂಡರಗಿ ತಾಲೂಕಿನ ಬೀಡನಾಳ ಗ್ರಾಮದಲ್ಲಿ ನಡೆದಿದೆ.

ಬೀಡನಾಳ ಗ್ರಾಮದ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಬೆಳಗ್ಗೆ ಮಕ್ಕಳಿಗೆ ಉಪ್ಪಿಟ್ಟು ನೀಡಲಾಗಿತ್ತು. ಕೆಲವು ಮಕ್ಕಳು ಊಟ ಸೇವಿಸಿದ ಬಳಿಕ ಉಪ್ಪಿಟ್ಟಿನಲ್ಲಿ ಹಲ್ಲಿ ಇರುವುದು ಗಮನಕ್ಕೆ ಬಂದಿದೆ.

ಊಟದ ಬಳಿಕ ಹಲವು ವಿದ್ಯಾರ್ಥಿಗಳು ಹೊಟ್ಟೆ ನೋವು ಹಾಗೂ ವಾಂತಿಯಿಂದ ಬಳಲಲು ಆರಂಭಿಸಿದ್ದಾರೆ. ಇದರಿಂದ ಶಾಲೆಯಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಶಿಕ್ಷಕರು ಹಾಗೂ ಪೋಷಕರು ಕಂಗಾಲಾಗಿದ್ದಾರೆ.

ತಕ್ಷಣ ಗ್ರಾಮಸ್ಥರ ನೆರವಿನೊಂದಿಗೆ ಶಾಲಾ ಸಿಬ್ಬಂದಿ ಅಸ್ವಸ್ಥಗೊಂಡ ಮಕ್ಕಳನ್ನು ಮುಂಡರಗಿ ತಾಲೂಕು ಆಸ್ಪತ್ರೆಗೆ ದಾಖಲಿಸಿದ್ದಾರೆ. ವೈದ್ಯರು ಮಕ್ಕಳಿಗೆ ತಕ್ಷಣ ಚಿಕಿತ್ಸೆ ನೀಡಿದ್ದು, ಬಹುತೇಕ ಮಕ್ಕಳು ಸ್ಥಿರವಾಗಿದ್ದಾರೆ ಎಂದು ತಿಳಿದುಬಂದಿದೆ. ಕೆಲ ಮಕ್ಕಳನ್ನು ಮುನ್ನೆಚ್ಚರಿಕೆ ಕ್ರಮವಾಗಿ ವೈದ್ಯಕೀಯ ನಿಗಾದಲ್ಲಿ ಇರಿಸಲಾಗಿತ್ತು.

ಘಟನೆ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಶಿಕ್ಷಣ ಇಲಾಖೆಯ ಅಧಿಕಾರಿಗಳು, ತಾಲೂಕು ಶಿಕ್ಷಣಾಧಿಕಾರಿ ಸೇರಿದಂತೆ ಹಲವು ಅಧಿಕಾರಿಗಳು ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ವೃತ್ತ ನಿರೀಕ್ಷಕ (CPI) ಸೇರಿದಂತೆ ಹಿರಿಯ ಪೊಲೀಸ್ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಆಸ್ಪತ್ರೆಗೆ ತೆರಳಿ ಮಕ್ಕಳ ಆರೋಗ್ಯದ ಬಗ್ಗೆ ಮಾಹಿತಿ ಪಡೆದಿದ್ದಾರೆ.

ವೈದ್ಯರು ಹಾಗೂ ಅಧಿಕಾರಿಗಳು ಮಕ್ಕಳ ಆರೋಗ್ಯದ ಮೇಲೆ ನಿರಂತರ ನಿಗಾ ವಹಿಸಿದ್ದು, ಘಟನೆ ಕುರಿತು ತನಿಖೆ ಆರಂಭಿಸಲಾಗಿದೆ.

ಬಿಸಿಯೂಟದ ಗುಣಮಟ್ಟದ ಬಗ್ಗೆ ತನಿಖೆ

ಮಧ್ಯಾಹ್ನದ ಬಿಸಿಯೂಟದ ಗುಣಮಟ್ಟ, ಆಹಾರ ತಯಾರಿಸುವ ವಿಧಾನ ಹಾಗೂ ವಿತರಣಾ ವ್ಯವಸ್ಥೆ ಕೂಡ ತನಿಖೆಯ ವ್ಯಾಪ್ತಿಗೆ ಬರುವ ಸಾಧ್ಯತೆಯಿದೆ. ಶಾಲೆಗಳಲ್ಲಿ ಆಹಾರ ಸುರಕ್ಷತಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದೆಯೇ ಎಂಬ ಬಗ್ಗೆಯೂ ಪರಿಶೀಲನೆ ನಡೆಯಲಿದೆ.

ಘಟನೆಯಿಂದ ಆರಂಭದಲ್ಲಿ ಪೋಷಕರು ಆತಂಕಗೊಂಡಿದ್ದರೂ, ಬಳಿಕ ವೈದ್ಯರು ಯಾವುದೇ ಗಂಭೀರ ಆರೋಗ್ಯ ಸಮಸ್ಯೆಯ ಸಾಧ್ಯತೆ ಇಲ್ಲ ಎಂದು ಭರವಸೆ ನೀಡಿದ್ದಾರೆ.

ಪೋಷಕ ಸುನಿಲ್ ಹಳ್ಳಿ ಮಾತನಾಡಿ, “ಬಿಸಿಯೂಟ ಸಿಬ್ಬಂದಿ ಹೆಚ್ಚು ಜಾಗರೂಕರಾಗಿರಬೇಕು. ಇಂತಹ ನಿರ್ಲಕ್ಷ್ಯ ನಡೆಯಬಾರದು. ಆಹಾರ ಪದಾರ್ಥಗಳನ್ನು ತೆರೆದಿಡಬಾರದು. ಈ ಘಟನೆಯಿಂದ ನೂರಾರು ಮಕ್ಕಳು ಆಸ್ಪತ್ರೆಗೆ ದಾಖಲಾಗುವಂತಾಗಿದೆ. ಆಹಾರ ತಯಾರಿಸಿ ವಿತರಿಸುವವರನ್ನು ನಾವು ನಂಬಿದ್ದೇವೆ. ಇಂತಹ ಘಟನೆಗಳು ಮತ್ತೆ ನಡೆಯದಂತೆ ಶಾಲಾ ಅಧಿಕಾರಿಗಳು ಹಾಗೂ ಸಂಬಂಧಪಟ್ಟ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು” ಎಂದು ಒತ್ತಾಯಿಸಿದ್ದಾರೆ.

ಮುಂಡರಗಿ ತಾಲೂಕು ಆಸ್ಪತ್ರೆಯ ವೈದ್ಯರೊಬ್ಬರು, “ಎಲ್ಲಾ ಮಕ್ಕಳು ಅಪಾಯದಿಂದ ಹೊರಬಂದಿದ್ದಾರೆ. ಆತಂಕಪಡುವ ಅಗತ್ಯವಿಲ್ಲ” ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಪಾರದೀಪ್ ಕರಾವಳಿಯಲ್ಲಿ ಭೀಕರ ದುರಂತ: 72,100 ಟನ್ ಕಬ್ಬಿಣದ ಅದಿರು ಹೊತ್ತಿದ್ದ Panama ಹಡಗು ಮುಳುಗಡೆ; ಇಬ್ಬರ ರಕ್ಷಣೆ, 22 ಮಂದಿ ನಾಪತ್ತೆ..!

Hormuz ಮೇಲೆ ಅಮೆರಿಕಾ ಕಣ್ಣು: ‘‘NEW US Territory’’ ಎಂದು ಮತ್ತೆ ನಕ್ಷೆ ಪೋಸ್ಟ್ ಮಾಡಿದ ಟ್ರಂಪ್, ಇರಾನ್ ಕೆಂಡಾಮಂಡಲ..!

ವಾಲ್ಮೀಕಿ ನಿಗಮ ಹಗರಣ: Prosecutionಗೆ ರಾಜ್ಯಪಾಲರ ಅನುಮತಿ ಕೋರಿದ CBI, ಸಚಿವ ನಾಗೇಂದ್ರಗೆ ಹೆಚ್ಚಿದ ಸಂಕಷ್ಟ..!

ಕೈಕೊಟ್ಟ ಮುಂಗಾರು: ಬರ ತಗ್ಗಿಸಲು 28 ಕೋಟಿ ರೂ. ವೆಚ್ಚದಲ್ಲಿ ಮೋಡ ಬಿತ್ತನೆಗೆ ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್..!

ಶಿವಮೊಗ್ಗ: ಹೊಸನಗರ ತಾಲೂಕಿನ ಸರ್ಕಾರಿ ಶಾಲಾ ಶಿಕ್ಷಕಿಗೆ ರಾಷ್ಟ್ರೀಯ 'ಶ್ರೇಷ್ಠ ಶಿಕ್ಷಕ ಪ್ರಶಸ್ತಿ'