ಬೆಂಗಳೂರು: ಸಾವಿರಾರು ಕೋಟಿ ಆಸ್ತಿಯ ಒಡೆಯ, ಕಾನ್ಫಿಡೆಂಟ್ ಗ್ರೂಪ್ನ ಸಂಸ್ಥಾಪಕ ಸಿ.ಜೆ. ರಾಯ್ ಲಾಂಗ್ಫೋರ್ಡ್ ಟೌನ್ನಲ್ಲಿರುವ ತಮ್ಮ ಕಚೇರಿಯಲ್ಲಿ ಶುಕ್ರವಾರ ಸಾವನ್ನಪ್ಪಿದ್ದು, ಈ ನಡುವೆ ಸಾವಿನ ಹಿಂದಿನ ಕಾರಣ ಕುರಿತು ಹಲವು ಅನುಮಾನಗಳು ಮೂಡತೊಡಗಿವೆ.
ಉದ್ಯಮಿ ಸಿಜೆ ರಾಯ್ ಆತ್ಮಹತ್ಯೆ ಸಂಬಂಧ ಕಾನ್ಫಿಡೆಂಟ್ ಗ್ರೂಪ್ನ ವ್ಯವಸ್ಥಾಪಕ ನಿರ್ದೇಶಕ ಟಿಎ ಜೋಸೆಫ್ ಅವರು ಅಶೋಕನಗರ ಠಾಣೆ ಪೊಲೀಸರಿಗೆ ದೂರು ನೀಡಿದ್ದು, ಯಾವ ಒತ್ತಡ ಅವರನ್ನು ಆತ್ಮಹತ್ಯೆಯಂತಹ ನಿರ್ಧಾರ ತೆಗೆದುಕೊಳ್ಳುವಂತೆ ಮಾಡಿರಬಹುದು ಎಂಬುದರ ಬಗ್ಗೆ ಸಮಗ್ರ ತನಿಖೆಯಾಗಬೇಕೆಂದು ಮನವಿ ಮಾಡಿದ್ದಾರೆ.
ಶುಕ್ರವಾರ ನಾನು ಮತ್ತು ರಾಯ್ ಅವರು ಮಧ್ಯಾಹ್ನ 3 ಗಂಟೆ ಸುಮಾರಿಗೆ ಲ್ಯಾಂಗ್ಫೋರ್ಡ್ ರಸ್ತೆಯ ಕಾನ್ಫಿಡೆಂಟ್ ಗ್ರೂಪ್ಗೆ ತೆರಳಿದ್ದೆವು. ಆದಾಯ ತೆರಿಗೆ ಇಲಾಖೆ ಅಧಿಕಾರಿಗಳಿಗೆ ಹೇಳಿಕೆ ನೀಡಲು ರಾಯ್ ಬಂದಿದ್ದರು. ನಂತರ ತಮ್ಮ ಕ್ಯಾಬಿನ್ಗೆ ಹೋದರು. ಸ್ವಲ್ಪ ಸಮಯದ ನಂತರ ಅವರು ತಮ್ಮ ತಾಯಿ ಜತೆ ಮಾತನಾಡಬೇಕೆಂದು ನನಗೆ ತಿಳಿಸಿದರು. ಹಾಗಾಗಿ ನಾನು ಹೊರ ಬಂದೆ. ಸುಮಾರು 10 ನಿಮಿಷಗಳ ನಂತರ ನಾನು ಹಿಂದಿರುಗಿದಾಗ ರಾಯ್ ಯಾರನ್ನೂ ತಮ್ಮ ಕ್ಯಾಬಿನ್ಗೆ ಬಿಡದಂತೆ ಸೂಚಿಸಿದ್ದಾರೆಂದು ಭದ್ರತಾ ಸಿಬ್ಬಂದಿ ತಿಳಿಸಿದರು.
ಹೀಗಾಗಿ, ಪುನಃ ಹತ್ತು ನಿಮಿಷಗಳ ಬಳಿಕ ಕ್ಯಾಬಿನ್ ಬಳಿ ತೆರಳಿ ಬಾಗಿಲು ತಟ್ಟಿದೆ. ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಬಾಗಿಲನ್ನು ಒಳಗಿನಿಂದ ಲಾಕ್ ಮಾಡಿಕೊಂಡಿರುವುದು ಗೊತ್ತಾಯಿತು. ನಂತರ ನಾವು ಬಾಗಿಲು ಮುರಿದು ಒಳ ಹೋದೆವು. ಆಗ ರಾಯ್ ತಮ್ಮ ಕುರ್ಚಿಯಲ್ಲಿ ಕುಳಿತಿದ್ದರು. ಅವರ ಶರ್ಟ್ ರಕ್ತಮಯವಾಗಿತ್ತು. ದೇಹ ತಣ್ಣಗಾಗಿತ್ತು.
ತಕ್ಷಣ ನಾವು ಆಂಬ್ಯುಲೆನ್ಸ್ ಕರೆಸಿದೆವು. ವೈದ್ಯಕೀಯ ಸಿಬ್ಬಂದಿ ನಾಡಿಮಿಡಿತ ಪರೀಕ್ಷಿಸಿದಾಗ ಸ್ಪಂದನೆ ಕಂಡುಬರಲಿಲ್ಲ. ಬಳಿಕ ಎಚ್ಎಸ್ಆರ್ ಲೇಔಟ್ನಲ್ಲಿರುವ ನಾರಾಯಣ ಆಸ್ಪತ್ರೆಗೆ ಕರೆದೊಯ್ದು ತುರ್ತು ನಿಗಾ ಘಟಕಕ್ಕೆ ದಾಖಲಿಸಲಾಯಿತು ಎಂದು ದೂರಿನಲ್ಲಿ ವಿವರಿಸಿದ್ದಾರೆ.
ಡಿಸೆಂಬರ್ನಲ್ಲಿ ಐಟಿ ದಾಳಿ
ಆದಾಯ ತೆರಿಗೆ ಇಲಾಖೆಯು 2025 ರ ಡಿಸೆಂಬರ್ನಲ್ಲಿ ರಾಯ್ ಅವರ ಕಚೇರಿಯ ಮೇಲೆ ದಾಳಿ ನಡೆಸಿತ್ತು ಎಂದು ಗೃಹ ಸಚಿವ ಜಿ ಪರಮೇಶ್ವರ ಅವರು ಹೇಳಿದ್ದಾರೆ.
ಸಿಜೆ ರಾಯ್ ಅವರ ಸಾವು ಕುರಿತು ವರದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಆದಾಯ ತೆರಿಗೆ ಇಲಾಖೆಯು 2025 ರ ಡಿಸೆಂಬರ್ನಲ್ಲಿ ರಾಯ್ ಅವರ ಕಚೇರಿಯ ಮೇಲೆ ದಾಳಿ ನಡೆಸಿತ್ತು. ಫೆಬ್ರವರಿ 4 ರೊಳಗೆ ಆರೋಪಪಟ್ಟಿ ಸಲ್ಲಿಸಲು ಅವರಿಗೆ ಗಡುವು ಇದ್ದ ಕಾರಣ, ರಾಯ್ ಮೂರು ದಿನಗಳ ಹಿಂದೆ ದುಬೈನಿಂದ ಹಿಂತಿರುಗಿದ್ದರು. ಅವರ ಹೇಳಿಕೆಯನ್ನು ದಾಖಲಿಸಲು ಐಟಿ ಅಧಿಕಾರಿಗಳು ಅವರ ಕಚೇರಿಗೆ ಭೇಟಿ ನೀಡಿದ್ದರು.
ಕೇವಲ ಐದು ನಿಮಿಷ ಎಂದು ಹೇಳಿ ತನ್ನ ಕ್ಯಾಬಿನ್ ಒಳಗೆ ಹೋದ ರಾಯ್, 20 ನಿಮಿಷಗಳ ನಂತರವೂ ಹಿಂತಿರುಗಲಿಲ್ಲ. ಬಾಗಿಲು ಒಡೆದು ನೋಡಿದಾಗ, ಗುಂಡು ಹಾರಿಸಿಕೊಂಡಿರುವುದು ಕಂಡುಬಂದಿದೆ ಎಂದು ತಿಳಿಸಿದ್ದಾರೆ.