ಬೆಂಗಳೂರು: 2026-27ರ ಕೇಂದ್ರ ಬಜೆಟ್ನಲ್ಲಿ ದೀರ್ಘಕಾಲದಿಂದ ಬಾಕಿ ಉಳಿದಿರುವ ಬೆಂಗಳೂರು ಉಪನಗರ ರೈಲು ಯೋಜನೆ (BSRP)ಗೆ 500 ಕೋಟಿ ರೂ.ಗಳನ್ನು ಹಂಚಿಕೆ ಮಾಡಲಾಗಿದೆ.
ಕೇಂದ್ರ ಸರ್ಕಾರದ ಬಜೆಟ್ 2026ರಲ್ಲಿ ಬೆಂಗಳೂರು ಭಾಗದ ರೈಲು ಅಭಿವೃದ್ಧಿ ಯೋಜನೆಗೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಅನುದಾನ ಘೋಷಿಸಿದ್ದಾರೆ. ಈ ಹಂಚಿಕೆ ಕಳೆದ ಸಾಲಿಗಿಂತ ಕೊಂಚ ಹೆಚ್ಚು ಎನ್ನಬಹುದು. ಆದರೆ ನಿರೀಕ್ಷೆಯಷ್ಟು ಅಲ್ಲ ಎನ್ನಲಾಗಿದೆ. ಬೆಂಗಳೂರು ಉಪನಗರ ರೈಲು ಸಾರಿಗೆ ಯೋಜನೆಗೆ ಬಜೆಟ್ನಲ್ಲಿ 500 ಕೋಟಿ ರೂಪಾಯಿ ಘೋಷಣೆ ಮಾಡಲಾಗಿದೆ.
ಬೆಂಗಳೂರು ಉಪನಗರ ರೈಲು ಯೋಜನೆಗೆ (BSRP) ಕೇಂದ್ರ ಬಜೆಟ್ 500 ಕೋಟಿ ರೂ.ಗಳನ್ನು ನಿಗದಿಪಡಿಸಿದೆ. ಕಳೆದ ವರ್ಷ 2025-26ರಲ್ಲಿ 350 ಕೋಟಿ ರೂಪಾಯಿ ಹಂಚಿಕೆ ಮಾಡಲಾಗಿದೆ. ಅದಕ್ಕೆ ಹೋಲಿಕೆ ಮಾಡಿದರೆ ಈ ಬಾರಿ 150 ಕೋಟಿ ರೂಪಾಯಿ ಹೆಚ್ಚುವರಿ ಅನುದಾನ ಘೋಷಿಸಲಾಗಿದೆ. ಈ ಬೆಂಗಳೂರು ಉಪನಗರ ರೈಲು ಯೋಜನೆಯು 2020 ರಲ್ಲಿ ಅನುಮೋದನೆ ನೀಡಲಾಯಿತು.
ಅಲ್ಲಿಂದ ಈವರೆಗೆ ನಿಧಾನಗತಿಯಲ್ಲಿ ಕಾಮಗಾರಿ ಸಾಗಿದ್ದು, 2027ರಲ್ಲಿ ಯೋಜನೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ. ವಿಳಂಬವಾದ ಯೋಜನೆಯನ್ನು ವೇಗಗೊಳಿಸಲು ಅಗತ್ಯವಿರುವ ಮೊತ್ತಕ್ಕಿಂತ ಈ ಹಂಚಿಕೆ ಕಡಿಮೆಯಾಗಿದೆ ಎಂದು ಸಿಟಿಜನ್ಸ್ ಫಾರ್ ಸಿಟಿಜನ್ಸ್ (C4C) ಸಂಸ್ಥಾಪಕ ರಾಜ್ಕುಮಾರ್ ದುಗರ್ ಹೇಳಿದರು .
ಅನುಷ್ಠಾನದಲ್ಲಿ ದೀರ್ಘಕಾಲದ ವಿಳಂಬವನ್ನು ಗಮನಿಸಿದರೆ, ಪ್ರಸ್ತುತ ಬಜೆಟ್ನಲ್ಲಿ ಕನಿಷ್ಠ 1,000 ಕೋಟಿ ರೂ.ಗಳನ್ನು ಮೀಸಲಿಡುವ ಮೂಲಕ ಕೇಂದ್ರವು ಬಲವಾದ ಬದ್ಧತೆಯನ್ನು ಪ್ರದರ್ಶಿಸಬೇಕಿತ್ತು ಎಂದಿದ್ದಾರೆ. "ಯೋಜನೆಯು ಈಗಾಗಲೇ ಸಮಂಜಸವಾದ ಸಮಯಕ್ಕಿಂತ ಹೆಚ್ಚು ವಿಳಂಬವಾಗಿರುವುದರಿಂದ, ಈ ವರ್ಷ ಹೆಚ್ಚಿನ ಬಜೆಟ್ ಬೆಂಬಲವು ನಿರ್ಣಾಯಕವಾಗಿತ್ತು," ಎಂದು ದುಗರ್ ಹೇಳಿದರು.
ರಾಜ್ಯ ಸರ್ಕಾರವು ತನ್ನ ಮುಂಬರುವ ಬಜೆಟ್ನಲ್ಲಿ ಬಿಎಸ್ಆರ್ಪಿಗೆ ಹೆಚ್ಚಿನ ಮೊತ್ತವನ್ನು ನಿಗದಿಪಡಿಸುವ ಮೂಲಕ ಮತ್ತು ತ್ವರಿತ ಅನುಷ್ಠಾನಕ್ಕೆ ಕ್ರಮಗಳನ್ನು ತೆಗೆದುಕೊಳ್ಳುವ ಮೂಲಕ ಹಣಕಾಸಿನ ಅಂತರವನ್ನು ತುಂಬಲು ಮುಂದಾಗಬೇಕು ಎಂದಿದ್ದಾರೆ.