ಬೆಳಗಾವಿ: ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಹೂಲಿಕಟ್ಟಿಯಲ್ಲಿ ಸೋಮವಾರ 10 ವರ್ಷಗಳ ಹಿಂದಿನ ದ್ವೇಷಕ್ಕೆ ನೆತ್ತರು ಹರಿದಿದ್ದು, ಇಡೀ ಗ್ರಾಮವೇ ಬೆಚ್ಚಿ ಬಿದ್ದಿದೆ.
10 ವರ್ಷಗಳ ಹಿಂದೆ ತನ್ನ ತಾಯಿ ಜೊತೆ ಓಡಿ ಹೋಗಿದ್ದ 49 ವರ್ಷದ ವ್ಯಕ್ತಿಯನ್ನು ಆ ಮಹಿಳೆಯ ಮಗ ಮಚ್ಚಿನಿಂದ ಕೊಚ್ಚಿ 16 ಬಾರಿ ಇರಿದು ಕೊಲೆ ಮಾಡಿದ್ದಾನೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.
ಕೊಲೆಯಾದ ವ್ಯಕ್ತಿಯನ್ನು ಸದೋನಿ ಗ್ರಾಮದ ನಿವಾಸಿ ಬಸಪ್ಪ ಹೊಸಮನಿ ಎಂದು ಗುರುತಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಕೊಲೆಗೆ ಸಂಬಂಧಿಸಿದಂತೆ ಆರೋಪಿ ಈರಯ್ಯ ಸಂಗಯ್ಯ ಮಠಪತಿ(32)ಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರ ಪ್ರಕಾರ, ಸೋಮವಾರ ಸಂಜೆ ಸವದತ್ತಿ ತಾಲ್ಲೂಕಿನ ಹೂಲಿಕಟ್ಟಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಬಸಪ್ಪ ಹೊಸಮನಿ ಸುಮಾರು ಹತ್ತು ವರ್ಷಗಳ ಹಿಂದೆ ಆರೋಪಿಯ ತಾಯಿಯೊಂದಿಗೆ ಓಡಿಹೋಗಿ ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ವಾಸಿಸುತ್ತಿದ್ದ. ಬಸಪ್ಪ ಇತ್ತೀಚೆಗೆ ಆರೋಪಿಯ ತಾಯಿಯನ್ನು ಕೊಲ್ಲಾಪುರದಲ್ಲಿ ಬಿಟ್ಟು ಕೆಲಸಕ್ಕಾಗಿ ಗ್ರಾಮಕ್ಕೆ ಮರಳಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಇದೇ ವಿಚಾರವಾಗಿ ದ್ವೇಷ ಸಾಧಿಸುತ್ತಿದ್ದ ಆರೋಪಿ ಈರಯ್ಯ, ಆತನನ್ನು ಕೊಲೆ ಮಾಡಿದ್ದಾನೆ. ಬಸಪ್ಪನನ್ನು ಬರ್ಬರವಾಗಿ ಹತ್ಯೆ ಮಾಡಿದ ಬಳಿಕ ಸಿನಿಮಾ ಸ್ಟೈಲ್ನಲ್ಲಿ ಶವದ ಮೇಲೆ ಕಾಲಿಟ್ಟು ಆರೋಪಿ ಈರಯ್ಯನೇ ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾನೆ. ಅಲ್ಲದೆ ಆರೋಪಿ, ಪೊಲೀಸರು ಬರುವವರೆಗೂ ಶವದ ಮೇಲೆ ಕಾಲಿಟ್ಟು ನಿಂತಿದ್ದ ಎನ್ನಲಾಗಿದೆ.
ಪ್ರಕರಣ ಸಂಬಂಧ ಸವದತ್ತಿ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು, ಆರೋಪಿ ಈರಯ್ಯನ ಬಂಧಿಸಿರುವ ಪೊಲೀಸರು, ತನಿಖೆ ಮುಂದುವರಿಸಿದ್ದಾರೆ.