ಬೆಂಗಳೂರು: ಪೋಷಕರು ಬೈದರು ಎಂದು ಮನೆಬಿಟ್ಟು ಹೋದ ಮಕ್ಕಳ ಬಗ್ಗೆ ಕೇಳಿದ್ದೇವೆ. ಸಿಲಿಕಾನ್ ಸಿಟಿ ಬೆಂಗಳೂರಿನ ಅಂತಹದ್ದೇ ಘಟನೆ ನಡೆದಿದೆ. ಮಾರತಹಳ್ಳಿಯ ಅಶ್ವತ್ಥನಗರದಲ್ಲಿ 13 ವರ್ಷದ ಬಾಲಕಿ ಮತ್ತು ಆಕೆಯ 9 ವರ್ಷದ ತಮ್ಮನಿಗೆ ಅಮ್ಮ 'ಟ್ಯೂಷನ್ಗೆ ಹೋಗಲ್ವಾ? ಓದಲ್ವ ಎಂದು ಬೈದಿದ್ದಕ್ಕೆ ಯಾರಿಗೂ ಹೇಳದೆ ಕೇಳದೆ ಮೊನ್ನೆ ಫೆಬ್ರವರಿ 1ರ ಅಪರಾಹ್ನ 3 ಗಂಟೆ ಸುಮಾರಿಗೆ ಮನೆಯಿಂದ ಹೊರಹೋಗಿದ್ದಾರೆ. ಮಕ್ಕಳು ಕಾಣಿಸದಿರುವಾದ ಗಾಬರಿಯಿಂದ ಪೋಷಕರು ಹೆಚ್ಎಎಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಫ್ರೀ ಬಸ್ ಗ್ಯಾರಂಟಿ: 'ಆಧಾರ್' ಕಾರ್ಡ್ ಹಿಡಿದು ಶಿವಮೊಗ್ಗ-ಚಿತ್ರದುರ್ಗ ಟ್ರಿಪ್
ಸರ್ಕಾರದ 'ಶಕ್ತಿ' ಯೋಜನೆಯಡಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಎಂದು 13 ವರ್ಷದ ಬಾಲಕಿಗೆ ತಿಳಿದಿದೆ. ತನ್ನ ಬಳಿಯಿದ್ದ ಆಧಾರ್ ಕಾರ್ಡ್ ಹಿಡಿದುಕೊಂಡು, ತಮ್ಮನನ್ನು ಜೊತೆಯಲ್ಲಿ ಕರೆದುಕೊಂಡು ಕೆಎಸ್ಆರ್ಟಿಸಿ ಬಸ್ ಹತ್ತಿದ್ದಾಳೆ. ಚಿತ್ರದುರ್ಗ, ಶಿವಮೊಗ್ಗ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಈ ಪುಟ್ಟ ಮಕ್ಕಳು ಯಾವುದೇ ಹಣವಿಲ್ಲದೆ, ಕೇವಲ ಆಧಾರ್ ಕಾರ್ಡ್ ಹಿಡಿದು ಬಸ್ ನಲ್ಲಿ ಸುತ್ತಿದ್ದಾರೆ.
ಸಹಾಯಕ್ಕೆ ಬಂದ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ಫೋಟೋ
ಪೋಷಕರು ದೂರು ನೀಡಿದ ಕೂಡಲೇ ಹೆಚ್ಎಎಲ್ ಪೊಲೀಸರು ಅಲರ್ಟ್ ಆಗಿದ್ದಾರೆ. ರಾಜ್ಯದ ಎಲ್ಲಾ ಪೊಲೀಸ್ ಠಾಣೆಗಳಿಗೆ ಮಾಹಿತಿ ರವಾನಿಸುವುದರ ಜೊತೆಗೆ, ಸೋಷಿಯಲ್ ಮೀಡಿಯಾ ಮೂಲಕ ಮಕ್ಕಳ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದರು. ಇಂಟರ್ನೆಟ್ನಲ್ಲಿ ಮಕ್ಕಳ ಫೋಟೋ ನೋಡಿದ್ದ ಚಿತ್ರದುರ್ಗದ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು, ಮಕ್ಕಳನ್ನು ಸುರಕ್ಷಿತವಾಗಿ ಬೆಂಗಳೂರಿಗೆ ಕರೆತಂದು ಪೋಷಕರ ಮಡಿಲಿಗೆ ಒಪ್ಪಿಸಿದ್ದಾರೆ.
ಬಾಲಕನಿಗೆ ಟಿಕೆಟ್ ಪಡೆಯದೆ ಕಣ್ತಪ್ಪಿಸಿಕೊಂಡಿದ್ದ ಮಕ್ಕಳು
ಬಾಲಕಿಗೆ ಉಚಿತ ಪ್ರಯಾಣವಿದ್ದರೂ, 9 ವರ್ಷದ ಬಾಲಕನಿಗೆ ಟಿಕೆಟ್ ಪಡೆಯದೆ ಪ್ರಯಾಣಿಸಿರುವುದು ಬಸ್ ನಿರ್ವಾಹಕರ ಕಣ್ಣಿಗೂ ಬಿದ್ದಿಲ್ಲ. ಕಂಡಕ್ಟರ್ ಗೆ ಗೊತ್ತಾಗದೆ ಟಿಕೆಟ್ ಇಲ್ಲದೆ ಪ್ರಯಾಣ ಮಾಡುವಲ್ಲಿ ಅಕ್ಕ-ತಮ್ಮ ಯಶಸ್ವಿಯಾಗಿದ್ದಾರೆ. ಸರ್ಕಾರದ ಉಚಿತ ಬಸ್ ಪ್ರಯಾಣ ಬಗ್ಗೆ ಕೂಡ ಚರ್ಚೆ ಹುಟ್ಟುಹಾಕಿದೆ.