ಬೆಳಗಾವಿ: ಬೆಳಗಾವಿಯ ಶ್ರೀನಗರದಲ್ಲಿರುವ ಜಿಲ್ಲಾ ಬಾಲಭವನದಲ್ಲಿ ನೂತನವಾಗಿ ನಿರ್ಮಿಸಲಾದ ಬಾಕ್ಸ್ ಕ್ರಿಕೆಟ್ ಮೈದಾನ ಉದ್ಘಾಟನೆಯನ್ನು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಮತ್ತು ಮಹಿಳಾ ಹಾಗೂ ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ ನೆರವೇರಿಸಿ ಮಿನಿ ಕ್ರಿಕೆಟ್ ಆಡಿ ನೆರೆದಿದ್ದವರಿಗೆ ಮನರಂಜನೆ ನೀಡಿದರು.
ಉದ್ಘಾಟನಾ ಸಮಾರಂಭ ವೇಳೆ ಸತೀಶ್ ಜಾರಕಿಹೊಳಿ ಬ್ಯಾಟ್ ಹಿಡಿದು ಮೈದಾನಕ್ಕಿಳಿದರೆ, ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಬೌಲ್ ಹಿಡಿದು ಚೆಂಡು ಎಸೆದು ಪ್ರೇಕ್ಷಕರನ್ನು ರಂಜಿಸಿದರು.
ಹೆಬ್ಬಾಳಕರ್ ಬೌಲ್ಗೆ ಕ್ಲೀನ್ ಬೋಲ್ಡ್ ಆದ ಜಾರಕಿಹೊಳಿ: ಸಚಿವೆ ಹೆಬ್ಬಾಳಕರ್ ಎಸೆದ ಚೆಂಡಿಗೆ ಸಚಿವ ಸತೀಶ್ ಜಾರಕಿಹೊಳಿ ಹಾಗೂ ಬೆಳಗಾವಿ ಉತ್ತರ ಕ್ಷೇತ್ರದ ಶಾಸಕ ಆಸಿಫ್ ಸೇಠ್ ಕ್ಲೀನ್ ಬೋಲ್ಡ್ ಆಗಿದ್ದು, ಈ ದೃಶ್ಯ ಎಲ್ಲರಿಗೂ ಮನರಂಜನೆ ನೀಡಿತು. ಬಳಿಕ, ಸಚಿವೆ ಹೆಬ್ಬಾಳಕರ್ ಕೂಡ ಬ್ಯಾಟಿಂಗ್ ಮಾಡಿದರು. ಈ ವೇಳೆ, ಸತೀಶ್ ಜಾರಕಿಹೊಳಿ ಕೀಪಿಂಗ್ ಮಾಡಿದರು. ಈ ಆಟ ತಮಾಷೆಗಾಗಿ ನಡೆದಿದ್ದರೂ, ಸಚಿವರು ಹಾಗೂ ಶಾಸಕರ ಆಟದ ಶೈಲಿಯನ್ನು ನೋಡಿ ಅಲ್ಲಿದ್ದ ಗಣ್ಯರು ಮತ್ತು ಸಾರ್ವಜನಿಕರು ಕೆಲಕಾಲ ಖುಷಿಯನ್ನು ಕಣ್ತುಂಬಿಕೊಂಡರು.
ಮಕ್ಕಳಿಗೆ ಕ್ರೀಡಾ ಪ್ರೋತ್ಸಾಹದ ಉದ್ದೇಶ: ಜಿಲ್ಲಾ ಬಾಲಭವನದಲ್ಲಿ ನಿರ್ಮಿಸಲಾದ ಬಾಕ್ಸ್ ಕ್ರಿಕೆಟ್ ಮೈದಾನವು ಮಕ್ಕಳಿಗೆ ಮತ್ತು ಯುವಜನತೆಗೆ ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಪ್ರೋತ್ಸಾಹ ನೀಡಲಿದೆ. ಸರ್ಕಾರದ ಈ ಪ್ರಯತ್ನದಿಂದ ಮಕ್ಕಳ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಸಹಕಾರವಾಗಲಿದೆ ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟರು.