ಬೆಂಗಳೂರು: ರಾಜ್ಯ ಸರ್ಕಾರವು ಪ್ರತ್ಯೇಕ ಭೂ ಪರಿವರ್ತನೆಯ ಅಗತ್ಯವನ್ನು ತೆಗೆದುಹಾಕಿದ್ದು, ಇನ್ನು ಮುಂದೆ ಬೆಂಗಳೂರಿನ ಮಾಸ್ಟರ್ ಪ್ಲಾನ್ ಪ್ರದೇಶಗಳಲ್ಲಿ ಆಸ್ತಿ ಖರೀದಿ ಮತ್ತು ಅಭಿವೃದ್ಧಿ ಸರಳವಾಗಲಿದೆ.
ಶನಿವಾರ ವಿಕಾಸೌಧದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಬಿಎ ವ್ಯಾಪ್ತಿಯ 'ಭೂಮಿ ಸ್ವಯಂ ಪರಿವರ್ತನೆ' ನೂತನ ತಂತ್ರಾಂಶವನ್ನು ಬಿಡುಗಡೆಗೊಳಿಸಿ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಮಾತನಾಡಿದರು.
ಮಾಸ್ಟರ್ಪ್ಲಾನ್ (ಸಿಡಿಪಿ) ಪ್ರದೇಶದಲ್ಲಿ ಭೂಮಿಯನ್ನು ಸ್ವಯಂ ಪರಿವರ್ತನೆ ಮಾಡುವ ಅಗತ್ಯವಿಲ್ಲ. ನೇರವಾಗಿ ಯೋಜನೆಗೆ ಅನುಮೋದನೆ ಪಡೆಯಬಹುದು. ಯೋಜನಾ ಅನುಮೋದನೆಯ ಭಾಗವಾಗಿ ಪರಿವರ್ತನೆ ಮಾಡಲಾಗುತ್ತದೆ. ಅಲ್ಲದೆ, ಮಾಸ್ಟರ್ಪ್ಲಾನ್ ಪ್ರಕಾರ, ಲಕ್ಷಾಂತರ ಜಿಬಿಎ 'ಬಿ' ಖಾತಾ ಸೈಟ್ ಮಾಲೀಕರಿಗೆ ಪ್ರಯೋಜನವಾಗುವಂತೆ 'ಬಿ' ಖಾತಾದಿಂದ 'ಎ' ಖಾತಾಗೆ ಪರಿವರ್ತನೆ ಸಕ್ರಿಯಗೊಳಿಸಲಾಗಿದೆ ಎಂದು ಹೇಳಿದರು.
ಈವರೆಗೆ, ಮಾಸ್ಟರ್ಪ್ಲಾನ್ ಒಳಗೆ ಬರುವ ಪ್ರದೇಶ ಗಳಲ್ಲಿಯೂ ಭೂಮಿಯನ್ನು ಪರಿವರ್ತಿಸಬೇಕಿತ್ತು. 'ಡೀಮ್ಡ್ ಕನ್ವರ್ಷನ್' ಹೊರತಾಗಿಯೂ ಈ ಪ್ರಕ್ರಿಯೆಗೆ ಕನಿಷ್ಠ 4 ರಿಂದ 6 ತಿಂಗಳು ತೆಗೆದುಕೊಳ್ಳುತ್ತಿತ್ತು. ಮಧ್ಯವರ್ತಿಗಳು ಡೆವಲಪರ್ಗಳನ್ನು ಶೋಷಿಸಲು ಅವಕಾಶವಿತ್ತು. ವಿಳಂಬ, ಕಿರುಕುಳ, ಭ್ರಷ್ಟಾ ಚಾರ ಮತ್ತು ವೆಚ್ಚ ಹೆಚ್ಚಳವು ಅಂತಿಮವಾಗಿ ಸೈಟ್ ಖರೀದಿದಾರರಿಗೆ ಹೊರೆಯಾಗುತ್ತಿತ್ತು. ಇದು ಸರ್ಕಾರ ಮತ್ತು ಕಂದಾಯ ಇಲಾಖೆಯ ಅಪಖ್ಯಾತಿಗೆ ಕಾರಣವಾಗಿತ್ತು ಎಂದು ವಿಷಾದಿಸಿದರು.
ಪ್ರಸ್ತುತ ಜಿಬಿಎ ವ್ಯಾಪ್ತಿ ಯಲ್ಲಿ ಸ್ವಯಂ ಪರಿವರ್ತನೆಯನ್ನು ಜಾರಿಗೆ ತರುವುದರೊಂದಿಗೆ ಕಂದಾಯ ಇಲಾಖೆಯು ಮಹತ್ವದ ಹೆಜ್ಜೆ ಇಟ್ಟಿದೆ.
ಸಾಮಾನ್ಯ ಜನರಿಗೆ ಕೈಗೆಟಕುವ ದರದಲ್ಲಿ ನಿವೇಶನಗಳನ್ನು ಖರೀದಿಸಲು ಇದು ಸಹಾಯ ಮಾಡುತ್ತದೆ. ಇದರಿಂದಾಗಿ ಭೂ ಅಭಿವೃದ್ಧಿಯ ವೆಚ್ಚ ಸಮಯ ಕಡಿಮೆಯಾಗುತ್ತದೆ. ಈ ಸುಧಾರಣೆಗಳು ವಸತಿ ಅಭಿ ವೃದ್ಧಿಗೆ ಮಾತ್ರವಲ್ಲದೆ ಮಾಸ್ಟರ್ಪ್ಲಾನ್ನಲ್ಲಿ ಅನುಮತಿಸ ಲಾದ ಕೈಗಾರಿಕಾ ಮತ್ತು ಇತರ ಬಳಕೆಗಳಿಗೂ ಲಭ್ಯವಿರಲಿವೆ ಎಂದು ವಿವರಿಸಿದರು.
ಸ್ವಯಂ ಪರಿವರ್ತನೆಯಿಂದ ಹಾಲಿ ಬಿ-ಖಾತಾ ನಿವೇಶನಗಳೂ ಅನುಕೂಲ ಪಡೆಯಲಿವೆ. ಬಿ ಖಾತಾ ಆಸ್ತಿಗಳನ್ನು ಎ ಖಾತಾ ಆಗಿ ಪರಿವರ್ತಿಸಲು ಜಿಬಿಎಯಿಂದ ಈಗ ಕಾನೂನು ಚೌಕಟ್ಟನ್ನು ಸರಳೀಕರಿಸಲಾಗಿದೆ. ಈ ಹಿಂದೆ ಅನಧಿಕೃತ ಸೈಟ್ಗಳನ್ನು ಖರೀದಿಸಿದ ಲಕ್ಷಾಂತರ ಆಸ್ತಿಮಾಲೀಕರಿಗೆ ಇದು ಸಹಾಯಕವಾಗಲಿದೆ. ಎ ಖಾತಾ ಪಡೆಯುವುದು ಇಂತಹ ಸೈಟ್ಗಳಿಗೆ ಕಾನೂನು ಬಲ ನೀಡುತ್ತದೆ. ಇ ಖಾತಾ ಜೊತೆಗೆ ಎಲ್ಲ ದಾಖಲೆಗಳನ್ನೂ ಇಂಟಿಗ್ರೇಷನ್ ಮಾಡುವ ಮೂಲಕ ಜನರ ಆಸ್ತಿ ಮಾಲೀಕತ್ವಕ್ಕೆ ಮತ್ತಷ್ಟು ಬಲ ತುಂಬಲಾಗಿದೆ. ಸಾಲ ಪಡೆಯಬಹುದು, ಆಸ್ತಿಯ ಮೌಲ್ಯ ಹೆಚ್ಚಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯಾ ಮತ್ತು ಕಂದಾಯ ಆಯುಕ್ತೆ ಮೀನಾ ನಾಗರಾಜ್ ಸೇರಿದಂತೆ ಹಿರಿಯ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.