ಲಿಂಗಸುಗೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಭಾನುವಾರ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ನ ಪೈಲಟ್ ಮಾಡಿದ ಎಡವಟ್ಟು ಗೊಂದಲಕ್ಕೆ ಕಾರಣವಾಯಿತು. ಸಿದ್ದರಾಮಯ್ಯ ಅವರಿದ್ದ ಹೆಲಿಕಾಪ್ಟರ್ ನಿಗದಿತ ಹೆಲಿಪ್ಯಾಡ್ ಗೆ ಬದಲಾಗಿ ಮತ್ತೊಂದು ಹೆಲಿಪ್ಯಾಡ್ ನಲ್ಲಿ ಲ್ಯಾಂಡಿಂಗ್ ಆಯಿತು.
ವಿಧಾನಪರಿಷತ್ ಸದಸ್ಯ ಶರಣಗೌಡ ಪಾಟೀಲ ಬಯ್ಯಾಪುರ ಅವರ ಪುತ್ರನ ಮದುವೆಗಾಗಿ ಮುಖ್ಯಮಂತ್ರಿ ಬರುತ್ತಿದ್ದರು. ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಸಚಿವರಿಗೆ ಪ್ರತ್ಯೇಕ ಹೆಲಿಪ್ಯಾಡ್ ನಿಗದಿಪಡಿಸಲಾಗಿತ್ತು. ರಾಯಚೂರು ರಸ್ತೆಯಲ್ಲಿರುವ ಶ್ರೀನಿವಾಸ್ ಲೇಔಟ್ನಲ್ಲಿ ಸಿಎಂ ಮತ್ತು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರ ಹೆಲಿಕಾಪ್ಟರ್ಗಳು ಇಳಿಯಲು ಹೆಲಿಪ್ಯಾಡ್ ಸಿದ್ಧಪಡಿಸಲಾಗಿತ್ತು.
ಆದರೆ ಗೊಂದಲಕ್ಕೆ ಒಳಗಾಗಿ ಮುಖ್ಯಮಂತ್ರಿ ಅವರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ನ್ನು ಸತೀಶ್ ಜಾರಕಿಹೊಳಿ ಅವರಿದ್ದ ಹೆಲಿಕಾಪ್ಟರ್ ಗೆ ನಿಗದಿಪಡಿಸಿದ್ದ ಹೆಲಿಪ್ಯಾಡ್ ನಲ್ಲಿ ಇಳಿಸಿದ್ದಾರೆ. ತಮ್ಮನ್ನು ಸ್ವಾಗತಿಸಲು ಜನಪ್ರತಿನಿಧಿಗಳು, ಅಧಿಕಾರಿಗಳು ಬಾರದಿದ್ದಕ್ಕೆ ಮುಖ್ಯಮಂತ್ರಿ ಬೇಸರ ವ್ಯಕ್ತಪಡಿಸಿದ್ದಾರೆ.
ಸಿದ್ದರಾಮಯ್ಯ ಅವರಿಗೆ ಸಿದ್ದಪಡಿಸಲಾದ ಹೆಲಿಪ್ಯಾಡ್ ನಲ್ಲಿ ಸತೀಶ್ ಜಾರಕಿಹೊಳಿ ಅವರ ಹೆಲಿಕಾಪ್ಟರ್ ಲ್ಯಾಂಡಿಂಗ್ ಆಗಿದೆ. ಅಲ್ಲಿ ಸಚಿವರನ್ನು ಕರೆದೊಯ್ಯಲು ಬೆಂಗಾವಲು ಕಾರು ಮಾತ್ರ ನಿಂತಿತ್ತು. ಬಳಿಕ ಪೈಲಟ್ ಎಡವಟ್ಟು ಗೊತ್ತಾಗುತ್ತಿದ್ದಂತೆಯೇ ಜಿಲ್ಲಾಧಿಕಾರಿ ಮತ್ತು ಎಸ್ಪಿ ಸಿದ್ದರಾಮಯ್ಯ ಬಂದಿಳಿದ ಹೆಲಿಪ್ಯಾಡ್ಗೆ ಧಾವಿಸಿದ್ದಾರೆ.
ಆದರೆ ಅಷ್ಟರಲ್ಲೇ ಸಿಎಂ ಅಲ್ಲಿಂದ ತೆರಳಿದ್ದಾರೆ. ಮದುವೆ ಸಮಾರಂಭದಲ್ಲಿ ಪಾಲ್ಗೊಂಡು ಸಿಎಂ ಹೆಲಿಪ್ಯಾಡ್ಗೆ ಹಿಂತಿರುಗಿದಾಗ ಪೊಲೀಸ್ ಸಿಬ್ಬಂದಿ ಸಿಎಂಗೆ ಗೌರವ ವಂದನೆ ಸಲ್ಲಿಸಿದರು.