ಬೆಂಗಳೂರು: ಕೊನೆಯ ಬಾರಿ ಮಗನೊಂದಿಗೆ ಶುಕ್ರವಾರ ಮಾತನಾಡಿದ್ದೆ. ಮದುವೆ ಮಾಡಿಕೋ ಎಂದು ಹೇಳಿದ್ದೆ, ರಜೆ ತೆಗೆದುಕೊಂಡು ಬರುತ್ತೇನೆಂದು ಹೇಳಿದ್ದ. ಇದೀಗ ನಮ್ಮ ಮಗನಿಲ್ಲದೆ ದಿಕ್ಕೇ ತೋಚದಂತಾಗಿದೆ... ಕೆನಡಾದಲ್ಲಿ ಗುಂಡಿನ ದಾಳಿಗೆ ಬಲಿಯಾದ ಚಂದನ್ ಅವರ ತಂದೆ ನಂದನ್ಕುಮಾರ್ ಅವರ ಮಾತುಗಳಿವು..
ಶಾಲಾ ಶಿಕ್ಷಕರಾಗಿ ನಿವೃತ್ತರಾದ ನಂದನ್ ಕುಮಾರ್ ದಂಪತಿಯ ಒಬ್ಬನೇ ಮಗ ಚಂದನ್. ಆತ ಇದೀಗ ಕೆನಡಾ ದೇಶದಲ್ಲಿ ಹತ್ಯೆಗೀಡಾಗಿದ್ದಾನ. ಈ ವಿಚಾರ ತಿಳಿದ ತಂದೆ–ತಾಯಿಗೆ ಸಿಡಿಲು ಬಡಿದಂತಾಗಿದೆ.
ಭಾನುವಾರ ರಾತ್ರಿ ಸುಮಾರು 8 ಗಂಟೆಗೆ ಅಂತರರಾಷ್ಟ್ರೀಯ ಕರೆ ಬಂದಿತ್ತು. ಇಂಗ್ಲಿಷ್ನಲ್ಲಿ ಮಾತನಾಡಿದ್ದರಿಂದ ನಮಗೆ ಅರ್ಥವಾಗಲಿಲ್ಲ. ಬಳಿಕ ನನ್ನ ಪತಿ ಚಂದನ್ಗೆ ಕರೆ ಮಾಡಿದರು. ಆದರೆ, ಅವನು ಫೋನ್ ತೆಗೆಯಲಿಲ್ಲ. ಕೆಲಸದಲ್ಲಿ ಬ್ಯುಸಿಯಾಗಿರಬಹುದು ಎಂದುಕೊಂಡೆವು.
ಆ ಬಳಿಕ ಮತ್ತೊಮ್ಮೆ ಕರೆ ಬಂದಾಗ ತೆಲುಗು ಮಾತನಾಡುವ ವ್ಯಕ್ತಿ ಚಂದನ್ ತಂದೆ ಮಾತನಾಡುತ್ತಿರುವುದೇ ಎಂದು ಕೇಳಿದ. ಹೌದು ಎಂದಾಗ ಚಂದನ್ ಇನ್ನಿಲ್ಲ ಎಂದು ತಿಳಿಸಿದ. ಆ ಕ್ಷಣ ಸಿಡಿಲು ಬಡಿದಂತಾಯಿತು ಎಂದು ಚಂದನ್ ತಾಯಿ ಶೈಲಜಾ ಅವರು ಕಣ್ಣೀರು ಹಾಕಿದ್ದಾರೆ.
ಕೆಲ ವರ್ಷಗಳಿಂದ ಕೆನಡಾದಲ್ಲಿ ನೆಲೆಸಿದ್ದ ಚಂದನ್, ಕನ್ನಡಿಗರ ಸಮುದಾಯವನ್ನು ಸಂಘಟಿಸಿ ಸಾಮಾಜಿಕವಾಗಿ ಸಕ್ರಿಯನಾಗಿದ್ದು. ಅವನು ತುಂಬಾ ಪರಿಶ್ರಮಿ. ವೃತ್ತಿಯಲ್ಲಿ ತುಂಬಾ ಮುಂದೆ ಹೋಗಿದ್ದ. ಅವನ ಬೆಳವಣಿಗೆ ಸಹಿಸಲಾಗದೆ ಅಸೂಯೆಯಿಂದ ದಾಳಿ ಮಾಡಿರಬಹುದು ಎಂದು ಹೇಳಿದ್ದಾರೆ.
ಚಂದನ್ ತಂದೆ ನಂದಕುಮಾರ್ (ನಿವೃತ್ತ ಶಿಕ್ಷಕ) ಅವರು ಮೌನಕ್ಕೆ ಜಾರಿದ್ದು, ಶುಕ್ರವಾರ ಅವನ ಜೊತೆ ಮಾತನಾಡಿದ್ದೆ. ಮದುವೆಗೆ ಸಂಬಂಧಿಸಿದ ಮಾತುಗಳನ್ನಾಡಿದ್ದೆ. ರಜೆ ತೆಗೆದುಕೊಂಡು ಮನೆಗೆ ಬರುತ್ತೇನೆ ಎಂದಿದ್ದ. ಈಗ ಏನು ಹೇಳಬೇಕು ಗೊತ್ತಿಲ್ಲ. ಸರ್ಕಾರ ನಮ್ಮ ಮಗನ ದೇಹವನ್ನು ಭಾರತಕ್ಕೆ ತರುವಲ್ಲಿ ಸಹಾಯ ಮಾಡಬೇಕು ಎಂದು ಮನವಿ ಮಾಡಿದ್ದಾರೆ.
ಕುಟುಂಬದಲ್ಲಿ ವಿದೇಶಕ್ಕೆ ಹೋದ ಮೊದಲಿಗ ಚಂದನ್ ಆಗಿದ್ದ. ಆತ ತುಂಬಾ ಪ್ರತಿಭಾವಂತ, ಸಮಾಜಮುಖಿ ವ್ಯಕ್ತಿಯಾಗಿದ್ದ ಎಂದು ಸಂಬಂಧಿಕರು ಹೇಳಿದ್ದಾರೆ.
ಟೊರೊಂಟೊ ಪೊಲೀಸ್ ಇಲಾಖೆಯ ಪ್ರಕಟಣೆಯ ಪ್ರಕಾರ, ಶನಿವಾರ ಮಧ್ಯಾಹ್ನ 3:31ರ ಸುಮಾರಿಗೆ ವುಡ್ಬೈನ್ ಶಾಪಿಂಗ್ ಸೆಂಟರ್ ಪಾರ್ಕಿಂಗ್ ಜಾಗದಲ್ಲಿ ಗುಂಡಿನ ದಾಳಿ ನಡೆದಿತ್ತು. ಸ್ಥಳಕ್ಕೆ ಬಂದ ಪೊಲೀಸರು ತೀವ್ರವಾಗಿ ಗಾಯಗೊಂಡಿದ್ದ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಿಸದೇ ಚಂದನ್ ಅವರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆಂದು ತಿಳಿಸಿದ್ದಾರೆ.