ಬೆಂಗಳೂರು: ಬೇಸಿಗೆಯಲ್ಲಿ ಸಾಮಾನ್ಯವಾಗಿ ಕಾಡುವ ನೀರಿನ ಸಮಸ್ಯೆಯನ್ನು ಸಮರ್ಥವಾಗಿ ಎದುರಿಸಲು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಬಿಡಬ್ಲ್ಯೂಎಸ್ಎಸ್ಬಿ) ಮಹತ್ವದ ನಡೆ ಕೈಗೊಂಡಿದ್ದು, ಅದರಂತೆ ಬೇಸಿಗೆಗೂ ಮುನ್ನ ಬೆಂಗಳೂರಿನ ಆಯ್ದ ಪ್ರದೇಶಗಳಲ್ಲಿ ಮಿನಿ ವಾಟರ್ ಟ್ಯಾಂಕ್ಗಳನ್ನು ಸ್ಥಾಪಿಸಲು ನಿರ್ಧರಿಸಿದೆ.
ಬೆಂಗಳೂರಿನ ನೀರಿನ ಬೇಡಿಕೆಯನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಮತ್ತು ನಗರದ ನಿರ್ದಿಷ್ಟ ಪ್ರದೇಶಗಳಲ್ಲಿ ಸಂಭಾವ್ಯ ಕೊರತೆಯನ್ನು ಪರಿಹರಿಸಲು BWSSB ಸಿದ್ಧತೆಗಳನ್ನು ಹೆಚ್ಚಿಸಿದ್ದು, ಋತುವಿನ ಸವಾಲುಗಳನ್ನು ಎದುರಿಸಲು ಮಂಡಳಿಯು ಸಂಪೂರ್ಣವಾಗಿ ಸಿದ್ಧವಾಗಿದೆ ಎಂದು ಹೇಳಿದೆ.
ಬೇಸಿಗೆಯ ಸಿದ್ಧತೆಯನ್ನು ನಿರ್ಣಯಿಸಲು ಹಿರಿಯ ಅಧಿಕಾರಿಗಳೊಂದಿಗೆ ಉನ್ನತ ಮಟ್ಟದ ಪರಿಶೀಲನಾ ಸಭೆ ಬಳಿಕ ಮಾತನಾಡಿದ BWSSB ಅಧ್ಯಕ್ಷ ವಿ ರಾಮ್ ಪ್ರಸಾತ್ ಮನೋಹರ್, 'ಮಂಡಳಿಯು ಈಗಾಗಲೇ ಹೆಚ್ಚಿನ ಸಾಂದ್ರತೆಯ ಪ್ರದೇಶಗಳು ಮತ್ತು ನೀರಿನ ಕೊರತೆಯನ್ನು ಎದುರಿಸಬಹುದಾದ ಪ್ರದೇಶಗಳನ್ನು ಗುರುತಿಸಿದೆ. ನೀರಿನ ಸಮಸ್ಯೆ ತಗ್ಗಿಸಲು ಮತ್ತು ನಿವಾಸಿಗಳಿಗೆ ಕುಡಿಯುವ ನೀರಿನ ಉಚಿತ ಪ್ರವೇಶವನ್ನು ಖಚಿತಪಡಿಸಿಕೊಳ್ಳಲು, ಗುರುತಿಸಲಾದ ಸ್ಥಳಗಳಲ್ಲಿ ಮಿನಿ ವಾಟರ್ ಟ್ಯಾಂಕ್ಗಳನ್ನು ಸ್ಥಾಪಿಸಲು ಮಂಡಳಿ ನಿರ್ಧರಿಸಿದೆ ಎಂದರು.
ಅಂತೆಯೇ ಈ ಟ್ಯಾಂಕ್ಗಳನ್ನು ತುಂಬುವ ಲಾಜಿಸ್ಟಿಕ್ಸ್ ಬಗ್ಗೆ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಲಾಗಿದೆ. ಬಿಡಬ್ಲ್ಯೂಎಸ್ಎಸ್ಬಿಯ ಸ್ವಂತ ಟ್ಯಾಂಕರ್ಗಳು ಮತ್ತು 'ಸಂಚಾರಿ ಕಾವೇರಿ' ಮೊಬೈಲ್ ಟ್ಯಾಂಕರ್ಗಳಿಗೆ ಆದ್ಯತೆ ನೀಡಬೇಕು ಎಂದು ಒತ್ತಿ ಹೇಳಿದರು. ಖಾಸಗಿ ಟ್ಯಾಂಕರ್ಗಳನ್ನು ಕೊನೆಯ ಉಪಾಯವಾಗಿ ಮಾತ್ರ ಬಾಡಿಗೆಗೆ ಪಡೆಯಬೇಕು ಎಂದು ಮನೋಹರ್ ಹೇಳಿದರು.
ಬೇಸಿಗೆಯ ಕೊರತೆಯನ್ನು ನಿರ್ವಹಿಸುವಲ್ಲಿ ಯಾವುದೇ ನಿರ್ಲಕ್ಷ್ಯದ ವಿರುದ್ಧ ಎಚ್ಚರಿಕೆ ನೀಡಿದ ಮನೋಹರ್, ಎಲ್ಲಾ ಮುಖ್ಯ ಎಂಜಿನಿಯರ್ಗಳು, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ಗಳು ಮತ್ತು ಜಲ ನಿರೀಕ್ಷಕರು ತಮ್ಮ ಕಚೇರಿಗಳಿಂದ ಹೊರಗೆ ಹೋಗಿ ಪರಿಸ್ಥಿತಿಯನ್ನು ನಿರ್ವಹಿಸಲು ಆಯಕಟ್ಟಿನ ಜಾಗಗಳಲ್ಲೇ ಇರಬೇಕೆಂದು ಸೂಚನೆ ನೀಡಿದರು.
"ಅಧಿಕಾರಿಗಳು ಪ್ರತಿದಿನ ತಮ್ಮ ವ್ಯಾಪ್ತಿಗೆ ಭೇಟಿ ನೀಡಬೇಕು, ನೆಲದ ವಾಸ್ತವತೆಯನ್ನು ನಿರ್ಣಯಿಸಬೇಕು ಮತ್ತು ಗುರುತಿಸಲಾದ ಪ್ರದೇಶಗಳಿಗೆ ನೀರು ತಲುಪುವುದನ್ನು ಖಚಿತಪಡಿಸಿಕೊಳ್ಳಬೇಕು" ಎಂದು ಅವರು ಹೇಳಿದರು.