ಬೆಂಗಳೂರು: ತಾವು ಪೊಲೀಸರೆಂದು ಹೇಳಿಕೊಂಡು ಬೆಂಗಳೂರಿನ ಬಿಇಎಲ್ ಲೇಔಟ್ನಲ್ಲಿರುವ ಉದ್ಯಮಿಯೊಬ್ಬರ ಮನೆಗೆ ನುಗ್ಗಿದ ನಾಲ್ವರು ದರೋಡೆಕೋರರ ಗ್ಯಾಂಗ್, ಸೋಮವಾರ 20 ಲಕ್ಷ ರೂ. ನಗದು ಮತ್ತು ಸುಮಾರು 500 ಗ್ರಾಂ ಚಿನ್ನಾಭರಣಗಳನ್ನು ದೋಚಿದ್ದಾರೆ.
ಈ ಸಂಬಂಧ ಬ್ಯಾಡರಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ದರೋಡೆಕೋರರ ಬಂಧನಕ್ಕೆ ಬಲೆ ಬೀಸಿದ್ದಾರೆ.
ನಾಲ್ವರು ಆರೋಪಿಗಳಲ್ಲಿ ಇಬ್ಬರು ತಾವು ಯಲಹಂಕ ಪೊಲೀಸ್ ಠಾಣೆಗೆ ಸೇರಿದ ಪೊಲೀಸರು ಎಂದು ಹೇಳಿಕೊಂಡಿದ್ದು, ಈ ಪ್ರದೇಶದಲ್ಲಿ ಕಳ್ಳತನಗಳು ಹೆಚ್ಚು ನಡೆಯುತ್ತಿವೆ. ಹೀಗಾಗಿ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುವುದಾಗಿ ಹೇಳಿ ಉದ್ಯಮಿ ಮನೆ ಪ್ರವೇಶಿಸಿ, 20 ಲಕ್ಷ ರೂ. ನಗದು, 500 ಗ್ರಾಂ ಚಿನ್ನ ದರೋಡೆ ಮಾಡಿದ್ದಾರೆ.
ರಿಯಲ್ ಎಸ್ಟೇಟ್ ಉದ್ಯಮಿ ಮತ್ತು ಸಿವಿಲ್ ಗುತ್ತಿಗೆದಾರ ಹೊಂಬಾಳೆ ಗೌಡ ಅವರ ಮನೆಯಲ್ಲಿ ಈ ಘಟನೆ ನಡೆದಿದೆ. ಹೊಂಬಾಳೆ ಗೌಡ ಮತ್ತು ಅವರ ಪತ್ನಿ ಮಂಗಳಮ್ಮ ಹಾಗೂ ಅವರ ಎರಡೂವರೆ ವರ್ಷದ ಮೊಮ್ಮಗಳು ಮನೆಯಲ್ಲಿದ್ದರು. ಗೌಡ ಅವರ ಮಗ ಮತ್ತು ಸೊಸೆ ಹೊರಗೆ ಹೋಗಿದ್ದರು. ಆರೋಪಿಗಳು 20 ನಿಮಿಷಗಳಲ್ಲಿ ದರೋಡೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಾಗಿಲು ತೆರೆದ ಗೌಡ ಅವರಿಗೆ ಚಾಕು ತೋರಿಸಿ ಬೆದರಿಸಿ, ದಂಪತಿಗಳ ಕೈಕಾಲುಗಳನ್ನು ಕಟ್ಟಿ ಹಾಕಿ, ಅವರ ಬಾಯಿಯನ್ನು ಬಟ್ಟೆಯಿಂದ ಕಟ್ಟಿ ಹಾಕಲಾಗಿತ್ತು.
ಕಳ್ಳರು ಗೌಡ ಅವರ ಮೊಬೈಲ್ಗಳು ಮತ್ತು ಸಿಸಿಟಿವಿ ಡಿವಿಆರ್ ಅನ್ನು ಸಹ ತೆಗೆದುಕೊಂಡು ಹೋಗಿದ್ದಾರೆ. ಆಶ್ಚರ್ಯಕರವೆಂದರೆ, ಅವರು ಮಂಗಳಮ್ಮನ ಮಂಗಳಸೂತ್ರವನ್ನು ತೆಗೆದುಕೊಂಡಿಲ್ಲ. ಆರೋಪಿಗಳು ಬಾಲಕಿಯನ್ನು ಮುಟ್ಟಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
"ಆರೋಪಿಗಳ ಬಂಧನಕ್ಕೆ ಎರಡು ತಂಡಗಳನ್ನು ರಚಿಸಲಾಗಿದೆ" ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.