ಬೆಂಗಳೂರು: ವಿದೇಶಕ್ಕೆ ಹೋಗಿ ಶಾಸಕರು ರಾಜ್ಯದ ರಾಜಕಾರಣ ಮಾಡಲು ಸಾಧ್ಯವೇ ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್ ಪ್ರಶ್ನಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಸರ್ಕಾರ ಮಾಡುವಾಗ ಅವರ ಶಾಸಕರು ಎಲ್ಲಿಗೆ ಹೋಗಿದ್ದರು. ಅವರ ಪ್ರವಾಸದ ಬಗ್ಗೆ ಹೇಳಬೇಕಾ? ವಿದೇಶಕ್ಕೆ ಹೋಗಿರುವ ನಮ್ಮ ಹತ್ತಿಪ್ಪತ್ತು ಶಾಸಕರಿಂದ ಅಲ್ಲಿ ಹೋಗಿ ರಾಜಕಾರಣ ಮಾಡಲು ಸಾಧ್ಯವೇ? ಅವರೇನೂ ಅಲ್ಲಿಗೆ ಹೋಗಿ ಮತಗಳನ್ನು ಹಾಕುತ್ತಾರಾ? ಎಂದ ಲಾಡ್, ಸರ್ಕಾರದಿಂದ ಅಥವಾ ವೈಯಕ್ತಿಕವಾಗಿ ವಿದೇಶ ಪ್ರವಾಸಕ್ಕೆ ಹೋಗಿದ್ದರ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಅಂಬಾನಿಯವರು 1 ಲಕ್ಷ ಕೋಟಿ ರೂಪಾಯಿ ಲಾಭ ಮಾಡಿಕೊಟಿದ್ದಾರೆ. ಅಂಬಾನಿ ದೇಶಕ್ಕೆ ಏನು ಮಾಡಿದ್ದಾರೆ. ಪುಟಿನ್ ಕರ್ಕೊಂಡು ಬಂದು ಫೋಟೋ ತೆಗೆಸಿಕೊಂಡ್ರಿ ಏನು ಲಾಭ ಬಂತು ಎಂದು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಿಡಿ ಕಾರಿದ್ದಾರೆ. ಇರಾನ್ ನಿಂದ ಆಯಿಲ್ ತಗೋಬಾರದು, ಅಂದ್ರು ರಷ್ಯಾದಿಂದ ತಗೊಬಾರ್ದು ಅಂತಾ ಹೇಳಿದ್ರು. ದೇಶ ಮುಖ್ಯ ದೇಶ ಮುಖ್ಯ ಅಂತಾ ಹೇಳಿ ಏನು ಮಾಡ್ತಿದ್ದೀರಾ. ದಿನ ಬೆಳಗ್ಗೆ ಎದ್ರೆ ಭಾರತ್ ಮಾತಾ ಕಿ ಜೈ ಅಂತಾ ಹೇಳಿಕೊಂಡು ಓಡಾಡಿಬಿಟ್ರೆ ಸಾಕಾ ಎಂದಿದ್ದಾರೆ.
2014 ರಲ್ಲಿ ಬಿಎಸ್ ಎನ್ ಎಲ್ 35 ಸಾವಿರ ಟವರ್ ಗಳು ಇತ್ತು. ಬಿಎಸ್ ಎನ್ ಎಲ್ ಟಾಪ್ ರ್ಯಾಂಕ್ ನಲ್ಲಿತ್ತು. ಜಿಯೊ ಬಂತು, 35 ಸಾವಿರ ಟವರ್ ಗಳನ್ನು ಅಂಬಾನಿಯವರಿಗೆ ಕೊಟ್ಟುಬಿಟ್ಟಿದ್ದಾರೆ. ಜಿಯೋ ಬಂದ ಮೇಲೆ ಬಿಎಸ್ ಎನ್ ಎಲ್ ಎಲ್ಲಿಗೆ ಹೋಯ್ತು, ಇದಕ್ಕೆ ಯಾರು ಉತ್ತರ ಕೊಡ್ತಾರೆ ಎಂದು ಪ್ರಶ್ನಿಸಿದ್ದಾರೆ.