ಬೆಂಗಳೂರು: ಆಡಿಯೋ ಕ್ಲಿಪ್ ಕಟ್ಟುಕಥೆಯಲ್ಲ, ನಿಜವೇ. ಆದರೆ, ಆರ್ಟಿಐ ಕಾರ್ಯಕರ್ತೆ ಸ್ನೇಹಮಯಿ ಕೃಷ್ಣ ಅವರು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ ಇತರ ದಾಖಲೆಗಳು ಮತ್ತು ಆರೋಪಗಳು ನಕಲಿ ಎಂದು ತನಿಖಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಏತನ್ಮಧ್ಯೆ, ಶುಕ್ರವಾರ ಬಂಧಿಸಲ್ಪಟ್ಟ ಕೃಷ್ಣ ಮತ್ತು ಇತರ ಆರೋಪಿಗಳನ್ನು ಶನಿವಾರ ಠಾಣೆ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ.
ತನಿಖೆಯ ಭಾಗವಾಗಿರುವ ಅಧಿಕಾರಿಯೊಬ್ಬರು ಮಾತನಾಡಿ, ಕೃಷ್ಣ ಜೊತೆಗೆ ಮೈಸೂರು ನಿವಾಸಿ ಹಾಗೂ ಆಭರಣ ಅಂಗಡಿ ಮಾಲೀಕ ವಿನೋದ್ (34) ಅವರನ್ನೂ ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.
ಹಣಕಾಸು ವ್ಯವಹಾರ ಸಂಬಂಧ ವಿನೋದ್ ಮತ್ತು ನಟೇಶ್ ನಡುವೆ ಮನಸ್ತಾಪ ಉಂಟಾಗಿದ್ದು, ಹಣಕಾಸಿನ ವಿಚಾರದಲ್ಲಿ ವಿನೋದ್'ಗೆ ನಟೇಶ್ ಬೆದರಿಕೆ ಹಾಕಿದ್ದರು ಎಂದು ತಿಳಿದುಬಂದಿದೆ.
ಹೀಗಾಗಿ ಸೇಡು ತೀರಿಸಿಕೊಳ್ಳುವ ಉದ್ದೇಶದಿಂದ ವಿನೋದ್ ಸ್ನೇಹಮಯಿ ಕೃಷ್ಣ ಅವರನ್ನು ಸಂಪರ್ಕಿಸಿ ಸುಳ್ಳು ಮಾಹಿತಿ ಮತ್ತು ಭಾಗಶಃ ಆಡಿಯೊ ಕ್ಲಿಪ್ ಅನ್ನು ನೀಡಿದ್ದಾನೆ. ಈ ಮಾಹಿತಿಯ ಸತ್ಯಾಸತ್ಯತೆಯನ್ನು ಪರಿಶೀಲಿಸದೆ ಕೃಷ್ಣ ಅವರು ಅದನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಚಾರ ಮಾಡಿದ್ದಾರೆ. ಈ ಆಡಿಯೋ ನಕಲಿಯಲ್ಲ, ಆದರೆ, ಸಂಪೂರ್ಣ ಆಡಿಯೋ ಕ್ಲಿಪ್ ಆಗಿರಲಿಲ್ಲ.
ಮುಖ್ಯ ಕಾರ್ಯದರ್ಶಿಗೆ ಸಂಬಂಧಿಸಿದ ಆರೋಪಗಳು, ಹಣಕಾಸು ವ್ಯವಹಾರಗಳು ಮತ್ತು ಅಕ್ರಮ ಲಂಚ ಆರೋಪಗಳ ದಾಖಲೆಗಳು ನಕಲಿ ಎಂಬುದು ತನಿಖೆಯಿಂದ ಪತ್ತೆಯಾಗಿದೆ ಎಂದು ತಿಳಿಸಿದ್ದಾರೆ.
ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ವಿರುದ್ಧ 1.60 ಕೋಟಿ ರೂ. ಲಂಚದ ಆರೋಪವನ್ನು ಸ್ನೇಹಮಯಿ ಕೃಷ್ಣ ಮಾಡಿದ್ದರು. ಮುಡಾ ಮಾಜಿ ಆಯುಕ್ತ ನಟೇಶ್ ಮುಖ್ಯ ಕಾರ್ಯದರ್ಶಿಗೆ ಲಂಚ ಕೊಟ್ಟು ಮುಂಬಡ್ತಿ ಪಡೆದಿದ್ದಾರೆ ಎಂದು ಆರೋಪಿಸಿದ್ದರು. ಈ ವಿಚಾರ ದೊಡ್ಡ ಮಟ್ಟದಲ್ಲೇ ಸದ್ದು ಮಾಡಿತ್ತು. ಆದರೆ, ಇದಕ್ಕೆ ಸಂಬಂಧಿಸಿ ನಟೇಶ್ ನೀಡಿದ ದೂರಿನ ಅನ್ವಯ ಸ್ನೇಹಮಯಿ ಕೃಷ್ಣ ಬಂಧನವಾಗಿತ್ತು.