ಮೈಸೂರು: ಮೈಸೂರು ಸೆಂಟ್ರಲ್ ಬಸ್ ನಿಲ್ದಾಣದಲ್ಲಿ ಕೊಯಂಬತ್ತೂರಿಗೆ ತೆರಳುವ ಅಂತರ್ರಾಜ್ಯ ಕೆಎಸ್ಆರ್ಟಿಸಿ ಬಸ್ಸಿನಲ್ಲಿ ವ್ಯಕ್ತಿಯೊಬ್ಬ ತನ್ನನ್ನು ಪೊಲೀಸ್ ಅಧಿಕಾರಿ ಎಂದು ಹೇಳಿಕೊಂಡು ಹೈಡ್ರಾಮಾ ನಡೆಸಿದ ಘಟನೆಯೊಂದು ವರದಿಯಾಗಿದೆ.
ಚಾಮರಾಜನಗರಕ್ಕೆ ಪ್ರತ್ಯೇಕ ಬಸ್ ಇದ್ದರೂ, ಈ ವ್ಯಕ್ತಿ ಕೊಯಂಬತ್ತೂರು ಬಸ್ಸಿನಲ್ಲಿ ರಿಸರ್ವ್ ಸೀಟ್'ನಲ್ಲಿ ಕುಳಿತಿದ್ದೂ ಅಲ್ಲದೆ, ಸಿಬ್ಬಂದಿ ಹಾಗೂ ಪ್ರಯಾಣಿಕರೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾನೆಂಬ ಆರೋಪ ಕೇಳಿಬಂದಿದೆ.
ಪ್ರತ್ಯಕ್ಷದರ್ಶಿಗಳ ಪ್ರಕಾರ, ಆತ ಬಸ್ ಸಿಬ್ಬಂದಿಗೆ ಅವಮಾನಕಾರಿ ಪದಗಳನ್ನು ಬಳಸಿದ್ದು, “ನಾನು ಪೊಲೀಸ್ ಅಧಿಕಾರಿ, ನೀವು KSRTC ಸಿಬ್ಬಂದಿ ನನಗೆ ಏನೂ ಮಾಡುವುದಕ್ಕೆ ಆಗಲ್ಲ” ಎಂದು ದರ್ಪ ತೋರಿದ್ದಾನೆಂದು ತಿಳಿದುಬಂದಿದೆ. ಅಲ್ಲದೆ, ಪ್ರಯಾಣಿಕರೊಂದಿಗೆ ಕೂಡ ಜಗಳವಾಡಿ, ಅಶ್ಲೀಲ ಭಾಷೆ ಬಳಸಿದ ಎಂದು ಹೇಳಲಾಗುತ್ತಿದೆ.
ಈ ಘಟನೆಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗುತ್ತಿದ್ದು, ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ.
ಆತ ಸರ್ಕಾರಿ ನೌಕರ ಅಥವಾ ಪೊಲೀಸ್ ಅಧಿಕಾರಿಯಾಗಿದ್ದರೆ ಶಿಸ್ತು ಮತ್ತು ನಡವಳಿಕೆ ಅತ್ಯಂತ ಮುಖ್ಯ ಎಂದು ನೆಟ್ಟಿಗರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಈ ನಡುವೆ ಈ ವ್ಯಕ್ತಿಯ ಗುರುತು ಮತ್ತು ಪೊಲೀಸ್ ಅಧಿಕಾರಿಯಾಗಿರುವುದರ ಕುರಿತು ತನಿಖೆ ನಡೆಸಿ, ಕಠಿಣ ಕ್ರಮ ಕೈಗೊಳ್ಳಬೇಕು ಎಂದು KSRTC ಸಿಬ್ಬಂದಿ ಹಾಗೂ ಸಾರ್ವಜನಿಕರು ಒತ್ತಾಯಿಸಿದ್ದಾರೆ