ಜಿ ಜನಾರ್ದನ ರೆಡ್ಡಿ 
ರಾಜ್ಯ

ಬಳ್ಳಾರಿ ಫೈರಿಂಗ್: ಸಿದ್ದರಾಮಯ್ಯ, ಅಮಿತ್ ಶಾಗೆ ಪ್ರತ್ಯೇಕ ಪತ್ರ; ಝೆಡ್ ಶ್ರೇಣಿ ಭದ್ರತೆ ಕೋರಿದ ಜನಾರ್ದನ ರೆಡ್ಡಿ!

ಸ್ಥಳೀಯ ಪೊಲೀಸರ ನಿಷ್ಕ್ರಿಯತೆ ಮತ್ತು ನಿರ್ಲಕ್ಷ್ಯವೇ ಘಟನೆಗೆ ಕಾರಣ ಎಂದು ನೇರ ಆರೋಪ ಮಾಡಿರುವ ಅವರು, ತಮ್ಮ ಜೀವಕ್ಕೆ ಬೆದರಿಕೆ 'ಸಾಧ್ಯವಾದಷ್ಟು ಗರಿಷ್ಠ ಮಟ್ಟ' ತಲುಪಿದೆ ಎಂದು ದೂರಿದ್ದಾರೆ.

ಬೆಂಗಳೂರು: ಬಳ್ಳಾರಿಯಲ್ಲಿ ತಮ್ಮ ಮೇಲೆ 'ಪೂರ್ವ ಯೋಜಿತ ಹತ್ಯೆ ಯತ್ನ' ನಡೆದಿದೆ ಎಂದು ಆರೋಪಿಸಿರುವ ಬಿಜೆಪಿ ಶಾಸಕ ಜಿ ಜನಾರ್ದನ ರೆಡ್ಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪ್ರತ್ಯೇಕ ಪತ್ರಗಳನ್ನು ಬರೆದಿದ್ದು, ತಮಗೆ ತಕ್ಷಣವೇ ಝಡ್ ಶ್ರೇಣಿಯ ಭದ್ರತೆ ನೀಡಬೇಕೆಂದು ಒತ್ತಾಯಿಸಿದ್ದಾರೆ.

ಜನವರಿ 1 ರಂದು ವಾಲ್ಮೀಕಿ ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕಾಗಿ ಬ್ಯಾನರ್ ಅಳವಡಿಸುವ ವಿಚಾರವಾಗಿ ನಡೆದ ಗಲಾಟೆಯು ವಿಕೋಪಕ್ಕೆ ತಿರುಗಿ ಘರ್ಷಣೆ ಭುಗಿಲೆದ್ದಿತ್ತು. ಈ ವಿಚಾರವನ್ನು ಉಲ್ಲೇಖಿಸಿರುವ ಅವರು, 'ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ' ಎಂದು ದೂರಿದ್ದಾರೆ.

ಕಾಂಗ್ರೆಸ್ ಶಾಸಕ ನಾರಾ ಭರತ್ ರೆಡ್ಡಿ ಆಪ್ತ ಸತೀಶ್ ರೆಡ್ಡಿ ಅವರ ಖಾಸಗಿ ಗನ್ ಮ್ಯಾನ್ ನಡೆಸಿದ ಫೈರಿಂಗ್‌ನಲ್ಲಿ ಕಾಂಗ್ರೆಸ್ ಕಾರ್ಯಕರ್ತ ಸಾವಿಗೀಡಾಗಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಜನಾರ್ದನ ರೆಡ್ಡಿ ಸೇರಿದಂತೆ ಇತರ 11 ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಶನಿವಾರ ಮುಖ್ಯಮಂತ್ರಿಗೆ ಬರೆದ ಪತ್ರದಲ್ಲಿ, ಹೊಸ ವರ್ಷದ ದಿನದಂದು ತಮ್ಮ ಬಳ್ಳಾರಿ ನಿವಾಸದ ಮೇಲೆ ನಡೆದ ದಾಳಿ 'ಸಾಮಾನ್ಯ ರಾಜಕೀಯ ಘರ್ಷಣೆಯಲ್ಲ, ಬದಲಾಗಿ ಬಳ್ಳಾರಿ ಕಾಂಗ್ರೆಸ್ ಶಾಸಕ ನಾರಾ ಭರತ್ ರೆಡ್ಡಿ ಮತ್ತು ಅವರ ಸಹಚರರು ನಡೆಸಿದ್ದೆಂದು ಹೇಳಲಾದ ಪೂರ್ವ ಯೋಜಿತ ಮತ್ತು ವ್ಯವಸ್ಥಿತ ಹತ್ಯೆ ಯತ್ನ' ಎಂದು ರೆಡ್ಡಿ ಹೇಳಿಕೊಂಡಿದ್ದಾರೆ.

ಸ್ಥಳೀಯ ಪೊಲೀಸರ ನಿಷ್ಕ್ರಿಯತೆ ಮತ್ತು ನಿರ್ಲಕ್ಷ್ಯವೇ ಘಟನೆಗೆ ಕಾರಣ ಎಂದು ನೇರ ಆರೋಪ ಮಾಡಿರುವ ಅವರು, ತಮ್ಮ ಜೀವಕ್ಕೆ ಬೆದರಿಕೆ 'ಸಾಧ್ಯವಾದಷ್ಟು ಗರಿಷ್ಠ ಮಟ್ಟ' ತಲುಪಿದೆ ಎಂದು ದೂರಿದ್ದಾರೆ.

ಮಧ್ಯಾಹ್ನ 2 ಗಂಟೆ ಸುಮಾರಿಗೆ ಭರತ್ ರೆಡ್ಡಿ ಅವರ ಬೆಂಬಲಿಗರು ತಮ್ಮ ಮನೆಯ ಬೇಲಿ ಪ್ರದೇಶದೊಳಗೆ ಅಕ್ರಮವಾಗಿ ಬ್ಯಾನರ್‌ಗಳನ್ನು ನಿರ್ಮಿಸಲು ಪ್ರಯತ್ನಿಸಿದರು ಮತ್ತು ಪೊಲೀಸರ ಮಧ್ಯಪ್ರವೇಶದ ನಂತರ ಅವರನ್ನು ಅಲ್ಲಿಂದ ಚದುರಿಸಲಾಯಿತು ಎಂದು ರೆಡ್ಡಿ ಹೇಳಿದರು.

ಸಂಜೆ 5.30 ರ ಸುಮಾರಿಗೆ, 'ಭರತ್ ರೆಡ್ಡಿಯವರ ಆಪ್ತ ಸಹಾಯಕ ಸತೀಶ್ ರೆಡ್ಡಿ, 40-50 ಶಸ್ತ್ರಸಜ್ಜಿತ ವ್ಯಕ್ತಿಗಳೊಂದಿಗೆ, ಬಾಟಲಿಗಳು, ಕಲ್ಲುಗಳು, ದೊಣ್ಣೆಗಳು ಮತ್ತು ಮಾರಕ ಆಯುಧಗಳನ್ನು ಹಿಡಿದು ನಮ್ಮ ಆವರಣಕ್ಕೆ ಅತಿಕ್ರಮಣ ಮಾಡಿ, ಆವರಣದೊಳಗೆ ಕುಳಿತು ಬಹಿರಂಗವಾಗಿ ಬೆದರಿಕೆ ಹಾಕಿದ್ದಾರೆ. ಆದರೆ, ಪೊಲೀಸರು ಮೂಕ ಪ್ರೇಕ್ಷಕರಾಗಿದ್ದರು. ತಾನು ಗಂಗಾವತಿಯಿಂದ ಹಿಂತಿರುಗಿದಾಗ ಸಂಜೆ 7 ಗಂಟೆ ಸುಮಾರಿಗೆ ಹಿಂಸಾಚಾರ ಹೆಚ್ಚಾಯಿತು ಎಂದು ಆರೋಪಿಸಿದ್ದಾರೆ.

ಶಾಸಕ ನಾರಾ ಭರತ್ ರೆಡ್ಡಿ ಅವರ ಸೂಚನೆಯ ಮೇರೆಗೆ ಸತೀಶ್ ರೆಡ್ಡಿ ಮತ್ತು ಅವರ ಜನರು ನೇರ ದಾಳಿ ನಡೆಸಿದರು. ಈ ಸಮಯದಲ್ಲಿ ಖಾಸಗಿ ಬಂದೂಕುಧಾರಿಯೊಬ್ಬರು ತಾನು ಮತ್ತು ತನ್ನ ಮನೆಯನ್ನು ಗುರಿಯಾಗಿಸಿಕೊಂಡು ಸುಮಾರು ಎಂಟು ಸುತ್ತು ಗುಂಡು ಹಾರಿಸಿದರು. ದೇವರ ದಯೆ ಮತ್ತು ಸಂಪೂರ್ಣ ಅದೃಷ್ಟದಿಂದ, ನಾನು ಸ್ವಲ್ಪದರಲ್ಲೇ ಸಾವಿನಿಂದ ಪಾರಾಗಿದ್ದೇನೆ. ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಲು ವಿಫಲರಾದರು ಎಂದಿದ್ದಾರೆ.

ರಾತ್ರಿ 9 ಗಂಟೆ ಸುಮಾರಿಗೆ, ಭರತ್ ರೆಡ್ಡಿ ಸ್ವತಃ ನೂರಾರು ಬೆಂಬಲಿಗರೊಂದಿಗೆ ಕೋಲುಗಳು, ಕಲ್ಲು ಮತ್ತು ಪೆಟ್ರೋಲ್ ಬಾಂಬ್‌ಗಳೊಂದಿಗೆ ಎಸ್‌ಪಿ ವೃತ್ತದ ಬಳಿ ಬಂದರು. ಇದು 'ಭಯೋತ್ಪಾದನಾ ಶೈಲಿಯ ದಾಳಿಯಾಗಿತ್ತು'. ಘಟನೆಯ ಸಮಯದಲ್ಲಿ, ಬಂದೂಕುಧಾರಿ ವಿವೇಚನಾರಹಿತವಾಗಿ ಗುಂಡು ಹಾರಿಸಿದ್ದಕ್ಕೆ ರಾಜಶೇಖರ್ ಸಾವಿಗೀಡಾದರು. ನಂತರ ಪೊಲೀಸರು ಅಶ್ರುವಾಯು, ಗಾಳಿಯಲ್ಲಿ ಗುಂಡು ಹಾರಿಸಿದರು ಮತ್ತು ಕಾನೂನು ಸುವ್ಯವಸ್ಥೆಯನ್ನು ಪುನಃಸ್ಥಾಪಿಸಲು ಲಾಠಿ ಚಾರ್ಜ್ ನಡೆಸಿದರು.

ರೆಡ್ಡಿ ತಮ್ಮ ಪತ್ರದಲ್ಲಿ ತಮಗೆ ಮತ್ತು ತಮ್ಮ ಕುಟುಂಬಕ್ಕೆ 'ಝಡ್' ಶ್ರೇಣಿಯ ಅಥವಾ ಅದಕ್ಕೆ ಸಮಾನವಾದ ಉನ್ನತ ಮಟ್ಟದ ಪೊಲೀಸ್ ಭದ್ರತೆಯನ್ನು ತಕ್ಷಣದಿಂದಲೇ ಒದಗಿಸಬೇಕು. ಭರತ್ ರೆಡ್ಡಿ, ಸತೀಶ್ ರೆಡ್ಡಿ ಮತ್ತು ಅವರ ಸಹಚರರ ವಿರುದ್ಧ ಕೊಲೆ ಪ್ರಕರಣಗಳನ್ನು ದಾಖಲಿಸಬೇಕು ಮತ್ತು ಕರ್ತವ್ಯ ಲೋಪ ಎಸಗಿದ್ದಕ್ಕಾಗಿ ಪೊಲೀಸ್ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಕೋರಿದ್ದಾರೆ.

ಈ ಘಟನೆಯನ್ನು ಕರ್ನಾಟಕದಲ್ಲಿ 'ಜಂಗಲ್ ರಾಜ್'ನ ಸಾಕ್ಷಿ ಎಂದು ಕರೆದ ರೆಡ್ಡಿ, ಭದ್ರತೆಯ ಕೊರತೆಯಿಂದಾಗಿ ತನಗೆ ಅಥವಾ ತನ್ನ ಕುಟುಂಬಕ್ಕೆ ಹೆಚ್ಚಿನ ಹಾನಿ ಸಂಭವಿಸಿದರೆ, ರಾಜ್ಯ ಸರ್ಕಾರವೇ ನೇರ ಹೊಣೆ ಎಂದು ಎಚ್ಚರಿಸಿದರು.

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪ್ರತ್ಯೇಕ ಮನವಿ ಸಲ್ಲಿಸಿದ ರೆಡ್ಡಿ, ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಭದ್ರತೆ ಒದಗಿಸುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿ ಕೇಂದ್ರ ಪಡೆಗಳ ಮೂಲಕ ಭದ್ರತೆಯನ್ನು ಕೋರಿದ್ದಾರೆ.

ಈ ದಾಳಿ ರಾಜಕೀಯ ಪ್ರೇರಿತವಾಗಿದ್ದು, ಬಿಜೆಪಿ ಪರ ರಾಜ್ಯದಾದ್ಯಂತ ಪ್ರಚಾರ ಆರಂಭಿಸಿರುವುದು ಕಾಂಗ್ರೆಸ್ ನಾಯಕತ್ವವನ್ನು ಆತಂಕಕ್ಕೀಡು ಮಾಡಿದೆ ಎಂದು ಹೇಳಿದ್ದಾರೆ.

ಜನವರಿ 1 ರಂದು ನಡೆದ ಹಿಂಸಾತ್ಮಕ ಘರ್ಷಣೆಯ ನಂತರ, ಕೇಂದ್ರ ಸಚಿವ ವಿ ಸೋಮಣ್ಣ, ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್ ಅಶೋಕ ಮತ್ತು ಛಲವಾದಿ ನಾರಾಯಣಸ್ವಾಮಿ ಸೇರಿದಂತೆ ಬಿಜೆಪಿ ನಾಯಕರ ತಂಡವು ಜನಾರ್ದನ ರೆಡ್ಡಿ ಅವರನ್ನು ಬಳ್ಳಾರಿಯಲ್ಲಿರುವ ಅವರ ನಿವಾಸದಲ್ಲಿ ಭೇಟಿ ಮಾಡಲು ಯೋಜಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಭಾರತಕ್ಕೆ ಬರುತ್ತಿದ್ದ ಸರಕು ಹಡಗಿನ ಮೇಲೆ ದಾಳಿ- ಹೊಣೆ ಹೊತ್ತ ಇರಾನ್; ಭಾರತದ ಪ್ರತಿಕ್ರಿಯೆ ಏನು?

ತೈಲ ಪೂರೈಕೆಗೆ ರಿಯಾಯಿತಿ ಸ್ಥಗಿತ ಬೆನ್ನಲ್ಲೇ ಎಚ್ಚೆತ್ತ ಭಾರತ; ರಷ್ಯಾ ವಿದೇಶಾಂಗ ಸಚಿವರಿಗೆ ಜೈಶಂಕರ್ ದೂರವಾಣಿ ಕರೆ; ಮಹತ್ವದ ಚರ್ಚೆ!

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧದ ಅವಿಶ್ವಾಸ ನಿರ್ಣಯಕ್ಕೆ ಸೋಲು; ಪ್ರತಿಪಕ್ಷಗಳಿಗೆ ಮುಖಭಂಗ

IPL 2026: ಬೆಂಗಳೂರಿನ ಚಿನ್ನಸ್ವಾಮಿಯಲ್ಲಿ ಉದ್ಘಾಟನಾ ಪಂದ್ಯ; ಮಾರ್ಚ್ 28 ರಂದು RCB vs SRH

'ರಕ್ಷಿತ್ ಶೆಟ್ಟಿ-ರಶ್ಮಿಕಾ ನಿಶ್ಚಿತಾರ್ಥ ಮುರಿದುಬೀಳಲು ಇದೇ ಕಾರಣ': ತಾಯಿ ಸುಮನ್ ಮಂದಣ್ಣರದ್ದು ಎನ್ನಲಾದ ಆಡಿಯೋ ವೈರಲ್!

SCROLL FOR NEXT