ಬೆಂಗಳೂರು: ಕರ್ನಾಟಕ ಹಾಲು ಮಹಾ ಮಂಡಳದ (ಕೆಎಂಎಫ್)ಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಸುಮಾರು 10 ಜನರಿಗೆ ಒಟ್ಟು ರೂ.50 ಲಕ್ಷ ಹಣ ವಂಚಿಸಿರುವ ಘಟನೆಯೊಂದು ಬೆಳಕಿಗೆ ಬಂದಿದೆ.
ವಂಚನೆ ಸಂಬಂಧ ಆರ್ಟಿ ನಗರ ನಿವಾಸಿ ಕರಿಗೌಡ ಎಸ್. ಪಾಟೀಲ್ (60) ಎಂಬುವವರು ಮಲ್ಲೇಶ್ವರಂ ಪೊಲೀಸ್ ಠಾಣೆಯಲ್ಲಿ ಎನ್. ಕೃಷ್ಣನ್ ಹಾಗೂ ನಾಗರಾಜ್ ಎಂಬವರ ವಿರುದ್ಧ ದೂರು ದಾಖಲಿಸಿದ್ದಾರೆ.
2022ರಲ್ಲಿ ಮಲ್ಲೇಶ್ವರ ಪಾಕಶಾಲಾ ಹೋಟೆಲ್ನಲ್ಲಿ ಗೋಪಿ ಎಂಬುವವರು ಎನ್.ಕೃಷ್ಣನ್ ಅವರನ್ನು ಪರಿಚಯಿಸಿದ್ದರು. ಕೃಷ್ಣನ್ ಅವರು ತಾನು ಕೆಎಎಸ್ ಅಧಿಕಾರಿಯಾಗಿದ್ದು, ಕೆಎಂಎಫ್ನಲ್ಲಿ ನಿರ್ದೇಶಕನಾಗಿ ಕೆಲಸ ಮಾಡುತ್ತಿರುವುದಾಗಿ ಹೇಳಿಕೊಂಡಿದ್ದರು.
ಅದೇ ಸಂದರ್ಭದಲ್ಲಿ ಆರೋಪಿ ನಾಗರಾಜ್ ಕೂಡ ತಾನು ಉನ್ನತ ಹುದ್ದೆಯಲ್ಲಿ ಇರುವುದಾಗಿ ಹೇಳಿ ನಕಲಿ ಗುರುತಿನ ಚೀಟಿ ತೋರಿಸಿದ್ದರು. ಕೆಎಂಎಫ್ನಲ್ಲಿ 25 ಸರ್ಕಾರಿ ಹುದ್ದೆಗಳಿದ್ದು, ಉದ್ಯೋಗಿಗಳ ಆಯ್ಕೆ ಅಧಿಕಾರ ನಮಗಿದೆ. ಆಯ್ಕೆ ಮಾಡಲು ಪರೀಕ್ಷೆ ಅಥವಾ ಸಂದರ್ಶನದ ಅಗತ್ಯ ಇಲ್ಲ. ಪ್ರತಿ ಅಭ್ಯರ್ಥಿ ರೂ.10 ಲಕ್ಷ ಸರ್ಕಾರಿ ಶುಲ್ಕ ಪಾವತಿಸಿದರೆ ಮೂರು ತಿಂಗಳಲ್ಲಿ ನೇಮಕಾತಿ ಪತ್ರ ನೀಡಲಾಗುವುದು ಎಂಬುದಾಗಿ ನಂಬಿಸಿದ್ದರು ಎಂದು ದೂರಿನಲ್ಲಿ ಹೇಳಿಕೊಂಡಿದ್ದಾರೆ.
ಅಭ್ಯರ್ಥಿಗಳಾದ ವಿಜಯೇಂದ್ರ ಎಸ್. ಪಾಟೀಲ, ಜಿ.ಡಿ.ಮಧು, ಎಸ್.ಅನಿತಾ, ಪಿ.ಸೂರಜ್, ಎಂ.ಅಕ್ಷಯ್ ನಾಯಕ್ ಸೇರಿದಂತೆ 10 ಅಭ್ಯರ್ಥಿಗಳ ಜೊತೆಗೆ ಆರೋಪಿಗಳು ಮಾತುಕತೆ ನಡೆಸಿದ್ದರು. 2022ರ ಡಿಸೆಂಬರ್ನಿಂದ 2023ರ ಡಿಸೆಂಬರ್ ವರೆಗೆ ಬ್ಯಾಂಕ್ ವರ್ಗಾವಣೆಯ ಮೂಲಕ ರೂ.36 ಲಕ್ಷ ಹಾಗೂ ನಗದು ರೂಪದಲ್ಲಿ ರೂ.14 ಲಕ್ಷವನ್ನು ಆರೋಪಿಗಳಿಗೆ ನೀಡಲಾಗಿತ್ತು. 2024ರ ಮಾರ್ಚ್ನಲ್ಲಿ ಅಭ್ಯರ್ಥಿಗಳು ಹಾಗೂ ಆರೋಪಿಗಳು ಒಪ್ಪಂದದ ಪತ್ರ ಮಾಡಿಕೊಂಡಿದ್ದರು.
ಹಣ ಪಾವತಿಸಿದ ವಿವರ ಹಾಗೂ ಕೆಲಸ ಸಿಗದಿದ್ದರೆ ಹಣವನ್ನು ವಾಪಸ್ ಕೊಡುವುದಾಗಿ ಪತ್ರದಲ್ಲಿ ಉಲ್ಲೇಖಿಸಲಾಗಿತ್ತು. ಅಲ್ಲದೆ, ಆರೋಪಿಗಳು, ಅಭ್ಯರ್ಥಿಗಳಿಗೆ ಚೆಕ್ ಸಹ ನೀಡಿದ್ದರು. ಕೆಲವು ದಿನಗಳು ಕಳೆದ ಮೇಲೆ ಮೈಸೂರಿನಲ್ಲಿ ಸಂದರ್ಶನ ನಡೆಯಲಿದೆ ಎಂದು ಅಭ್ಯರ್ಥಿಗಳಿಗೆ ಇ–ಮೇಲ್ ಮೂಲಕ ಸಂದೇಶ ಕಳಹಿಸಲಾಗಿತ್ತು. ಬಳಿಕ ಸರಕಾರ ಬದಲಾಗಿದ್ದು, ಮತ್ತಷ್ಟು ಹಣ ನೀಡುವಂತೆ ಬೇಡಿಕೆಯಿಡ ತೊಡಗಿದ್ದರು.
2024ರಲ್ಲಿಯೇ ಮೋಸ ಹೋಗಿರುವ ಅನುಮಾನ ಬಂದಿತ್ತು ಆದರೆ, ಆರೋಪಿಗಳು ಹತ್ತಾರು ಸಬೂಬು ಹೇಳಿ ದಿನಗಳನ್ನು ಮುಂದೂಡಿದ್ದಾರೆ. ಹಣ ವಾಪಸ್ ಕೊಡುವುದಾಗಿಯೂ ತಿಳಿಸಿದ್ದರು.. ಅಂತಿಮವಾಗಿ ಇತ್ತೀಚೆಗೆ ಆರೋಪಿಗಳ ಮೊಬೈಲ್ ಸ್ವಿಚ್ ಆಫ್ ಆಗಿದ್ದರಿಂದ ದೂರು ನೀಡಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ತನಿಖೆ ಕೈಗೊಂಡಿದ್ದಾರೆ.