ಬೆಳಗಾವಿ: ನಾಟಕೀಯ ರೀತಿಯಲ್ಲಿ ನಡೆದ ರಕ್ಷಣಾ ಕಾರ್ಯಾಚರಣೆಯಲ್ಲಿ, ಬೆಳಗಾವಿ ಪೊಲೀಸರು ಕಾಂಬೋಡಿಯಾದಲ್ಲಿ ಸೈಬರ್ ಅಪರಾಧ ಸಿಂಡಿಕೇಟ್ನ ಹಿಡಿತದಿಂದ ಮೂವರು ಯುವಕರನ್ನು ಯಶಸ್ವಿಯಾಗಿ ಬಿಡುಗಡೆ ಮಾಡಿ ಸುರಕ್ಷಿತವಾಗಿ ಮನೆಗೆ ಕರೆತರುವಲ್ಲಿ ಯಶಸ್ವಿಯಾಗಿದ್ದಾರೆ. ಈ ಯುವಕರು ಒಂದು ತಿಂಗಳು ಕ್ರೂರ ರೀತಿಯಲ್ಲಿ ಸೆರೆವಾಸ ಅನುಭವಿಸಿದ್ದರು.
ಯುವಕರಾದ ಆಕಾಶ್ ಕಗನಿಕರ್, ಓಂಕಾರ್ ಲೋಖಂಡೆ ಮತ್ತು ಸಂಸ್ಕಾರ್ ಲೋಖಂಡೆ, ಸೈಬರ್ ವಂಚಕರ ಕೈಯಲ್ಲಿ ನರಕಯಾತನೆ ಅನುಭವಿಸಿದವರು.
ನಡೆದ ಘಟನೆಯೇನು?
ವಿದೇಶದಲ್ಲಿ ಕೈತುಂಬಾ ಸಂಬಳ ಬರುವ ಉದ್ಯೋಗ ಕೊಡಿಸುತ್ತೇವೆ ಎಂಬ ಆಮಿಷಕ್ಕೆ ಮೂವರು ಯುವಕರು ಸಂಘಟಿತ ಮಾನವ ಕಳ್ಳಸಾಗಣೆ ಮತ್ತು ಸೈಬರ್ ಅಪರಾಧ ದಂಧೆಗೆ ಬಲಿಯಾದರು.
ಸಿಇಎನ್ ಪೊಲೀಸ್ ಇನ್ಸ್ಪೆಕ್ಟರ್ ಜೆಎಂ ಕಾಲಿಮಿರ್ಚಿ ಅವರ ಪ್ರಕಾರ, ಯುವಕರಿಗೆ ಆರಂಭದಲ್ಲಿ ಹಾಂಗ್ ಕಾಂಗ್ನಲ್ಲಿ ಮಾಸಿಕ 1 ಲಕ್ಷ ರೂಪಾಯಿ ವೇತನದ ಡೇಟಾ ಎಂಟ್ರಿ ಉದ್ಯೋಗ ಭರವಸೆ ನೀಡಲಾಯಿತು. ಇದನ್ನು ನಂಬಿ, ಅವರು ಬೆಳಗಾವಿ ಮೂಲದ ಏಜೆಂಟ್ ಮೂಲಕ ವಿದೇಶಕ್ಕೆ ಪ್ರಯಾಣ ಬೆಳೆಸಿದರು. ಅವರನ್ನು ಹಾಂಗ್ ಕಾಂಗ್ಗೆ ಕರೆದೊಯ್ಯುವ ಬದಲು, ವಂಚಕರು ಬಲವಂತವಾಗಿ ಕಾಂಬೋಡಿಯಾಕ್ಕೆ ಕಳುಹಿಸಿದರು.
ಅಲ್ಲಿಗೆ ಬಂದ ನಂತರ, ಅವರನ್ನು ಬಂಧಿಸಿ, ಪ್ರತಿದಿನ ವಾಟ್ಸಾಪ್ ಮತ್ತು ಇನ್ಸ್ಟಾಗ್ರಾಮ್ನಂತಹ ವೇದಿಕೆಗಳನ್ನು ಬಳಸಿಕೊಂಡು ಭಾರತೀಯರನ್ನು ಗುರಿಯಾಗಿಸಿಕೊಂಡು ಸೈಬರ್ ವಂಚನೆ ಕಾರ್ಯಾಚರಣೆಗಳನ್ನು ನಡೆಸುವಂತೆ ಒತ್ತಾಯಿಸಲಾಯಿತು. ಕೆಲಸ ಕಾನೂನುಬಾಹಿರ ಎಂದು ಹೇಳಿ ಅವರು ನಿರಾಕರಿಸಿದಾಗ, ಅವರ ಮೇಲೆ ಹಲ್ಲೆ ನಡೆಸಿ, ದೈಹಿಕ ಹಿಂಸೆ ನೀಡಿ ಬೆದರಿಕೆ ಕೂಡ ಹಾಕಲಾಯಿತು.
ಪೊಲೀಸರ ಕಾರ್ಯಾಚರಣೆ
ಈ ಮಧ್ಯೆ ಯುವಕರ ಪೋಷಕರಿಗೆ ಹಠಾತ್ ಸಂಪರ್ಕ ಕಡಿತಗೊಂಡಿತು. ಹಠಾತ್ ಸಂಪರ್ಕ ಕಡಿತದಿಂದ ಗಾಬರಿಗೊಂಡ ಆಕಾಶ್ ಅವರ ಪೋಷಕರು ಮತ್ತು ಲೋಖಂಡೆ ಸಹೋದರರ ಕುಟುಂಬವು ಬೆಳಗಾವಿ ಸಿಇಎನ್ (ಸೈಬರ್, ಆರ್ಥಿಕ ಮತ್ತು ಮಾದಕ ದ್ರವ್ಯ) ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರು. ಪ್ರಕರಣವನ್ನು ತುರ್ತಾಗಿ ಪರಿಗಣಿಸಿ, ಬೆಳಗಾವಿ ಪೊಲೀಸ್ ಆಯುಕ್ತ ಭೂಷಣ್ ಬೋರ್ಸೆ ಕಾಂಬೋಡಿಯಾದಲ್ಲಿರುವ ಭಾರತೀಯ ರಾಯಭಾರ ಕಚೇರಿಗೆ ಮಾಹಿತಿ ನೀಡಿದರು.
ಸಂಘಟಿತ ಕ್ರಮದ ನಂತರ, ಕಾಂಬೋಡಿಯಾ ಪೊಲೀಸರು ಸೈಬರ್ ಅಪರಾಧ ಕೇಂದ್ರದ ಮೇಲೆ ದಾಳಿ ನಡೆಸಿ, ಒತ್ತೆಯಾಳುಗಳಾಗಿ ಇರಿಸಲಾಗಿದ್ದ ಭಾರತ ಮತ್ತು ಇತರ ದೇಶಗಳ ಸುಮಾರು 50 ಯುವಕರನ್ನು ರಕ್ಷಿಸಿದರು. ಈ ಜಾಲವನ್ನು ಬೆಳಗಾವಿಯ ಸುರೇಶ್ ಹುಂದ್ರೆ ಮತ್ತು ಆಸಿಫ್ ಅಲ್ವಾನ್ ಮತ್ತು ಜಾರ್ಖಂಡ್ನ ಅಮಿತ್ ಎಂಬುವವರು ನಡೆಸುತ್ತಿದ್ದರು ಎಂದು ತನಿಖೆಯಿಂದ ತಿಳಿದುಬಂದಿದೆ.
ಕಲಿಮಿರ್ಚಿ ನೇತೃತ್ವದ ತಂಡವು ರಕ್ಷಣಾ ಕಾರ್ಯಾಚರಣೆಯನ್ನು ನಡೆಸಿತು. ಅವರ ನಿರಂತರ ಪ್ರಯತ್ನಗಳು ಯುವಕರನ್ನು ರಕ್ಷಿಸುವಲ್ಲಿ ನಿರ್ಣಾಯಕವಾಗಿವೆ. ಪ್ರಕರಣವನ್ನು ಬೆಳಗಾವಿ ಸಿಇಎನ್ ಪೊಲೀಸ್ ಠಾಣೆಯಲ್ಲಿ ದಾಖಲಿಸಿ ತನಿಖೆ ನಡೆಯುತ್ತಿದೆ.
ತಲೆಮರೆಸಿಕೊಂಡಿರುವ ಆರೋಪಿಗಳನ್ನು ಪತ್ತೆಹಚ್ಚಲು ಮತ್ತು ಬಂಧಿಸಲು ವಿಶೇಷ ತಂಡಗಳನ್ನು ರಚಿಸಲಾಗಿದೆ. ವಿದೇಶಗಳಲ್ಲಿ ಉದ್ಯೋಗಾವಕಾಶಗಳನ್ನು ಸಂಪೂರ್ಣವಾಗಿ ಪರಿಶೀಲಿಸುವಂತೆ ಪೊಲೀಸರು ಯುವಕರು ಮತ್ತು ಉದ್ಯೋಗಾಕಾಂಕ್ಷಿಗಳಿಗೆ ಎಚ್ಚರಿಕೆ ನೀಡಿದ್ದಾರೆ. ಸೈಬರ್ ಅಪರಾಧ ತಂಡಗಳು ವಿದೇಶಗಳಲ್ಲಿ ಮುಗ್ಧರನ್ನು ಬಲೆಗೆ ಬೀಳಿಸಲು ಮತ್ತು ಶೋಷಿಸಲು ನಕಲಿ ಉದ್ಯೋಗ ಭರವಸೆಗಳನ್ನು ಹೆಚ್ಚಾಗಿ ಬಳಸುತ್ತಿವೆ ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.